ಕೆಳಭಾಗದಿಂದ ನೀರಿನ ಜುಳುಜುಳು ಶಬ್ದ ಕೇಳಿ ಬರುತ್ತಿರುವುದರಿಂದ ಕೌತುಕ ಉಂಟಾಗಿದೆ.

ಭಟ್ಕಳ(ಆ.12):  ನಿರಂತರ ಮಳೆಯಿಂದಾಗಿ ತಾಲೂಕಿನ ಕಟಗಾರಕೊಪ್ಪದ ಹೊಸ್ಮಕ್ಕಿಗೆ ಹೋಗುವ ರಸ್ತೆಯ ನಡುವೆ ಸುಮಾರು 60 ಅಡಿ ಆಳದ ಬೃಹತ್‌ ಗಾತ್ರದ ಬಾವಿ ನಿರ್ಮಾಣವಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಹೊಸ್ಮಕ್ಕಿಯ ಮಣ್ಣಿನ ಕಚ್ಚಾ ರಸ್ತೆಯಲ್ಲಿ ಕಳೆದ ಮೂರು ದಿನಗಳ ಹಿಂದೆ ಸಣ್ಣ ಹೊಂಡ ಬಿದ್ದಿತ್ತು. ಕ್ರಮೇಣ ಇದು ಬೃಹತ್‌ ಗಾತ್ರ ತಾಳಿದ್ದು, ಸುಮಾರು 15 ಅಡಿ ಅಗಲವಿದೆ. ಕೆಳಭಾಗದಿಂದ ನೀರಿನ ಜುಳುಜುಳು ಶಬ್ದ ಕೇಳಿ ಬರುತ್ತಿರುವುದರಿಂದ ಕೌತುಕ ಉಂಟಾಗಿದೆ.

ಭಾರೀ ಮಳೆಗೆ ರಸ್ತೆಯಲ್ಲಿ ದಿಢೀರ್‌ ಬೃಹತ್‌ ಗಾತ್ರದ ಬಾವಿ ತನ್ನಷ್ಟಕ್ಕೇ ನಿರ್ಮಾಣವಾಗಿರುವುದು ಸುತ್ತಮುತ್ತಲಿನ ಜನರಲ್ಲೂ ಅಚ್ಚರಿ, ಆತಂಕ ತಂದಿದೆ. ರಸ್ತೆ ಮಧ್ಯದಲ್ಲೇ ಬಾವಿ ನಿರ್ಮಾಣವಾಗಿರುವುದು ವಾಹನ ಸಂಚಾರಕ್ಕೂ ತೊಂದರೆಯಾಗಿದೆ.

UTTARA KANNADA; ಮಿರ್ಜಾನ್ ಕೋಟೆಯಲ್ಲಿ ತ್ರಿವರ್ಣ ಧ್ವಜ

ರಸ್ತೆಯಲ್ಲಿ ದಿಢೀರ್‌ ನಿರ್ಮಾಣವಾದ ಬಾವಿಯ ಕುರಿತು ಒಬ್ಬೊಬ್ಬರು ಒಂದೊಂದು ರೀತಿಯ ವ್ಯಾಖ್ಯಾನ ಮಾಡುತ್ತಿದ್ದಾರೆ. ಕೆಲವರು ಇದೊಂದು ಸುರಂಗ ಮಾರ್ಗ ಎಂದರೆ ಇನ್ನೂ ಕೆಲವರು ಸಿಡಿಲು ಬಿದ್ದು ರಸ್ತೆಯಲ್ಲಿ ಆಳದ ಹೊಂಡ ಆಗಿರಬಹುದು ಎಂದು ಹೇಳುತ್ತಿದ್ದಾರೆ.

ಕಟಗಾರಕೊಪ್ಪದ ಹೊಸ್ಮಕ್ಕಿ ರಸ್ತೆಯಲ್ಲಿ ಕಳೆದ ಮೂರು ದಿನಗಳ ಹಿಂದೆ ಇದ್ದಕ್ಕಿದ್ದಂತೆ ದೊಡ್ಡ ಹೊಂಡ ಬಿದ್ದಿದೆ. ಕೆಳಭಾಗದಲ್ಲಿ ನೀರಿನ ಶಬ್ದ ಕೇಳಿಬರುತ್ತಿದ್ದು, ಸ್ಥಳೀಯರಲ್ಲಿ ಒಂದು ಕಡೆ ಕುತೂಹಲ, ಮತ್ತೊಂದು ಕಡೆ ಆತಂಕವೂ ಉಂಟಾಗಿದೆ ಅಂತ ಹೊಸ್ಮಕ್ಕಿಯ ವಿಷ್ಣುಮೂರ್ತಿ ಹೆಗಡೆ ತಿಳಿಸಿದ್ದಾರೆ. 

ಅತಿಯಾದ ಮಳೆಯಿಂದಾಗಿ ಮನೆ ಗೋಡೆ ಕುಸಿತ

ಜೋಯಿಡಾ: ಜೋಯಿಡಾ ತಾಲೂಕಿನ ರಾಮನಗರ ಗ್ರಾಪಂ ವ್ಯಾಪ್ತಿಯ ವಾರ್ಡ್‌ ನಂ. 3ರ ಫಾತೀಮಾ ಮುತ್ತನವರ ಎಂಬವರ ಮನೆಯ ಗೋಡೆ ಅತಿಯಾದ ಮಳೆಯಿಂದಾಗಿ ಕುಸಿದಿದೆ.

Uttara Kannada: ಚಂಡಮಾರುತದಿಂದ ಮೀನುಗಾರಿಕೆ ಮತ್ತೆ ಸ್ಥಗಿತ!

ಜೋಯಿಡಾ ತಾಲೂಕಿನಾದ್ಯಂತ ಕಳೆದ ಒಂದು ವಾರದಿಂದ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಅಡಕೆ ತೋಟಗಳಿಗೆ, ಕೃಷಿ ಚಟುವಟಿಕೆಗೆ ಸಮಸ್ಯೆ ಉಂಟಾಗಿದೆ. ಅತಿಯಾದ ಮಳೆಯಿಂದಾಗಿ ಗುಡ್ಡ ಕುಸಿತ, ವಿದ್ಯುತ್‌ ಸಮಸ್ಯೆ, ನೆಟ್‌ವರ್ಕ್ ಸಮಸ್ಯೆ ಹಾಗೂ ಕೆಲವು ಮನೆಯ ಮೇಲೆ ಮರಗಳು ಬಿದ್ದು ಅನಾಹುತ ಉಂಟಾಗಿವೆ.

ಮಳೆ, ಗಾಳಿಯಿಂದ ಮನೆ ಕಳೆದುಕೊಂಡವರಿಗೆ ಮತ್ತು ನಿರಾಶ್ರಿತರಿಗೆ ಕೂಡಲೇ ತಾಲೂಕು ಆಡಳಿತದ ವತಿಯಿಂದ ಸರಿಯಾದ ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.