ಶಿವಮೊಗ್ಗದ ಜಿಲ್ಲೆಯ ಸಾಗರ, ಹೊಸನಗರ ಹಾಗೂ ಸೊರಬ ಈ ಮೂರು ತಾಲೂಕುಗಳಿಗೆ ಅನುಕೂಲವಾಗುವಂತೆ 50 ಕೋಟಿ ರುಪಾಯಿ ವೆಚ್ಚದಲ್ಲಿ ಪವರ್‌ ಗ್ರಿಡ್‌ ನಿರ್ಮಿಸಲಾಗುತ್ತಿದೆ ಎಂದು ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ತಿಳಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ಸಾಗರ(ಮೇ.06): ಸಾಗರ, ಹೊಸನಗರ ಹಾಗೂ ಸೊರಬ ತಾಲೂಕಿನ ಎರಡು ಹೋಬಳಿಗಳಿಗೆ ಸಮರ್ಪಕ ವಿದ್ಯುತ್‌ ಪೂರೈಕೆ ಹಿನ್ನೆಲೆಯಲ್ಲಿ ಪವರ್‌ ಗ್ರಿಡ್‌ ನಿರ್ಮಿಸಲಾಗುತ್ತಿದೆ ಎಂದು ಶಾಸಕ ಎಚ್‌. ಹಾಲಪ್ಪ ತಿಳಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಾಲೂಕಿನ ಕಾನುಗೋಡು-ಮಂಚಾಲೆಯ ಸರ್ವೆ ನಂ. 18ರಲ್ಲಿ ಮೆಸ್ಕಾಂ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ವಿದ್ಯುತ್‌ ಸ್ಥಾವರಕ್ಕೆ ಮಂಗಳವಾರ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಸುಮಾರು 50 ಕೋಟಿ ರು. ವೆಚ್ಚದಲ್ಲಿ ಪವರ್‌ಗ್ರಿಡ್‌ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು. ಪವರ್‌ಗ್ರಿಡ್‌ ಸ್ಥಾಪನೆಗೆ 10 ಎಕರೆ ಜಮೀನು ಗುರುತಿಸಿದ್ದು, ಈಗಾಗಲೇ ಹಣ ಮಂಜೂರು ಆಗಿದೆ. ಸುಮಾರು 220 ಕೆ.ವಿ. ವಿದ್ಯುತ್‌ ಇಲ್ಲಿ ಸಂಗ್ರಹ ಮಾಡಲಾಗುತ್ತದೆ ಎಂದು ತಿಳಿಸಿದರು.

ಇಂದು ಅಂತರ್ಜಲ ಚೇತನ ಯೋಜನೆಗೆ ಸಚಿವ ಈಶ್ವರಪ್ಪ ಚಾಲನೆ

ಇಷ್ಟು ವರ್ಷಗಳ ಕಾಲ ಜೋಗದಲ್ಲಿ ವಿದ್ಯುತ್‌ ಉತ್ಪಾದನೆಯಾಗಿ, ಅದು ಬಳ್ಳಿಗಾವಿ ಗ್ರಿಡ್‌ಗೆ ಸರಬರಾಜು ಆಗಿ ಅಲ್ಲಿಂದ ಸಾಗರ, ಹೊಸನಗರ, ಸೊರಬ ತಾಲೂಕಿನ ಎರಡು ಹೋಬಳಿಗೆ ವಿತರಣೆಯಾಗುತ್ತಿತ್ತು. ಇದರಿಂದಾಗಿ ನಮ್ಮ ಭಾಗದಲ್ಲಿ ಪದೇಪದೆ ವಿದ್ಯುತ್‌ ಸಮಸ್ಯೆ ಉಂಟಾಗುತ್ತಿತ್ತು. ಇನ್ನು ಇಲ್ಲಿ ನೂತನ ಪವರ್‌ ಗ್ರಿಡ್‌ನಿಂದ ಮೂರು ತಾಲೂಕಿಗೆ ವಿದ್ಯುತ್‌ ಸರಬರಾಜು ಮಾಡಲಾಗುತ್ತದೆ. ಇನ್ನು ವಿದ್ಯುತ್‌ ಸಮಸ್ಯೆಯಾಗದು ಎಂದರು.

ಉಪವಿಭಾಗಾ​ಧಿಕಾರಿ ಡಾ.ನಾಗರಾಜ್‌ ಎಲ್‌., ತಹಸೀಲ್ದಾರ್‌ ಚಂದ್ರಶೇಖರ ನಾಯ್ಕ್, ಮೆಸ್ಕಾಂ ಕಾರ್ಯಪಾಲಕ ಅಭಿಯಂತರ ವೆಂಕಟೇಶ್‌, ಶಿವಮೊಗ್ಗ ಮೆಸ್ಕಾಂ ಬೃಹತ್‌ ಕಾಮಗಾರಿ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಕುಮಾರಸ್ವಾಮಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಮೋಹನ್‌, ವಿನಯಕುಮಾರ್‌, ಚನ್ನಕೇಶವ್‌, ಪ್ರಮುಖರಾದ ಟಿ.ಡಿ. ಮೇಘರಾಜ್‌, ವಿನಾಯಕರಾವ್‌, ಬಿ.ಟಿ. ರವೀಂದ್ರ ಇನ್ನಿತರರು ಹಾಜರಿದ್ದರು.