ಮಡಿಕೇರಿಗೆ ಪ್ರವಾಸಕ್ಕೆ ತೆರಳುವವರು ಸಿಕ್ಕಸಿಕ್ಕಲ್ಲಿ ಕಸ ಎಸೆಯುವ ಅಭ್ಯಾಸ ಬಿಡಲೇಬೇಕು. ಕಾವೇರಿ ತೀರದಲ್ಲಿ ಕಸ ಎಸೆದವರಿಗೆ ಸುಮಾರು 5 ಸಾವಿರ ದಂಡ ವಿಧಿಸಿದ ಘಟನೆ ನಾಪೋಕ್ಲುವಿನಲ್ಲಿ ನಡೆದಿದೆ.

ಮಡಿಕೇರಿ(ನ.08): ಚೆರಿಯಪರಂಬು ಕಾವೇರಿ ನದಿ ದಡದಲ್ಲಿ ಮಡಿಕೇರಿಯ ಹೋಂಸ್ಟೇವೊಂದರ ತ್ಯಾಜ್ಯಗಳನ್ನು ತಂದು ಬೀಸಾಡುತ್ತಿದ್ದವರಿಗೆ ಗ್ರಾಮ ಪಂಚಾಯಿತಿ ಆಡಳಿತ 5 ಸಾವಿರ ರುಪಾಯಿ ದಂಡ ವಿಧಿಸುವ ಮೂಲಕ ಸ್ವಚ್ಛತೆ ಕಾಪಾಡಲು ಕಠಿಣ ಕ್ರಮಕ್ಕೆ ಮುಂದಾಗಿದೆ.

Add Asianetnews Kannada as a Preferred SourcegooglePreferred

ಮಡಿಕೇರಿಯ ಹೋಂಸ್ಟೇವೊಂದರ ತ್ಯಾಜ್ಯಗಳನ್ನು ದೊಡ್ಡ ದೊಡ್ಡ ಪ್ಲಾಸ್ಟಿಕ್‌ ಚೀಲಗಳಲ್ಲಿ ತುಂಬಿಸಿ ಟಾಟಾ ಏಸ್‌ ವಾಹನದಲ್ಲಿ ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆರಿಯಪರಂಬು ಪಂಚಾಯಿತಿ ಕಸವಿಲೇವಾರಿ ಜಾಗದಲ್ಲಿ ತಂದು ಸುರಿಯಲಾಗುತ್ತಿತ್ತು.

ನೇತ್ರಾವತಿಗೆ ಹಾರಿ ಆತ್ಮಹತ್ಯೆಗೆ ಯತ್ನ: ಒಂದೇ ದಿನ 2 ಬಾರಿ ರಕ್ಷಣೆ

ಈ ಬಗ್ಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ, ಉಪಾಧ್ಯಕ್ಷ ಕಾಳೆಯಂಡ ಸಾಬಾ ತಿಮ್ಮಯ್ಯ ಹಾಗೂ ಪಂಚಾಯಿತಿ ಸಿಬ್ಬಂದಿ ಮತ್ತು ಆರ್‌ಟಿಐ ಕಾರ್ಯಕರ್ತ ಹ್ಯಾರೀಸ್‌ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ತ್ಯಾಜ್ಯವನ್ನು ತಂದು ಬೀಸಾಡುತ್ತಿದ್ದವರ ವಿರುದ್ಧ ನಾಪೋಕ್ಲು ಪೊಲೀಸ್‌ ಠಾಣೆಗೆ ದೂರು ನೀಡಿದರು. ನಂತರ ಸುರಿಯಲಾಗಿದ್ದ ಕಸವನ್ನು ಪುನಃ ವಾಹನಕ್ಕೆ ತುಂಬಿಸಿ ವಾಪಸ್‌ ಕಳುಹಿಸಿದ್ದಲ್ಲದೆ 5 ಸಾವಿರ ರುಪಾಯಿಗಳ ದಂಡವನ್ನು ವಸೂಲಾತಿ ಮಾಡಿದ್ದಾರೆ.

ಇದೇ ರೀತಿ ಕಳೆದೆರಡು ದಿನಗಳ ಹಿಂದೆ ಪಟ್ಟಣದ ಕೋಳಿ ಅಂಗಡಿಯೊಂದರ ತ್ಯಾಜ್ಯಗಳನ್ನು ತಂದು ಸುರಿಯುತ್ತಿದ್ದವರ ವಿರುದ್ದ 2 ಸಾವಿರ ರುಪಾಯಿ ದಂಡವನ್ನು ವಸೂಲಾತಿ ಮಾಡುವ ಮೂಲಕ ಎಲ್ಲೆಂದರಲ್ಲಿ ಕಸ ಸುರಿಯುತ್ತಿರುವವರಿಗೆ ಗ್ರಾಮ ಪಂಚಾಯಿತಿ ಆಡಳಿತ ಎಚ್ಚರಿಕೆಯ ಸಂದೇಶ ರವಾನಿಸಿದೆ.

ವಂಚಿಸಿದ ಯುವಕನ ಬೆನ್ನತ್ತಿ ಬೆಂಗಳೂರಿನಿಂದ ಬೆಳ್ತಂಗಡಿಗೆ ಬಂದ ಯುವತಿ!

ಮಡಿಕೇರಿಯ ಹೋಂಸ್ಟೇವೊಂದರ ತ್ಯಾಜ್ಯವನ್ನು ಪಂಚಾಯಿತಿ ವ್ಯಾಪ್ತಿಯ ಚೆರಿಯಪರಂಬುನಲ್ಲಿ ತಂದು ಸುರಿಯುತ್ತಿದ್ದವರಿಗೆ ಐದು ಸಾವಿರ ರು. ದಂಡ ವಿಧಿಸಲಾಗಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೇ ಎಲ್ಲೆಂದರಲ್ಲಿ ಕಸ ವಿಲೇವಾರಿ ಮಾಡದಂತೆ ಗ್ರಾಮಸ್ಥರಲ್ಲಿ ಅರಿವು ಮೂಡಿಸಲಾಗಿದೆ. ಸ್ಥಳದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಎಲ್ಲೆಂದರಲ್ಲಿ ಕಸ ತಂದು ಸುರಿಯುತ್ತಿರುವವರ ವಿರುದ್ಧ ಗ್ರಾಪಂ ಆಡಳಿತ ಕಠಿಣ ಕ್ರಮ ಕೈಗೊಂಡಿದೆ ಎಂದು ನಾಪೋಕ್ಲು ಗ್ರಾಮ ಪಂಚಾಯಿತಿ ಪಿಡಿಒ ಚೋಂದಕ್ಕಿ ಹೇಳಿದ್ದಾರೆ.

ಕಸವನ್ನು ಚೆರಿಯಪರಂಬುವಿನಲ್ಲಿ ತಂದು ಸುರಿಯಲಾಗುತ್ತಿದ್ದ ಪ್ರಕರಣ ಪತ್ತೆ ಹಚ್ಚಿ ದಂಡ ವಿಧಿಸಿರುವ ಪಂಚಾಯಿತಿಯ ಕ್ರಮ ಸ್ವಾಗತಾರ್ಹವಾಗಿದ್ದು, ಬೇರೆಡೆಯಿಂದ ಕಸವನ್ನು ತಂದು ಪಂಚಾಯಿತಿ ವ್ಯಾಪ್ತಿಯಲ್ಲಿ ಸುರಿಯುತ್ತಿರುವವರಿಗೆ ಇದೊಂದು ಎಚ್ಚರಿಕೆಯ ಕರೆಗಂಟೆಯಾಗಿದೆ ಎಂದು ನಾಪೋಕ್ಲು ಆರ್‌ಟಿಐ ಕಾರ್ಯಕರ್ತ ಹ್ಯಾರೀಸ್‌ ಹೇಳಿದ್ದಾರೆ.