Asianet Suvarna News Asianet Suvarna News

ನೇತ್ರಾವತಿಗೆ ಹಾರಿ ಆತ್ಮಹತ್ಯೆಗೆ ಯತ್ನ: ಒಂದೇ ದಿನ 2 ಬಾರಿ ರಕ್ಷಣೆ

ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಘಟನೆ ನಡೆಯುತ್ತಲೇ ಇದೆ. ಸೇತುವೆಗೆ ತಡೆಗೋಡೆ ನಿರ್ಮಿಸುವ ಬಗ್ಗೆ ಚಿಂತಿಸಿದ್ದರೂ ಈವರೆಗೂ ಕೆಲಸ ನಡೆದಿಲ್ಲ. ಇದೀಗ ವ್ಯಕ್ತಿಯೊಬ್ಬ ಒಂದೇ ದಿನದಲ್ಲಿ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

man saved twice in a day from committing suicide in Netravathi River
Author
Bangalore, First Published Jan 8, 2020, 2:25 PM IST

ಮಂಗಳೂರು(ಜ.08): ನೇತ್ರಾವತಿ ಸೇತುವೆಯಿಂದ ನದಿಗೆ ಹಾರಲು ಯತ್ನಿಸಿದ ವ್ಯಕ್ತಿಯನ್ನು ಸಾರ್ವಜನಿಕರು ಒಂದೇ ದಿನದಲ್ಲಿ ಎರಡು ಬಾರಿ ರಕ್ಷಿಸಿದ ಘಟನೆ ಉಳ್ಳಾಲದಲ್ಲಿ ಮಂಗಳವಾರ ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ನಡೆದಿದೆ.

ಕುತ್ತಾರು ಭಂಡಾರಬೈಲು ನಿವಾಸಿ ಚಂದಪ್ಪ (44) ಆತ್ಮಹತ್ಯೆಗೆ ಯತ್ನಿಸಿದವರು. ಶಾಲಾ ವಾಹನದಲ್ಲಿ ಚಾಲಕನಾಗಿದ್ದ ಚಂದಪ್ಪ ಇತ್ತೀಚೆಗೆ ಮನೆಯಲ್ಲೇ ಇರುತ್ತಿದ್ದರು. ಕುಡಿತದ ಚಟ ಹೊಂದಿರುವ ಅವರು ಮಂಗಳವಾರ ಬೆಳಗ್ಗೆ ನೇತ್ರಾವತಿ ಸೇತುವೆ ಮೇಲೆ ನಿಂತಿದ್ದ ಸಂದರ್ಭ, ಸಂಶಯಗೊಂಡ ಪರಿಚಿತ ಚೆಂಬುಗುಡ್ಡೆ ಗ್ಯಾರೇಜ್‌ ಮಾಲೀಕ ಬಾಲು ಎಂಬವರು ಮನೆಮಂದಿಗೆ ವಿಚಾರ ತಿಳಿಸಿ ತಮ್ಮ ವಾಹನದಲ್ಲಿ ಚಂದಪ್ಪ ಅವರನ್ನು ಮನೆವರೆಗೆ ಬಿಟ್ಟು ಬಂದಿದ್ದರು.

ನೇತ್ರಾವತಿಗೆ ಮತ್ತೊಬ್ಬ ಆಹುತಿ: ಸಿದ್ಧಾಥ್‌ ಹೆಗ್ಡೆ ಆತ್ಮಹತ್ಯೆ ಸ್ಥಳದಲ್ಲಿಯೇ ನದಿಗೆ ಹಾರಿದ ಯುವಕ

ಇದಾದ ಕೆಲವೇ ಗಂಟೆಗಳಲ್ಲಿ ಮತ್ತೆ ಚಂದಪ್ಪ ಅವರು ಸೇತುವೆಗೆ ವಿಷದ ಬಾಟಲಿ ಹಿಡಿದುಕೊಂಡು ಆಗಮಿಸಿದ್ದರು. ಕುಡಿತದ ಅಮಲಿನಲ್ಲಿ ವಿಷದ ಬಾಟಲಿಯ ಮುಚ್ಚಳ ತೆಗೆಯಲು ಸಾಧ್ಯವಾಗದೆ ಮತ್ತೆ ನೇತ್ರಾವತಿ ಸೇತುವೆಯಿಂದ ಹಾರಲು ಒಂದು ಕಾಲು ಮೇಲಿಟ್ಟಿದ್ದರು.

ಇದನ್ನು ಗಮನಿಸಿದ ಅವರ ಊರಿನವರೇ ಆದ ರಿಕ್ಷಾ ಚಾಲಕ ಕುತ್ತಾರಿನ ಭರತ್‌ ಹಾಗೂ ರಕ್ಷಿತ್‌ ಎಂಬವರು ಹಿಡಿದು ರಕ್ಷಿಸಿದ್ದಾರೆ. ಬಳಿಕ ಮತ್ತೆ ತಮ್ಮ ರಿಕ್ಷಾದಲ್ಲಿ ಚಂದಪ್ಪ ಅವರನ್ನು ಮನೆಗೆ ಬಿಟ್ಟಿದ್ದಾರೆ. ಚಂದಪ್ಪ ಅವರ ಪುತ್ರ ವಿದೇಶದಲ್ಲಿದ್ದಾರೆ. ಪತ್ನಿ ಮತ್ತು ಇವರು ಮಾತ್ರ ಇಲ್ಲಿ ವಾಸವಿದ್ದಾರೆ.

ಸಿದ್ಧಾರ್ಥ ಹೆಗ್ಡೆ ಆತ್ಮಹತ್ಯೆ ಜಾಗದಲ್ಲಿಯೇ ಮತ್ತೋರ್ವ ವ್ಯಕ್ತಿ ಆತ್ಮಹತ್ಯೆ ಯತ್ನ

Follow Us:
Download App:
  • android
  • ios