Asianet Suvarna News Asianet Suvarna News

ಒಂದೇ ತಾಯಿ ಹೆತ್ತ ಐವರು ಮಕ್ಕಳಲ್ಲಿಯೂ ಅಂಧತೆ

ಎಲ್ಲ ಸರಿಯಿದ್ದವ ಕುಟುಂಬಗಳಲ್ಲೇ ಸಮಸ್ಯೆಗಳು ತಾಂಡವವಾಡುತ್ತವೆ. ಆದರೆ ನಾಲ್ಕೈದು ಮಕ್ಕಳೂ ಅಂಧರಾದರೆ ಅವರ ಕುಟುಂಬದಲ್ಲಿನ ಎಲ್ಲ ವಿಷಯಗಳೂ ಸಮಸ್ಯೆಗಳೇ ಎನಿಸುತ್ತವೆ. ಅಂಥ ಕುಟುಂಬವೊಂದು ಚಿಕ್ಕಮಗಳೂರಿನಲ್ಲಿದೆ. 

5 Blind People In One Family Chikkamagaluru
Author
Bengaluru, First Published Mar 20, 2020, 2:56 PM IST

ಯಡಗೆರೆ ಮಂಜುನಾಥ್‌

ನರಸಿಂಹರಾಜಪುರ (ಮಾ.20): ಒಂದು ಊರಿನಲ್ಲಿ ಒಬ್ಬಿಬ್ಬರು ಅಂಧರು ಇರಬಹುದು. ಒಂದೇ ಮನೆಯಲ್ಲಿ ನಾಲ್ಕೈದು ಜನ ಅಂಧಮಕ್ಕಳಿದ್ದರೆ, ನೆಂಟರಿಷ್ಟರೂ ಇಲ್ಲದಿದ್ದರೆ, ಹೆತ್ತವರೂ ಸತ್ತುಹೋಗಿದ್ದರೆ!

ಈ ಮಾತು ಕೇಳಿಯೇ ಎಲ್ಲರೂ ಹೌಹಾರುವುದು ಸಹಜ. ಎಲ್ಲಾ ಸರಿಯಿದ್ದವ ಕುಟುಂಬಗಳಲ್ಲೇ ಸಮಸ್ಯೆಗಳು ತಾಂಡವವಾಡುತ್ತವೆ. ಆದರೆ ನಾಲ್ಕೈದು ಮಕ್ಕಳೂ ಅಂಧರಾದರೆ ಅವರ ಕುಟುಂಬದಲ್ಲಿನ ಎಲ್ಲ ವಿಷಯಗಳೂ ಸಮಸ್ಯೆಗಳೇ ಎನಿಸುತ್ತವೆ. ಅಂಥ ಕುಟುಂಬವೊಂದು ತಾಲೂಕಿನಲ್ಲಿದೆ.

ತಾಲೂಕಿನ ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂಸಲವಾನಿ ಗ್ರಾಮದಲ್ಲಿ ಒಂದೇ ಕುಟುಂಬದ ಐವರು ಅಂಧರಿದ್ದಾರೆ. ಕೂಲಿ ಮಾಡಿ ದುಡಿದು ತಿನ್ನುತ್ತಿದ್ದ ಈ ಕುಟುಂಬದವರು, ಅಂಧತ್ವದಿಂದಾಗಿ ಈಗ ಆರ್ಥಿಕ ಸಂಕಷ್ಟಎದುರಿಸುತ್ತಿದ್ದಾರೆ. ಕೇರಳ ರಾಜ್ಯದಿಂದ 50 ವರ್ಷಗಳ ಹಿಂದೆ ಹಿಂದೂ ಮಲೆಯಾಳಿ ಭಾಷೆಯ ವೇಲಾಯುದ ಮತ್ತು ನಾರಾಯಣಿ ದಂಪತಿ ಶೆಟ್ಟಿಕೊಪ್ಪ ಸಮೀಪದ ಸೂಸಲವಾನಿ ಎಂಬ ಗ್ರಾಮಕ್ಕೆ ವಲಸೆ ಬಂದಿದ್ದರು. ಇಲ್ಲಿಯೇ ಸಣ್ಣ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದರು. ಕೂಲಿ ಕೆಲಸವೇ ಅವರ ವೃತ್ತಿಯಾಗಿತ್ತು. 6 ಮಕ್ಕಳನ್ನು ಹೊಂದಿದ್ದರು ಈ ದಂಪತಿ. ಕೆಲವು ವರ್ಷಗಳ ಹಿಂದೆ ವೇಲಾಯುದ ಹಾಗೂ ಅವರ ಪತ್ನಿ ತೀರಿಹೋಗಿದ್ದಾರೆ. ಇದರಿಂದ ಈ ಕುಟುಂಬದಲ್ಲಿ ಹುಟ್ಟಿದ ಅಂಧರಿಗೆ ಜಗತ್ತಿರಲಿ, ಬದುಕುವ ದಿಕ್ಕೂ ಕಾಣದಂತಾಗಿದೆ.

ಚಿಕ್ಕಮಗಳೂರಿಗೆ ಮೆಡಿಕಲ್‌ ಕಾಲೇಜು ಮಂಜೂರು..

ದೇವಕಿ (65) ತಂಗಮ್ಮ (58) ಕುಮಾರ (56) ಹಾಗೂ ಶಾಂತ (45) ಎಂಬವರಿಗೆ ಈಗ ಕಣ್ಣು ಕಾಣುತ್ತಿಲ್ಲ. ಇವರ ಜತೆಗೆ ಶಾಂತ ಅವರ ಪುತ್ರಿ ಅಂಜನ (14) ಅವರಿಗೂ ಒಂದು ಕಣ್ಣು ಮಾತ್ರ ಕಾಣುತ್ತಿದೆ. ಅಂಜನಗೆ ಒಂದು ಕೈ ಹಾಗೂ ಒಂದು ಕಾಲು ಸಹ ಊನವಾಗಿದ್ದು, ನಡೆದಾಡಲು ಸಾಧ್ಯವಾಗುತ್ತಿಲ್ಲ. ಉಳಿದ ಕುಟ್ಟಪ್ಪ (53) ಹಾಗೂ ಅಮ್ಮಣ್ಣಿ (48) ಎಂಬವರಿಗೆ ಮಾತ್ರ ಕಣ್ಣು ಕಾಣುತ್ತಿದ್ದು. ಅವರು ಬೇರೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ.

ಹುಟ್ಟುವಾಗ ಕಣ್ಣು ಸರಿಯಾಗಿತ್ತು:

ಈ ಐವರಿಗೂ ಹುಟ್ಟುವಾಗ ಕಣ್ಣುಗಳು ಸರಿಯಾಗಿಯೇ ಇದ್ದವು. ಮಕ್ಕಳಾಗಿ ಬೆಳೆದು, ಎಲ್ಲರೂ ಕೂಲಿ ಕೆಲಸ ಮಾಡಿ ದುಡಿದು ತರುತ್ತಿದ್ದರು. ಆದರೆ ವರ್ಷಗಳು ಕಳೆದಂತೆ ಒಬ್ಬೊಬ್ಬರಿಗೇ ದೃಷ್ಟಿಮಂದವಾಗುತ್ತಹೋಯಿತು. ಕಣ್ಣಿನ ಆಸ್ಪತ್ರೆಗೆ ಸೇರಿ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರು. ಆದರೂ ಬದುಕಿನಲ್ಲಿ ಬೆಳಕು ಕಾಣಬೇಕಿದ್ದ ಅವರ ಕಣ್ಣುಗಳಲ್ಲಿ ದೃಷ್ಟಿಇಂಗಿಹೋಗಿದೆ. ದುರಂತವೆಂದರೆ, ಕೆಲವು ವರ್ಷಗಳ ನಂತರ ಕಣ್ಣು ಸಂಪೂರ್ಣವಾಗಿ ಮಂದವಾಗಿವೆ. ಆದರೆ, ಕಣ್ಣಿನ ದೃಷ್ಠಿ ಹೋದಾಗ ಅನಿವಾರ್ಯವಾಗಿ ಒಬ್ಬಬ್ಬರೇ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಈ ಕುಟುಂಬದವರಿಗೆ ಜಮೀನು ಇಲ್ಲ, ಅನ್ನಕ್ಕೆ ಕೂಲಿಯೇ ಆಧಾರವಾಗಿತ್ತು. 45 ವರ್ಷದ ಶಾಂತಳಿಗೆ 5 ವರ್ಷದವರೆಗೂ ಕಣ್ಣು ಕಾಣುತ್ತಿತ್ತು. ಆದರೆ, ನಂತರ ನಿಧಾನವಾಗಿ ಅವರ ದೃಷ್ಠಿಯೆಲ್ಲ ಮಂದವಾಗುತ್ತ ಹೋಗಿ ಈಗ ಎರಡು ಕಣ್ಣು ಸಂಪೂರ್ಣವಾಗಿ ದೃಷ್ಟಿಕಳೆದುಕೊಂಡಿವೆ.

ನೆರೆಹೊರೆಯವರೇ ಆಸರೆ:

ಈ ಅಂಧತ್ವ ಹೊಂದಿರುವ ಕುಟುಂಬದವರಿಗೆ ನೆರೆ ಮನೆಯವರೇ ಆಸರೆಯಾಗುತ್ತಿದ್ದಾರೆ. ಮನೆ ಬಳಕೆ ಸಾಮಾನು ತರುವುದು, ಒಲೆಗೆ ಬೆಂಕಿ ಹಚ್ಚುವುದು, ಕಾಯಿಲೆ ಬಂದಾಗ ಆಸ್ಪತ್ರೆಗೆ ಸೇರಿಸುವ ಕೆಲಸ ಎಲ್ಲಕ್ಕೂ ನೆರೆ ಹೊರೆಯವರನ್ನೇ ಆಶ್ರಯಿಸಿದ್ದಾರೆ. ನೆರೆಹೊರೆಯವರೂ ನಿಸ್ವಾರ್ಥ ಮನಸ್ಸಿನಿಂದ ಇವರ ಸೇವೆಗೆ ಸ್ಪಂದಿಸುತ್ತಿರುವುದು, ಇವರು ಮಾಡಿದ ಪುಣ್ಯವೆಂದರೆ ತಪ್ಪಾಗದು. ಇನ್ನೂ ದುರಂತವೆಂದರೆ, ಐವರು ಅಂಧರಿರುವ ವಾಸದ ಮನೆಯೂ ಈಗ ಬಿದ್ದುಹೋಗುವ ಸ್ಥಿತಿಗೆ ತಲುಪಿದೆ. ಮಳೆಯಾದರೆ ನೀರು ಮನೆಯೊಳಗೇ ಹರಿಯುತ್ತದೆ. ಸರ್ಕಾರದಿಂದ ಬರುತ್ತಿರುವ .1400 ಮಾಸಾಸನವನ್ನೇ ಜೀವನಾಧಾರ ಎಂದುಕೊಂಡಿದ್ದಾರೆ. ಆದರೆ, 1 ವರ್ಷದಿಂದ ಸರ್ಕಾರಿ ಮಾಸಾಸನವೂ ಸರಿಯಾಗಿ ಕೈ ಸೇರುತ್ತಿಲ್ಲ. ಇದರಿಂದ ಇನ್ನಷ್ಟುಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಅಂಧರ ಕುಟುಂಬ ಸಂಘ, ಸಂಸ್ಥೆಯವರು, ದಾನಿಗಳ ಆರ್ಥಿಕ ನೆರವನ್ನು ಎದುರು ನೋಡುತ್ತಿದೆ.

ಕಾಫಿನಾಡಲ್ಲಿ 4 ಎಕರೆ ಕಾಫಿ ತೋಟ ಕಡಿದು ಹಾಕಿದ ಅಧಿಕಾರಿಗಳು...

ಎಸ್‌.ಸಿ. ಸರ್ಟಿಫಿಕೇಟ್‌ ಸಿಕ್ಕುತ್ತಿಲ್ಲ:

ಈ ಕುಟುಂಬವು ಕೇರಳದ ಪುಲಯನ್‌ ಎಂಬ ಜಾತಿಗೆ ಸೇರಿದ್ದು, ಇವರು ಕರ್ನಾಟಕ ರಾಜ್ಯಕ್ಕೆ ಬಂದಿದ್ದರಿಂದ ಇಲ್ಲಿ ಪುಲಯನ್‌ ಜಾತಿ ಸರ್ಟಿಫಿಕೇಟ್‌ ಬದಲಿಗೆ ಎಸ್‌.ಸಿ. ಸರ್ಟಿಫಿಕೇಟ್‌ ನೀಡಲಾಗಿತ್ತು. ಇದನ್ನು ಉಪಯೋಗಿಸಿಕೊಂಡು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳುತ್ತಿದ್ದರು. ಆದರೆ, ಸರ್ಕಾರವು ರಾಜ್ಯದಲ್ಲಿ ಪುಲಯನ್‌ ಜಾತಿ ಇಲ್ಲ ಎಂದು ಈ ಕುಟುಂಬದವರಿಗೆ ಎಸ್‌.ಸಿ. ಸರ್ಟಿಫಿಕೇಟ್‌ ಕೊಡುವುದನ್ನು ನಿಲ್ಲಿಸಿತು. ಇದರಿಂದ ಹಿಂದುಳಿದ ವರ್ಗದವರಿಗೆ ಸಿಗುವ ಸೌಲಭ್ಯಗಳು ಈಗ ಸರ್ಕಾರದಿಂದ ಇವರಿಗೆ ಸಿಗುತ್ತಿಲ್ಲ. ಒಂದೇ ಬಡ ಕುಟುಂಬದ 5 ಜನರಿಗೆ ಅಂಧತ್ವ ಬಾಧಿಸುತ್ತಿದೆ.

ಆರ್ಥಿಕ ಸಂಕಷ್ಟಎದುರಿಸುತ್ತಿರುವುದರಿಂದ ಸರ್ಕಾರವು ಈ ಕುಟುಂಬವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಮಾನವೀಯತೆ ದೃಷ್ಠಿಯಿಂದ ಇವರ ಮಾಸಾಸನ ಹೆಚ್ಚಿಸಬೇಕಾಗಿದೆ. ಮನೆ ಕಂದಾಯ, ನೀರಿನ ತೆರಿಗೆ ವಜಾ ಮಾಡಬೇಕು. ಆಹಾರ ಸಾಮಗ್ರಿ, ಕುಡಿಯುವ ನೀರು, ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸೆ ಸೇರಿದಂತೆ ಎಲ್ಲ ಮೂಲಭೂತ ಸೌಕರ್ಯವನ್ನು ಉಚಿತವಾಗಿ ಒದಗಿಸಿಕೊಡಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಈ ಐವರು ಅಂಧರ ಕುಟುಂಬಕ್ಕೆ ನೆರವು ನೀಡಬಯಸುವರು ಈ ಕುಟುಂಬದ ಯಜಮಾನರಾದ ಅಂಧ ಕುಮಾರ ಟಿ.ವಿ., ಎಸ್‌ಬಿಎಂ ಬ್ಯಾಂಕ್‌ ಖಾತೆ ನಂ- 64165618321, ನರಸಿಂಹರಾಜಪುರ ಬ್ರಾಂಚ್‌. ಹೆಚ್ಚಿನ ಮಾಹಿತಿಗೆ ಕುಮಾರ್‌ ಅವರ ಮೊ.9900879874 ಇಲ್ಲಿಗೆ ಸಂಪರ್ಕಿಸಬಹುದು.

ಕಳೆದ 35 ವರ್ಷಗಳ ಹಿಂದೆ ಎರಡು ಕಣ್ಣು ಕಾಣಿಸುತ್ತಿತ್ತು. ಅನಂತರ ಒಂದು ಕಣ್ಣಿನಲ್ಲಿ ಉರಿ, ನೋವು ಉಂಟಾಗುತ್ತಿತ್ತು. ಮಣಿಪಾಲ ಆಸ್ಪತ್ರೆಯಲ್ಲಿ ಸೇರಿ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡೆ. ಆನಂತರದ ವರ್ಷಗಳಲ್ಲಿ ಎರಡು ಕಣ್ಣು ಕಾಣದಂತಾದವು. ಮೊದಲು ಬಲಕಣ್ಣು ಹೋಯಿತು, ನಂತರ ಎಡಕಣ್ಣಿನ ದೃಷ್ಟಿಯೂ ಹೋಯಿತು. ಈಗ ಕೋಲು ಹಿಡಿದುಕೊಂಡು ಮನೆಯಲ್ಲೇ ಸುತ್ತಾಡುತ್ತಿದ್ದೇನೆ. ಹೊರಗಡೆ ಹೋಗಲು ಸಾಧ್ಯವಾಗುತ್ತಿಲ್ಲ

- ಕುಮಾರ ಟಿ.ವಿ., ಕುಟುಂಬದ ಯಜಮಾನ

ಕಡಹಿನಬೈಲು ಗ್ರಾಮ ಪಂಚಾಯಿತಿಯಿಂದ ಈ ಅಂಧರ ಕುಟುಂಬಕ್ಕೆ ಎಲ್ಲ ಸಹಕಾರ ನೀಡಲಾಗುವುದು. ಹಳೇ ಮನೆ ರಿಪೇರಿ ಯೋಜನೆಯಡಿ ಸೂಸಲವಾನಿ ಅಂಧತ್ವ ಇರುವ ಕುಟುಂಬದವರಿಗೆ ಮನೆ ರಿಪೇರಿಗೆ ಹಣ ನೀಡಲಾಗುವುದು. ವಿಕಲಚೇತನರಿಗೆ ನೀಡುವ ಯೋಜನೆಯಡಿ ಮಂಚ, ಗಾಡ್ರೇಜ್‌ ಬೀರು ನೀಡಿದ್ದೇವೆ. ಗ್ರಾಮ ಪಂಚಾಯಿತಿಗೆ ಕಟ್ಟಬೇಕಾದ ನೀರಿಗೆ ತೆರಿಗೆ ಮನ್ನಾ ಮಾಡುವ ಬಗ್ಗೆ ಗ್ರಾಮ ಪಂಚಾಯಿತಿ ಸಭೆಯಲ್ಲಿ ಚರ್ಚೆ ಮಾಡಲಾಗುವುದು. ವೈಯಕ್ತಿಕವಾಗಿಯೂ ಈ ಅಂಧತ್ವ ಕುಟುಂಬಕ್ಕೆ ಸಹಾಯ ಮಾಡುತ್ತೇನೆ

- ವಿಂದ್ಯಾ ಹೆಗಡೆ, ಅಧ್ಯಕ್ಷೆ, ಕಡಹಿನಬೈಲು ಗ್ರಾಪಂ

ಪ್ರತಿ ದಿನ ಈ ಅಂಧತ್ವ ಕುಟುಂಬದವರಿಗೆ ಅಕ್ಕಪಕ್ಕದ ಮನೆಯವರೇ ಸಹಾಯ ಮಾಡುತ್ತಿದ್ದೇವೆ. ಅಡುಗೆ ಮನೆ ಒಲೆಗೆ ಬೆಂಕಿ ಹಾಕಿ ಅಡುಗೆ ಮಾಡಿಕೊಡುತ್ತೇವೆ. ನೀರು ತಂದು ಕೊಡುತ್ತೇವೆ. ಕಾಯಿಲೆ ಬಂದರೆ ಆಸ್ಪತ್ರೆಗೆ ಸೇರಿಸುತ್ತೇವೆ. ಈ ಕುಟುಂಬದವರಿಗೆ ಕಣ್ಣು ಇಲ್ಲದೇ ಕೂಲಿ ಮಾಡಲು ಸಹ ಸಾಧ್ಯವಾಗುತ್ತಿಲ್ಲ. ಸರ್ಕಾರದ ಮಾಸಾಸನ ಹಣದಲ್ಲೇ ಇವರ ಬದುಕು ಸಾಗುತ್ತದೆ. ಕಳೆದ 1 ವರ್ಷದಿಂದ ಸರ್ಕಾರದ ಮಾಸಾಸನ ಸರಿಯಾಗಿ ಕೈ ಸೇರುತ್ತಿಲ್ಲ. ಇದರಿಂದ ಅಕ್ಕಿ, ಸಾಮಾನು ಕೊಳ್ಳಲು ಈ ಕುಟುಂಬದವರಿಗೆ ತೊಂದರೆಯಾಗುತ್ತಿದೆ

- ಮಿನಿ, ಪಕ್ಕದ ಮನೆಯ ನಿವಾಸಿ

Follow Us:
Download App:
  • android
  • ios