*  ಯಲಬುರ್ಗಾ ತಾಲೂಕಿನ ವದನಗನಾಳ ಗ್ರಾಮದ ಬಳಿ ಗುತ್ತಿಗೆ ಒಡಂಬಡಿಕೆ*  ವಾರ್ಷಿಕ 26 ಸಾವಿರ ನಿಗದಿ, ಪ್ರತಿವರ್ಷ ಶೇ. 5ರಷ್ಟು ಹೆಚ್ಚಳ*  ಏರುತ್ತಿರುವ ಭೂಮಿಯ ಬೆಲೆ  

ಸೋಮರಡ್ಡಿ ಅಳವಂಡಿ

Add Asianetnews Kannada as a Preferred SourcegooglePreferred

ಕೊಪ್ಪಳ(ಜೂ.11): ಜಿಲ್ಲೆಗೆ ಈಗಾಗಲೇ ಹಲವು ಕೈಗಾರಿಕೆಗಳು ಲಗ್ಗೆ ಇಟ್ಟಿವೆ. ಈಗ ದೇಶದ ಮೊದಲ ‘ಆಟಿಕೆ ಕ್ಲಸ್ಟರ್‌’ ಸಹ ಬಂದಿದ್ದು, ಇದೀಗ ಸೋಲಾರ್‌ ಕಂಪನಿ ಸರದಿ. ಯಲಬುರ್ಗಾ ತಾಲೂಕಿನಲ್ಲಿ 400 ಎಕರೆ ಭೂಮಿಯನ್ನು ಸೋಲಾರ್‌ ಕಂಪನಿ ಗುತ್ತಿಗೆ ಆಧಾರದಲ್ಲಿ ಪಡೆದಿದೆ.

‘ಸೋಲಾರ್‌ ಒನ್‌’ ಎನ್ನುವ ಕಂಪನಿ ವದನಗನಾಳ ಮತ್ತು ಹಣವಾಳ ಗ್ರಾಮದ ಸೀಮಾ ವ್ಯಾಪ್ತಿಯಲ್ಲಿ ಬರೋಬ್ಬರಿ 400 ಎಕರೆ ಭೂಮಿ ಗುತ್ತಿಗೆ ಪಡೆದಿದ್ದು, ಇನ್ನು 800 ಎಕರೆ ಭೂಮಿಗಾಗಿ ರೈತರೊಂದಿಗೆ ಒಡಂಬಡಿಕೆಯ ಮಾತುಕತೆ ನಡೆಸಿದೆ.

ರಾಜಕೀಯ ಮಾಡುವ ಉದ್ದೇಶ ಇಲ್ಲ: ಜನಾರ್ದನ ರೆಡ್ಡಿ

ಇದು ಕೇವಲ ಒಂದು ಯುನಿಟ್‌ ಮಾತ್ರ. ಇಂಥ ಹತ್ತಾರು ಯೋಜನೆಗಳು ಹಂತ ಹಂತವಾಗಿ ಕಾಲಿಡುತ್ತಿದ್ದು, ಮುಂದಿನ ದಿನಗಳಲ್ಲಿ ಕೊಪ್ಪಳ ಜಿಲ್ಲೆ ‘ಸೋಲಾರ್‌ ಹಬ್‌’ ಆಗುವ ಸಾಧ್ಯತೆ ದಟ್ಟವಾಗಿವೆ. ಅನೇಕ ಸೋಲಾರ್‌ ಕಂಪನಿಗಳು ಭೂಮಿಯ ಹುಡುಕಾಟ ನಡೆಸಿವೆ.

ಗುತ್ತಿಗೆಯ ಆಧಾರದಲ್ಲಿ ಭೂಮಿ:

ಸೋಲಾರ್‌ ಕಂಪನಿಗಳ ರೈತರ ಭೂಮಿಯನ್ನು ಕಂಪನಿ ಆ್ಯಕ್ಟ್ ಪ್ರಕಾರ ಸ್ವಾಧೀನ ಮಾಡಿಕೊಳ್ಳುತ್ತಿಲ್ಲ. ಬದಲಾಗಿ ಗುತ್ತಿಗೆ ಪಡೆಯುತ್ತಿವೆ. 30 ವರ್ಷ ಕನಿಷ್ಠ ಒಡಂಬಡಿಕೆಯ ಮೂಲಕ ರೈತರಿಗೆ ಗುತ್ತಿಗೆ ಪ್ರಮಾಣಪತ್ರವನ್ನು ನೀಡುತ್ತವೆ.
ಗುತ್ತಿಗೆ ಪಡೆದ ಭೂಮಿಗೆ ಪ್ರತಿಯಾಗಿ ಎಕರೆಗೆ ವಾರ್ಷಿಕ 26 ಸಾವಿರ ನೀಡುತ್ತವೆ. ಇದು ಪ್ರತಿ ವರ್ಷ ಶೇ. 5ರಷ್ಟು ಚ್ಚಳದ ಷರತ್ತನ್ನು ಒಳಪಟ್ಟಿದೆ. ವದಗನಾಳ ಮತ್ತು ಹಣವಾಳ ಸೀಮಾ ವ್ಯಾಪ್ತಿಯಲ್ಲಿಯೇ ಸುಮಾರು 400 ಎಕರೆ ಭೂಮಿಯನ್ನು ಈ ರೀತಿಯಾಗಿ ಒಡಂಬಡಿಕೆ ಮಾಡಿಕೊಂಡಿವೆ. ಇದು ಸಂಪೂರ್ಣ ಖಾಸಗಿಯಾಗಿಯೇ ನಡೆಯುವ ವ್ಯವಹಾರ. ಇದರಲ್ಲಿ ಸರ್ಕಾರವಾಗಲಿ ಅಥವಾ ಜಿಲ್ಲಾಡಳಿತವಾಗಲಿ ಮಧ್ಯಪ್ರವೇಶ ಮಾಡುವುದಿಲ್ಲ. ಆದರೆ, ನಿಯಮಾನುಸಾರ ಒಡಂಬಡಿಕೆ ಪತ್ರವನ್ನು ಮಾಡಲಾಗುತ್ತದೆ.

ವಾರ್ಷಿಕವಾಗಿ 26000 ನೀಡುವ ಕುರಿತು ಒಡಂಬಡಿಕೆ ಪತ್ರವಾಗುತ್ತಿದ್ದಂತೆ ನಾಲ್ಕು ಸಾವಿರವನ್ನು ರೈತರ ಖಾತೆಗೆ ಜಮೆ ಮಾಡಲಾಗುತ್ತದೆ. ಇದಾದ ಮೇಲೆ ಸೋಲಾರ್‌ ಪ್ಲಾಂಟ್‌ ಹಾಕುತ್ತಿದ್ದಂತೆ ವಾರ್ಷಿಕವಾಗಿ ಉಳಿದ ಹಣ ರೈತರ ಖಾತೆಗೆ ಜಮೆಯಾಗುತ್ತದೆ. ವಾರ್ಷಿಕವಾಗಿ ಶೇ. 5ರಷ್ಟು ಏರಿಕೆ ಮಾಡುತ್ತಾ 30 ವರ್ಷಗಳ ಕಾಲ ಜಮೆ ಮಾಡಲಾಗುತ್ತದೆ. ಮೂವತ್ತು ವರ್ಷಗಳ ಬಳಿಕ ಒಡಂಬಡಿಕೆ ಮುಂದುವರಿಯಬೇಕೋ ಅಥವಾ ಬೇಡವೋ ಎನ್ನುವುದನ್ನು ತೀರ್ಮಾನ ಮಾಡಲಾಗುತ್ತದೆ. ಆದಾದ ನಂತರ ರೈತರು ತಮ್ಮ ಭೂಮಿಯಲ್ಲಿ ಏನು ಬೇಕಾದರೂ ಮಾಡಬಹುದು. ಗುತ್ತಿಗೆಯನ್ನು ಮುಂದುವರಿಸಬಹುದು ಇಲ್ಲವೇ ಒಡಂಬಡಿಕೆ ರದ್ದು ಮಾಡಿಕೊಳ್ಳಬಹುದು.

'ಸಚಿವ ಆಚಾರ್‌ಗೆ ನೀರಾವರಿ ಬಗ್ಗೆ ಎಬಿಸಿಡಿ ಗೊತ್ತಿಲ್ಲ'

ಏರುತ್ತಿರುವ ಭೂಮಿಯ ಬೆಲೆ:

ಜಿಲ್ಲೆಗೆ ಕೈಗಾರಿಕೆಗಳು, ಸೋಲಾರ್‌ ಕಂಪನಿಗಳು, ಆಟಿಕೆ ಕ್ಲಸ್ಟರ್‌ ಹಾಗೂ ವಿಮಾನ ನಿಲ್ದಾಣ ಆಗಮಿಸುವ ಪ್ರಕ್ರಿಯೆ ನಡೆಯುತ್ತಿದ್ದಂತೆ ಭೂಮಿಯ ಬೆಲೆ ಗಗನಮುಖಿಯಾಗುತ್ತಿದೆ. ಜಿಲ್ಲಾ ಕೇಂದ್ರ ಕೊಪ್ಪಳ ಸುತ್ತಮುತ್ತಲ ಪ್ರದೇಶದಲ್ಲಿ ಒಂದು ಎಕರೆಗೆ .1ರಿಂದ .1.5 ಕೋಟಿಗೆ ಮಾರಾಟವಾಗುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ (ಹೆದ್ದಾರಿಯುದ್ದಕ್ಕೂ ಇರುವ ಭೂಮಿ) ಎಕರೆಗೆ .10ರಿಂದ .15 ಲಕ್ಷ ಮಾರಾಟ ಸಾಮಾನ್ಯವಾಗಿದೆ. ಆಟಿಕೆ ಕ್ಲಸ್ಟ್‌ ಸ್ಥಾಪನೆಯಾಗುತ್ತಿರುವ ಏರಿಯಾದಲ್ಲಿ ಭಾನಾಪುರ ರಸ್ತೆಯುದ್ದಕ್ಕೂ .50 ಲಕ್ಷಕ್ಕೆ ಎಕರೆ ಭೂಮಿ ಮಾರಾಟವಾಗುತ್ತಿದೆ. ಕೇವಲ .15 ಲಕ್ಷ ಎಕರೆಗೆ ಭೂಮಿ ಕೊಟ್ಟರೈತರು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ಇನ್ನು ಹೆಚ್ಚು ದರ ಸಿಗಬೇಕಿತ್ತು ಎನ್ನುವ ಮಾತು ಕೇಳಿ ಬರುತ್ತಿದೆ. ಸುಮಾರು 800 ಎಕರೆ ಭೂಮಿಯನ್ನು ಆಟಿಕೆ ಕ್ಲಸ್ಟರ್‌ಗೆ ಖರೀದಿ ಮಾಡಿದ್ದರೆ ಪರ್ಯಾಯವಾಗಿ ಇದಕ್ಕೆ ಪೂರಕವಾಗಿ ಸೃಷ್ಟಿಯಾದ ಮಾರುಕಟ್ಟೆಯಿಂದಾಗಿಯೂ ಅನೇಕರು ಇಲ್ಲಿ ಭೂಮಿ ಖರೀದಿ ಮಾಡಿ ಹೂಡಿಕೆ ಮಾಡುತ್ತಿರುವುದರಿಂದ ಭೂಮಿಯ ದರ ಏರಿಕೆಯಾಗುತ್ತಲೇ ಇಲ್ಲ.

ನಮ್ಮೂರಿನ ಭೂಮಿಯನ್ನು ಈಗಾಗಲೇ ಸೋಲಾರ್‌ ಕಂಪನಿಗೆ ಸುಮಾರು 400 ಎಕರೆಯನ್ನು ಗುತ್ತಿಗೆ ಆಧಾರದಲ್ಲಿ ಪಡೆದಿದ್ದು, ನಾನು ನಮ್ಮ ಹೊಲವನ್ನು ಸಹ ನೀಡಿದ್ದೇವೆ. ಈಗ ವಿಮಾನ ನಿಲ್ದಾಣ ಮಾಡುವ ಕುರಿತು ಪರಿಶೀಲನೆ ಮಾಡಿರುವುದರಿಂದ ಕೃಷಿಗೆ ಭೂಮಿಯೇ ಉಳಿಯುವುದಿಲ್ಲ ಎಂದು ವಿರೋಧಿಸುತ್ತಿದ್ದೇವೆ ಅಂತ ವದಗನಾಳ ಗ್ರಾಪಂ ಸದಸ್ಯ ತಿಮ್ಮನಗೌಡ ತಿಳಿಸಿದ್ದಾರೆ.