'ಸಚಿವ ಆಚಾರ್ಗೆ ನೀರಾವರಿ ಬಗ್ಗೆ ಎಬಿಸಿಡಿ ಗೊತ್ತಿಲ್ಲ'
* ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆದ್ದು ಅಧಿಕಾರ ಹಿಡಿಯಲಿದೆ
* ಕೋಮುವಾದಿ ಬಿಜೆಪಿ ಸರ್ಕಾರ ದುರಾಡಳಿತದಿಂದ ಅಧಿಕಾರ ಕಳೆದುಕೊಳ್ಳಲಿದೆ
* ನಾನು ತಂದಿರುವ ಕೆರೆ ತುಂಬಿಸುವ ಯೋಜನೆ ತಮ್ಮ ಸಾಧನೆಯಂದು ಹೇಳುತ್ತಿದ್ದಾರೆ
ಯಲಬುರ್ಗಾ(ಜೂ.09): ಸಚಿವ ಹಾಲಪ್ಪ ಆಚಾರ್ ಅವರಿಗೆ ನೀರಾವರಿ ಬಗ್ಗೆ ಎಬಿಸಿಡಿ ಗೊತ್ತಿಲ್ಲ. ನಾನು ತಂದಿರುವ ಕೆರೆ ತುಂಬಿಸುವ ಯೋಜನೆ ತಮ್ಮ ಸಾಧನೆಯಂದು ಹೇಳುತ್ತಿದ್ದಾರೆ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಆರೋಪಿಸಿದರು.
ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಬುಧವಾರ ಜಿಪಂ, ತಾಪಂ ಚುನಾವಣೆ ಪ್ರಯುಕ್ತ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆದ್ದು ಅಧಿಕಾರ ಚುಕ್ಕಾಣಿ ಹಿಡಿಯಲಿದೆ. ಕೋಮುವಾದಿ ಬಿಜೆಪಿ ಸರ್ಕಾರ ದುರಾಡಳಿತದಿಂದ ಅಧಿಕಾರ ಕಳೆದುಕೊಳ್ಳಲಿದೆ ಎಂದರು.
30 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ: ಸಚಿವ ಹಾಲಪ್ಪ ಆಚಾರ್
ಸಚಿವ ಹಾಲಪ್ಪ ಆಚಾರ್ ಅವರು ಪ್ರತಿಯೊಂದು ಸಭೆ- ಸಮಾರಂಭದಲ್ಲಿ ಕ್ಷೇತ್ರವನ್ನು ನೀರಾವರಿಯನ್ನಾಗಿ ಮಾಡುತ್ತೇನೆ ಎಂದು ಹೇಳುತ್ತಿದ್ದವರು. ಇದೀಗ ಕೆರೆ ತುಂಬಿಸುವ ಯೋಜನೆಯನ್ನು ಶೀಘ್ರದಲ್ಲೇ ಮಾಡುತ್ತೇನೆ ಎಂದು ಜನರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಆಂಧ್ರ ಹಾಗೂ ತೆಲಂಗಾಣ ನ್ಯಾಯಾಧೀಕರಣ ಇರುವುದರಿಂದ ನಮ್ಮ ತಾಲೂಕಿಗೆ ನೀರಾವರಿ ಮಾಡಲು ಬರುವುದಿಲ್ಲ ಎನ್ನುವುದನ್ನು ಅರಿತು ಕೊನೆಗೆ ಕ್ಷೇತ್ರದ ಜನರಿಗೆ ಕುಡಿಯುವ ನೀರನ್ನಾದರೂ ಕೊಡಬೇಕೆನ್ನುವ ಉದ್ದೇಶದಿಂದ ಕೆರೆ ತುಂಬಿಸುವ ಯೋಜನೆಗೆ ಅನುದಾನವನ್ನು ನಾನು ಬಿಡುಗಡೆ ಮಾಡಿಸಿದ್ದೇನೆ. ಆದರೆ ಹಾಲಪ್ಪನವರು ಕೋರ್ಟ್ನಲ್ಲಿ ಪ್ರಕರಣ ಇರುವುದರಿಂದ ನೀರಾವರಿ ಮಾಡಲು ಬರುವುದಿಲ್ಲ ಅಂತ ಹೇಳುತ್ತಿದ್ದಾರೆ. ನ್ಯಾಯಾಧೀಕರಣ ಇರದಿದ್ದರೆ ಈ ಕ್ಷೇತ್ರಕ್ಕೆ ಎಂದೋ ನೀರಾವರಿ ಮಾಡಿಬಿಡುತ್ತಿದ್ದೆ ಎಂದು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಮಾಜಿ ಬಸವರಾಜ ರಾಯರಡ್ಡಿಯವರ ಅಭಿವೃದ್ಧಿ ಕಾರ್ಯಗಳೇ ಅವರ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದರು.
ಯಂಕಣ್ಣ ಯರಾಶಿ, ಮಹೇಶ ಹಳ್ಳಿ, ರಾಮಣ್ಣ ಸಾಲಭಾವಿ, ಕೆರಿಬಸಪ್ಪ ನಿಡಗುಂದಿ, ಗುನ್ನಾಳ ರಾಘಣ್ಣ, ಹನಮಂತಗೌಡ ಚಂಡೂರ, ಅಡಿವೆಪ್ಪ ಭಾವಿಮನಿ, ಸಾವಿತ್ರಿ ಗೊಲ್ಲರ, ಮಾನಪ್ಪ ಪೂಜಾರ, ರಾಜಶೇಖರ ನಿಂಗೋಜಿ, ಮಹಾಂತೇಶ ಗಾಣಿಗೇರ, ಗಿರಿಜಾ ಸಂಗಟಿ, ಫರೀದಾ ಬೇಗಂ, ಅಶೋಕ ತೋಟದ, ಶರಣಪ್ಪ ಗಾಂಜಿ, ಡಾ. ಶಿವನಗೌಡ ದಾನರಡ್ಡಿ, ಮಲ್ಲು ಜಕ್ಕಲಿ, ಈಶ್ವರ ಅಟಮಾಳಗಿ ಸೇರಿದಂತೆ ಮತ್ತಿತರರು ಇದ್ದರು.