ಬದಲಾದ ಜೀವನ ಶೈಲಿ, ಆಹಾರ- ವಿಹಾರಗಳಿಂದಾಗಿ ಹೃದ್ರೋಗ ಹೆಚ್ಚುತ್ತಿದೆ, ಇತ್ತೀ​ಚೆ​ಗಿನ ಸಮೀಕ್ಷೆಯೊಂದರ ಪ್ರಕಾರ ಹೃದಯಾಘಾತದಿಂದಲೇ ಶೇ.35ರಷ್ಟು ಸಾವುಗಳಾಗುತ್ತಿರೋದು ಆತಂಕದ ಸಂಗತಿ ಎಂದು ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌ ಕಳವಳ ಹೊರಹಾಕಿದ್ದಾರೆ. 

ಕಲಬುರಗಿ (ಜೂ.18): ಬದಲಾದ ಜೀವನ ಶೈಲಿ, ಆಹಾರ- ವಿಹಾರಗಳಿಂದಾಗಿ ಹೃದ್ರೋಗ ಹೆಚ್ಚುತ್ತಿದೆ, ಇತ್ತೀ​ಚೆ​ಗಿನ ಸಮೀಕ್ಷೆಯೊಂದರ ಪ್ರಕಾರ ಹೃದಯಾಘಾತದಿಂದಲೇ ಶೇ.35ರಷ್ಟು ಸಾವುಗಳಾಗುತ್ತಿರೋದು ಆತಂಕದ ಸಂಗತಿ ಎಂದು ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌ ಕಳವಳ ಹೊರಹಾಕಿದ್ದಾರೆ. ಕಲಬುರಗಿಯ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಡಾ.ಗೋವಿಂದರಾಜು ಸುಬ್ರಮಣಿ ಹಾರ್ಟ್‌ ಫೌಂಡೇಷನ್‌ ಸಹಯೋಗದೊಂದಿಗೆ 50 ಜನ ಬಡ ರೋಗಿಗಳಿಗೆ ಉಚಿತ ಇಂಡೋ-ಅಮೆರಿಕನ್‌ ಆಂಜಿಯೋಪ್ಲಾಸ್ಟಿಸ್ಟಂಟ್‌ ಅವಡಿಸುವ ಕಾರ್ಯಾಗಾರದಲ್ಲಿ ಪ್ರಾತ್ಸಾವಿಕವಾಗಿ ಅವರು ಮಾತನಾಡಿದರು.

Add Asianetnews Kannada as a Preferred SourcegooglePreferred

40 ವರ್ಷದೊಳಗಿನ ಹೃದಯಾಘಾತ ಪ್ರಕರಣ ವಿಪರೀತ ಹೆಚ್ಚುತ್ತಿವೆ. ಹಿಂದೆ ಮಕ್ಕಳು ಪೋಷಕರ ಹೃದಯ ಚಿಕಿತ್ಸೆಗೆ ಕರೆತರುತ್ತಿದ್ದರು. ಇಂದು ಪೋಷಕರೇ ಮಕ್ಕಳಿಗೆ ಕರೆ ತರುವಂತಾಗಿದೆ. ಸಕ್ಕರೆ ಕಾಯಿಲೆಯ ಶೇ.60ರಷ್ಟು ಜನರಿಗೆ ಹೃದ್ರೋಗ ಕಾಡುತ್ತಿದೆ. ಶೇ.50ರಷ್ಟುರಕ್ತದೊತ್ತಡ, ಶೇ.55ರಷ್ಟು ಧೂಮಪನಿಗಳೂ ಹೃದ್ರೋಗದಿಂದ ಬಳಲುತ್ತಿದ್ದಾರೆಂದರು. ಹೃದಯ ಕಾಯಿಲೆ ಶ್ರೀಮಂತರ ಕಾಯಿಲೆಯಾಗಿ ಈಗ ಉಳಿದಿಲ್ಲ. ಬಡವರು, ಕೂಲಿ ಕಾರ್ಮಿಕರು ಹೀಗೆ ನಗರದಿಂದ ಗ್ರಾಮೀಣ ಭಾಗಕ್ಕೂ ಕಾಯಿಲೆ ವಿಸ್ತಾರಗೊಂಡಿದೆ. ಧೂಮಪಾನ, ಸಕ್ಕರೆ ರೋಗ, ಮದ್ಯಪಾನ ಇದುವೇ ಹೃದಯಘಾತಕ್ಕೆ ಪ್ರಮುಖ ಕಾರಣವಾಗಿದ್ದು, ಇದರಿಂದ ದೂರವಿರಿ ಎಂದರು.

ಜನ​ಸ್ನೇಹಿ ಆಡ​ಳಿತ ನೀಡಿ, ಇಲ್ಲ ನಿಮ್ಮ ದಾರಿ ನೋಡಿ​ಕೊಳ್ಳಿ: ಸಂಸದ ಸುರೇಶ್‌ ಖಡಕ್‌ ವಾರ್ನಿಂಗ್‌

45 ತಾಲೂಕಿನಲ್ಲಿ ಹಬ್‌ ಆ್ಯಂಡ್‌ ಸ್ಪೋಕ್‌ ಯೋಜನೆ ಜಾರಿ: ಹೃದಯಘಾತವಾದಾಗ ಕೂಡಲೆ ವೈದ್ಯಕೀಯ ಚಿಕಿತ್ಸೆ ದೊರೆಯಲು ಬೆಳಗಾವಿ ಹಾಗೂ ಮೈಸೂರು ಭಾಗದ ಪ್ರತಿ 15ರಂತೆ 45 ತಾಲೂಕು ಆಸ್ಪತ್ರೆಯಲ್ಲಿ ಖಾಸಗಿ ಟ್ರೈಕಾ ಸಂಸ್ಥೆ ಮೂಲಕ ಹಬ್‌ ಆ್ಯಂಡ್‌ ಸ್ಪೋಕ್‌ ಯೋಜನೆ ಜಾರಿಗೆ ಕರಲಾಗಿದೆ. ತಾಲೂಕು ಆಸ್ಪತ್ರೆಯಲ್ಲಿ ಲಭ್ಯ ಇರುವ ವೈದ್ಯರಿಗೆ ಹೃದ್ರೋಗ ಕಾಯಿಲೆಗೆ ಪ್ರಾಥಮಿಕ ಚಿಕಿತ್ಸೆ ಕುರಿತಂತೆ ನಮ್ಮಿಂದ ತರಬೇತಿ ನೀಡಲಾಗಿದೆ ಎಂದರು. ಹೃದಯಾಘಾತಕ್ಕೊಳಗಾದ ರೋಗಿ ಈ ಆಸ್ಪತ್ರೆಗೆ ಬಂದಲ್ಲಿ ಅಲ್ಲಿನ ವೈದ್ಯರು ಜಯದೇವ ವೈದ್ಯರೊಂದಿಗೆ ಸಂಪರ್ಕಿಸಿ ಇಸಿಜಿ ಮಾಡಿ ಅಗತ್ಯ ಔಷಧಿ ನೀಡುವ ಮೂಲಕ ರೋಗಿಯನ್ನು ಪ್ರಾಣಾಪಾಯದಿಂದ ಪಾರಾಗುವ ಪ್ರಯತ್ನ ಮಾಡುವರು. ನಂತರ ಅಗತ್ಯವಿದ್ದಲ್ಲಿ ಅವರಿಗೆ ಉನ್ನತ ಆಸ್ಪತ್ರೆ ಸಾಧ್ಯವಾದಲ್ಲಿ ಜಯದೇವ ಆಸ್ಪತ್ರೆಗೆ ಕರೆತಂದು ಮುಂದಿನ ಚಿಕಿತ್ಸೆ ನೀಡಲಾಗುತ್ತದೆ. ಮುಂದಿನ ದಿನದಲ್ಲಿ ಹುಬ್ಬಳ್ಳಿ ಮತ್ತು ಮಂಗಳೂರು ಭಾಗದಲ್ಲಿ ತಲಾ 15 ಆಸ್ಪತ್ರೆ ಗುರುತಿಸುವ ಕೆಲಸ ನಡೆದಿದೆ ಎಂದರು.

ಕಲಬುರಗಿ ಟ್ರಾಮಾ ಆಸ್ಪತ್ರೆಗೆ ಮರುಜೀವ: ಹಿಂದಿನ ಕಾಂಗ್ರೆಸ್‌ ಆಡಳಿತಾವಧಿಯಲ್ಲೇ ಕಲಬುರಗಿಯಲ್ಲಿ ನಿರ್ಮಿಸಲಾದ ಟ್ರಾಮಾ ಸೆಂಟರ್‌ ಹಾಗೆ ಕುಳಿತಿತ್ತು, ಅದಕ್ಕೀಗ ಮರುಜೀವ ನೀಡಿ ಎರಡ್ಮೂರು ತಿಂಗಳಲ್ಲಿ ರೋಗಿಗಳಿಗೆ ಸೇವೆಗೆ ಅಣಿಗೊಳಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು. ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ರಸ್ತೆ ಅಪಘಾತ ಪ್ರಕರಣದಲ್ಲಿ ಗಾಯಾಳುಗಳಿಗೆ ಗೋಲ್ಡನ್‌ ಹವರ್‌ನಲ್ಲಿ ಚಿಕಿತ್ಸೆ ದೊರಕಿದಲ್ಲಿ ಪ್ರಾಣಾಪಾಯದಿಂದ ಪಾರಾಗಬಹುದು. 

ಈ ನಿಟ್ಟಿನಲ್ಲಿ ಕಲಬುರಗಿಯಲ್ಲಿ ಟ್ರಾಮಾ ಸೆಂಟರ್‌ ಸ್ಥಾಪಿಸಿ ವೈದ್ಯಕೀಯ ಉಪಕರಣಕ್ಕೆ 20 ಕೋಟಿ ರು. ಸಹ ಮೀಸಲಿಡಲಾಗಿತ್ತು. ಆದರೆ, ನಂತರ ಬಂದ ಸರ್ಕಾರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಅದು ಇದೂವರೆಗೆ ಅನುಷ್ಠಾನಕ್ಕೆ ಬಂದಿಲ್ಲವೆಂದು ವಿಷಾದಿಸಿದು. ಡಾ. ಸಿ.ಎನ್‌. ಮಂಜುನಾಥ ನೇತೃತ್ವದಲ್ಲಿ ಕಲಬುರಗಿ ಜಯದೇವ ಸಂಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು 2016ರಿಂದ ಇದೂವರೆಗ 9,964 ರೋಗಿಗಳಿಗೆ ಸ್ಟಂಟ್‌ ಅಳವಡಿಸಿದರೆ, 1,000 ಜನರಿಗೆ ಓಪನ್‌ ಹಾರ್ಟ್‌ ಸರ್ಜರಿ ಮೂಲಕ ಅವರ ಜೀವ ಉಳಿಸುವ ಕೆಲಸ ಮಾಡಿದೆ ಎಂದರು.

ಸ್ಟಂಟ್‌ ದಾನಿ ಡಾ. ಗೋವಿಂದ ಸುಬ್ರಹ್ಮಣಿ ಸೇವೆ ಶ್ಲಾಘನೆ: ಇದೇ ಸಂದರ್ಭದಲ್ಲಿ ಅಮೆರಿಕಾದಲ್ಲಿ ವಾಸಿಸಿರುವ ಡಾ.ಗೋವಿಂದರಾಜು ಸುಬ್ರಮಣಿ ಹಾರ್ಟ್‌ ಫೌಂಡೇಷನ್‌ ಸಂಸ್ಥೆಯ ಡಾ.ಗೋವಿಂದರಾಜು ಸುಬ್ರಮಣಿ ಅವರು ತಾಯ್ನಾಡಿಗೆ ಏನಾದರು ನೀಡಬೇಕೆಂಬ ಹಂಬಲದಿಂದ ಬಡ ಹೃದ್ರೋಗಿಗಳಿಗೆ ಸ್ಟಂಟ್‌ ಅಳವಡಿಕೆಗೆ ಕಲಬುರಗಿ-50 ಸೇರಿದಂತೆ ರಾಜ್ಯದ ಜಯದೇವ ಹೃದ್ರೋಗ ಸಂಸ್ಥೆಗೆ 250 ಸ್ಟಂಟ್‌ ಉಚಿತವಾಗಿ ದೇಣಿಗೆ ನೀಡಿದ್ದಕ್ಕಾಗಿ ಅವರ ಸಾಮಾಜಿಕ ಸೇವೆ ಕೊಂಡಾಡಿ, ಸರ್ಕಾರದ ಪರವಾಗಿ ಅವರಿಗೆ ಧನ್ಯವಾದ ಅರ್ಪಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ಸುಮಾರು 15-16 ಕೋಟಿ ರು. ಮೊತ್ತದ ಸ್ಟಂಟ್‌ ನೀಡಿದ ಡಾ.ರವಿ ಸುಬ್ರಮಣಿ ಅವರನ್ನು ಮತ್ತು ಡಾ. ಸಿ.ಎನ್‌. ಮಂಜುನಾಥ ಅವರನ್ನು ಈ ಭಾಗದ ರೋಗಿಗಳು ದೇವರು ಎಂದರು. ಡಿಎಚ್‌ಓ ಕಚೇರಿಗೆ ಸ್ವಂತ ಕಟ್ಟಡ ಶಂಕು ಸ್ಥಾಪನೆ ಮಾಡಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವರಲ್ಲಿ ಮನವಿ ಮಾಡಿಕೊಂಡರು. ಡಾ.ಗೋವಿಂದರಾಜು ಸುಬ್ರಮಣಿ ಮಾತನಾಡಿದರು. ಜಯದೇವ ಹೃದ್ರೋಗ ಸಂಸ್ಥೆಯ ಕಲಬುರಗಿ ಸಮನ್ವಯಾಧಿಕಾರಿ ಡಾ.ಬಾಬುರಾವ ಹುಡಗಿಕರ್‌, ಜಿಮ್ಸ್‌ ನಿರ್ದೇಶಕಿ ಡಾ.ಕವಿತಾ ಪಾಟೀಲ, ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ, ಜಿಲ್ಲಾ ಸರ್ಜನ್‌ ಡಾ.ಅಂಬಾರಾಯ ರುದ್ರವಾಡಿ, ಡಾ.ಶಂಕರ ಶಿರಾ ಇದ್ದರು.

ಮರಳು ಮಾಫಿಯಾಗೆ ಪೇದೆ ಬಲಿ: ಕರ್ತವ್ಯ ನಿರ್ಲಕ್ಷ ಆರೋಪದಡಿ ಮೂವರು ಪೊಲೀಸರ ಅಮಾನತ್ತು

ಕಲಬುರಗಿ ಜಯದೇವ ಸಾಧನೆ ನೋಟ: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್‌. ಮಂಜುನಾಥ ಮಾತನಾಡಿ, ಕಲಬುರಗಿ ಸಂಸ್ಥೆ 2016ರಲ್ಲಿ ಸ್ಥಾಪನೆಯಾಗಿದ್ದು, ಇಲಿಯವರೆಗೆ 4.50 ಲಕ್ಷ ಹೊರ ರೋಗಿಗಳು ತಪಾಸಣೆಗೆ ಒಳಪಟ್ಟಿದ್ದಾರೆ. 25 ಸಾವಿರ ರೋಗಿಗಳಿಗೆ ಎಂಜಿಯೋಗ್ರಾಂ, 10 ಸಾವಿರ ರೋಗಿಗಳಿಗೆ ಎಂಜಿಯೋಪ್ಲಾಸ್ವ್‌ ಮಾಡಲಾಗಿದೆ. 1 ಸಾವಿರ ಜನರಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗಿದೆ.