ಬರದ ನಡುವೆ ಸಾಂಪ್ರದಾಯಿಕ ದಸರಾದಲ್ಲೂ 29.25 ಕೋಟಿ ರು. ವೆಚ್ಚ- ಕಳೆದ ಬಾರಿಗಿಂಗ 51 ಲಕ್ಷ ಹೆಚ್ಚು ಖರ್ಚು
ಬರ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ದಸರಾ ಆಚರಿಸುವುದಾಗಿ ಹೇಳಿದ್ದರೂ ಕಳೆದ ಬಾರಿಗಿಂತ ಈ ಬಾರಿ 51 ಲಕ್ಷ ಖರ್ಚು ಹೆಚ್ಚಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ದಸರಾ ವಿಶೇಷಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದರು.
ಮೈಸೂರು : ಬರ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ದಸರಾ ಆಚರಿಸುವುದಾಗಿ ಹೇಳಿದ್ದರೂ ಕಳೆದ ಬಾರಿಗಿಂತ ಈ ಬಾರಿ 51 ಲಕ್ಷ ಖರ್ಚು ಹೆಚ್ಚಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ದಸರಾ ವಿಶೇಷಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದರು.
ಕಳೆದ ಬಾರಿ ದಸರಾದಲ್ಲಿ 28.74 ಕೋಟಿ ಖರ್ಚಾಗಿದ್ದರೆ, ಈ ಬಾರಿ 29.25 ಕೋಟಿ ಖರ್ಚಾಗಿದೆ. ಯುವ ದಸರಾ ಮಹೋತ್ಸವಕ್ಕೆ ಖ್ಯಾತ ಗಾಯಕರನ್ನು ಆಹ್ವಾನಿಸಿದ್ದರಿಂದ ವೆಚ್ಚ ಹೆಚ್ಚಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ವಿವರಿಸಿದರು.
2023ರ ದಸರೆಗೆ ಎಂಡಿಎ ವತಿಯಿಂದ 10 ಕೋಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 15 ಕೋಟಿ, ಪ್ರಾಯೋಜಕತ್ವದಿಂದ 2,25,70,000 ಟಿಕೆಟ್, ಗೋಲ್ಡ್ ಕಾರ್ಡ್ ಮಾರಾಟದಿಂದ 1,19,95,000, ಆಹಾರ ಮೇಳದಿಂದ 81,29,26,000 ಅನುದಾನ ಬಂದಿದ್ದು, ವಿವಿಧ ಉಪ ಸಮಿತಿಗಳ ಕಾರ್ಯಕ್ರಮ ಆಯೋಜನೆಯ ವೆಚ್ಚಕ್ಕೆ 27,05,22,049 ಆಗಿದ್ದು, ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆಗಳಿಗೆ ನೀಡಿದ ಅನುದಾನ 2.20 ಕೋಟಿ ಸೇರಿ ಒಟ್ಟು 29,25,22,049 ಆಗಿದೆ ಎಂದು ಅವರು ವಿವರಿಸಿದರು.
ಜಿಲ್ಲಾಧಿಕಾರಿ, ಜಿಪಂ, ಎಂಡಿಎ, ನಗರ ಪಾಲಿಕೆ ಸೇರಿದಂತೆ ಇನ್ನಿತರ ಇಲಾಖೆಗಳ ಲೆಕ್ಕಾಧಿಕಾರಿಗಳಿಂದ ದಸರಾ ಖರ್ಚು- ವೆಚ್ಚ ಪರಿಶೀಲಿಸಲಾಗಿದೆ. ಪ್ರತಿಯೊಂದು ಖರ್ಚುಗೂ ಬಿಲ್ ಪರಿಶೀಲಿಸಿದ ಮೇಲೆ ಲೆಕ್ಕ ಹಾಕಲಾಗಿದೆ. ಯಾವುದೇ ಸಣ್ಣ ಪುಟ್ಟ ವ್ಯತ್ಯಾಸವನ್ನೂ ಮೂಕ್ನಾಸ್ತು ಬಾರಿ ಲೆಕ್ಕಾಧಿಕಾರಿಗಳು ಪರಿಶೀಲಿಸಿದ ಮೇಲೆ ಅಂತಿಮಗೊಳಿಸಲಾಗಿದೆ ಎಂದು ಅವರು ಹೇಳಿದರು.
ರಾಜ್ಯಸ ರ್ಕಾರದಿಂದ ಈ ಬಾರಿ ಅನುದಾನ ನಿರೀಕ್ಷಿಸಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡಿದ್ದ ಅನುದಾನ ಸೇರಿ ಇನ್ನಿತರ ಅನುದಾನ ಮಾತ್ರ ಬಳಸಲಾಗಿದೆ. ಸರ್ಕಾರವು ಅದ್ದೂರಿ ಅಥವಾ ಸರಳ ಎನ್ನದೆ ಸಾಂಪ್ರದಾಯಿಕವಾಗಿ ಆಚರಿಸಿದ್ದರಿಂದ ಹೆಚ್ಚಿನ ಅನುದಾನ ಕೇಳದೆ ಇರುವುದಲ್ಲಿ ನಿರ್ವಹಣೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಯುವ ದಸರಾವನ್ನು ಏಳು ದಿನಗಳಿಂದ ನಾಲ್ಕು ದಿನಕ್ಕೆ ಸೀಮಿತಗೊಳಿಸಿದರೂ ಅತಿ ಹೆಚ್ಚು 5.88 ಕೋಟಿ ಖರ್ಚು ಮಾಡಲಾಗಿದೆ. ಕಳೆದ ವರ್ಷ ಯುವ ಸಂಭ್ರಮ ಮತ್ತು ಯುವ ದಸರಾದಿಂದ 6.36 ಕೋಟಿ ವೆಚ್ಚವಾಗಿದ್ದರೆ, ಈ ಬಾರಿ ಯುವ ಸಂಭ್ರಮಕ್ಕೆ 2 ಕೋಟಿ, ಯುವ ದಸರೆಗೆ 5.88 ಕೋಟಿ ಆಗಿದೆ. ಈ ಬಾರಿ ನಾಲ್ಕು ದಿನಗಳಾದರೂ ಪ್ರತಿನಿತ್ಯ ಮೂವರು ಹೆಸರಾಂತ ಗಾಯಕರನ್ನು ಆಹ್ವಾನಿಸಿದ್ದರಿಂದಾಗಿ ಖರ್ಚು ಹೆಚ್ಚಾಗಿದೆ ಎಂದರು.
ಕಳೆದ ವರ್ಷಗಳಲ್ಲಿ ಪ್ರತಿನಿತ್ಯ ಒಬ್ಬೊಬ್ಬರು ಕಲಾವಿದರು ಕಾರ್ಯಕ್ರಮ ನಡೆಸಿಕೊಟ್ಟರೆ, ಈ ಬಾರಿ ನಿತ್ಯ ಮೂವರು ಗಾಯಕರ ಸಂಗೀತ ಕಾರ್ಯಕ್ರಮ ಆಯೋಜಿಸಿದ್ದರಿಂದಲೇ ವೆಚ್ಚ ಹೆಚ್ಚಾಯಿತೇ ಹೊರತು ಬೇರೇನೂ ಇಲ್ಲ ಎಂದರು.
ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಎಂ.ಕೆ. ಸವಿತಾ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ಎಸ್. ಚಂದ್ರಶೇಖರ್ ಮೊದಲಾದವರು ಇದ್ದರು.