Asianet Suvarna News Asianet Suvarna News

ಬೆಂಗಳೂರಿನ ವಾಯು ಗುಣಮಟ್ಟ ಯೋಜನೆಗೆ 279 ಕೋಟಿ

ಬಿಬಿಎಂಪಿ, ಮಾಲಿನ್ಯ ನಿಯಂತ್ರಣ ಮಂಡಳಿ ಸಿದ್ಧಪಡಿಸಿದ್ದ ಯೋಜನೆ| ನಗರಾಭಿವೃದ್ಧಿ ಇಲಾಖೆ ಅನುಮೋದನೆ| ವಾಯು ಮಾಲಿನ್ಯ ನಿಯಂತ್ರಣಕ್ಕೆ ಟ್ರಾಫಿಕ್‌ ಜಂಕ್ಷನ್‌ಗಳಲ್ಲಿ ಕಾರಂಜಿ ನಿರ್ಮಿಸಲು ಬಿಬಿಎಂಪಿ ಚಿಂತನೆ| ವಾಯು ಗುಣಮಟ್ಟದ ಜಾಗೃತಿ ಅಭಿಯಾನ| 

279 Crore for Air Quality Project in Bengaluru grg
Author
Bengaluru, First Published Nov 5, 2020, 8:48 AM IST

ಬೆಂಗಳೂರು(ನ.05): ನಗರದ ವಾಯು ಗುಣಮಟ್ಟಸುಧಾರಣೆಗೆ ಹಾಗೂ ವಾತಾವರಣದ ಗಾಳಿಯ ಗುಣಮಟ್ಟದ ಮೇಲೆ ನಿಗಾ ಇಡುವುದಕ್ಕಾಗಿ ಬಿಬಿಎಂಪಿ ಹಾಗೂ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಸಿದ್ಧಪಡಿಸಿದ್ದ 279 ಕೋಟಿ ಯೋಜನೆಗೆ ನಗರಾಭಿವೃದ್ಧಿ ಇಲಾಖೆ ಅನುಮೋದನೆ ನೀಡಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ವಾಯು ಗುಣಮಟ್ಟದ ಸುಧಾರಣೆಗೆ 15ನೇ ಹಣಕಾಸು ಆಯೋಗದ ಅನುದಾನ ಬಳಸಲು ಪಾಲಿಕೆಯು ಕೇಂದ್ರ ಪರಿಸರ, ಅರಣ್ಯ ಮತ್ತು ವಾತಾವರಣ ಬದಲಾವಣೆ ಸಚಿವಾಲಯಕ್ಕೆ ಸಲ್ಲಿಸಿದ್ದ ಒಂಬತ್ತು ಅಂಶಗಳ ಪರಿಷ್ಕೃತ ಕಾರ್ಯ ಯೋಜನೆಗಳಿಗೆ ಅನುಮತಿ ನೀಡಿದ್ದು, ಅನುಷ್ಠಾನಕ್ಕೆ ಮುಂದಾಗುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚನೆ ನೀಡಿದೆ.

ವಾಯು ಗುಣಮಟ್ಟಕ್ಕೆ ಸಂಬಂಧಿಸಿದ ಸಮಗ್ರ ದತ್ತಾಂಶಗಳ ಮೇಲೆ ನಿಗಾ ಇಡಲು 44 ಕೋಟಿ ಹಾಗೂ ಕಸ ವಿಲೇವಾರಿ ಮೇಲೆ ನಿಗಾ ಇಡಲು 22.22 ಕೋಟಿ ವೆಚ್ಚದಲ್ಲಿ ಪ್ರತ್ಯೇಕ ಕೇಂದ್ರೀಕೃತ ನಿಯಂತ್ರಣ ಮತ್ತು ಕಮಾಂಡ್‌ ಕೇಂದ್ರಗಳ ಸ್ಥಾಪನೆ, ಕಸ ಗುಡಿಸುವ ಯಂತ್ರ, ನೀರು ಚಿಮುಕಿಸುವ ಯಂತ್ರ ಖರೀದಿ- ನಿರ್ವಹಣೆಗೆ 50.22 ಕೋಟಿ, ಸಂಚಾರ ವ್ಯವಸ್ಥೆ ಸುಧಾರಣೆಗೆ 50.22 ಕೋಟಿ ಸೇರಿದಂತೆ ಹಲವು ಯೋಜನೆಗಳಿವೆ. ವಾಯು ಮಾಲಿನ್ಯ ನಿಯಂತ್ರಣಕ್ಕೆ ಟ್ರಾಫಿಕ್‌ ಜಂಕ್ಷನ್‌ಗಳಲ್ಲಿ ಕಾರಂಜಿ ನಿರ್ಮಿಸಲು ಬಿಬಿಎಂಪಿ ಚಿಂತನೆ ನಡೆಸಿದೆ. ಈ ಕಾರಂಜಿಗಳಿಗೆ ಶುದ್ಧೀಕರಿಸಿದ ತ್ಯಾಜ್ಯ ನೀರನ್ನು ಬಳಸುವ ಪ್ರಸ್ತಾವವನ್ನು ಪಾಲಿಕೆ ಹೊಂದಿದೆ.

ಮಾಲಿನ್ಯ ತಗ್ಗಿಸಲು ದೆಹಲಿ ಸರ್ಕಾರದ ಹೊಸ ಪ್ಲಾನ್!

ವಾಹನಗಳಿಂದ ಹೊಗೆ ಹೊರ ಸೂಸುವಿಕೆ ಪ್ರಮಾಣ ಪತ್ತೆಗೆ ಕೃತಕ ಬುದ್ಧಿಮತ್ತೆಯನ್ನು ಬಳಸಲಿದೆ. ಇದಕ್ಕಾಗಿ ಶಬ್ಧ ಮಾಪಕಗಳು, ವಾತಾವರಣ ಸೇರುವ ಹೊಗೆಯ ಪ್ರಮಾಣ ಪತ್ತೆ ಹಚ್ಚುವ ಪರಿಕರಗಳು, ರಸ್ತೆಯಲ್ಲಿ ಕಸ ಗುಡಿಸುವ ಯಂತ್ರಗಳು, ನೀರು ಚಿಮುಕಿಸುವ ಯಂತ್ರಗಳನ್ನು ಖರೀದಿಸಲಿದೆ. ಕಸ ಸುಡುವುದರಿಂದ ವಾತಾವರಣದ ಗಾಳಿಯ ಮೇಲಾಗುವ ಪ್ರಮಾಣ ಪತ್ತೆ ಹಾಗೂ ಅದರಿಂದ ಉಂಟಾಗುವ ದುಷ್ಟರಿಣಾಮಗಳ ನಿಯಂತ್ರಣ ಕ್ರಮಗಳನ್ನು ಈ ಯೋಜನೆ ಒಳಗೊಂಡಿದೆ.

ನಗರದ ಹಸಿರೀಕರಣ, ರಸ್ತೆ ಗುಂಡಿ ಮುಚ್ಚುವಿಕೆ, ರಸ್ತೆಗಳನ್ನು ಕತ್ತರಿಸಿದರೆ ಅವುಗಳನ್ನು ವೈಜ್ಞಾನಿಕವಾಗಿ ದುರಸ್ತಿಪಡಿಸುವ ನಿರ್ದಿಷ್ಟ ಕಾರ್ಯಕ್ರಮಗಳನ್ನು ಬಿಬಿಎಂಪಿ ರೂಪಿಸಲಿದೆ. ವಾಯು ಗುಣಮಟ್ಟದ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳಲಿದೆ. ರಸ್ತೆಗಳಲ್ಲಿ ವಾಹನ ಸಂಚಾರದ ವೇಳೆ ಪಥ ಶಿಸ್ತು (ಲೇನ್‌ ಡಿಸಿಪ್ಲಿನ್‌) ಕಾಪಾಡುವುದು, ಬಸ್‌ ಮಾರ್ಗಗಳ ನಿರ್ಮಾಣ, ಟೆಂಡರ್‌ಶ್ಯೂರ್‌ ರಸ್ತೆಗಳ ನಿರ್ಮಾಣ, ಪಾದಚಾರಿ ಮಾರ್ಗಗಳ ಅಭಿವೃದ್ಧಿ, ಸಾರ್ವಜನಿಕ ಸ್ಥಳಗಳಲ್ಲಿ ಕಟ್ಟಡ ತ್ಯಾಜ್ಯ ತೆರವಿನಿಂದ ಆಗುವ ಮಾಲಿನ್ಯದ ವೇಳೆ ನಿಗಾ ಇಡುವುದು ಈ ಯೋಜನೆಯಲ್ಲಿ ಸೇರಿದೆ.
 

Follow Us:
Download App:
  • android
  • ios