ದ.ಕ.ದ ವಿವಿಧೆಡೆ ವಾರದಿಂದ ಉರಿದ ಬೆಂಕಿ ಈಗ ನಿಯಂತ್ರಣಕ್ಕೆ, ಅಗ್ನಿ ನಂದಿಸಲು ವಿವಿಧ ಇಲಾಖೆಗಳ ಹರಸಾಹಸ. 

ಮಂಗಳೂರು(ಮಾ.12): ಪಶ್ಚಿಮಘಟ್ಟದಲ್ಲಿ ಕಳೆದೊಂದು ವಾರದಿಂದ ಕಾಣಿಸಿಕೊಂಡಿದ್ದ ಕಾಡ್ಗಿಚ್ಚು ಶನಿವಾರ ನಿಯಂತ್ರಣಕ್ಕೆ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಹಾಗೂ ಕಡಬ ತಾಲೂಕು ವ್ಯಾಪ್ತಿಯ ರಕ್ಷಿತಾರಣ್ಯಗಳಲ್ಲಿ ಬೇಸಿಗೆಯ ಝಳಕ್ಕೆ ಹಠಾತ್‌ ಕಾಣಿಸಿಕೊಂಡಿದ್ದ ಬೆಂಕಿಯ ಕೆನ್ನಾಲಗೆಗೆ ಸುಮಾರು 250 ಎಕರೆ ಅರಣ್ಯ ಪ್ರದೇಶ ನಾಶವಾಗಿದೆ. ಅರಣ್ಯ ಇಲಾಖೆ, ರೈಲ್ವೆ ಇಲಾಖೆ, ಅಗ್ನಿಶಾಮಕದಳ ಹಾಗೂ ಸ್ಥಳೀಯರ ನೆರವಿನಿಂದ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ.

Add Asianetnews Kannada as a Preferred SourcegooglePreferred

ಬೆಳ್ತಂಗಡಿಯ ಶಿಶಿಲ, ಶಿಬಾಜೆ, ಅರಸಿನಮಕ್ಕಿ, ದಿಡುಪೆ, ನೆರಿಯಾ, ಕೊಣಾಜೆ, ಸಿರಿಬಾಗಿಲು, ಕೊಣಾಜೆಗಳ ರಕ್ಷಿತಾರಣ್ಯಗಳಿಗೆ ಬೆಂಕಿ ಬಿದ್ದಿತ್ತು. ಈ ಹಿಂದೆಯೂ ಪಶ್ಚಿಮಘಟ್ಟದಲ್ಲಿ ಅಲ್ಲಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆದರೆ, ಅವೆಲ್ಲ ಸಣ್ಣಪುಟ್ಟಕಾಡ್ಗಿಚ್ಚಾಗಿದ್ದು, ಬೇಗನೆ ಶಮನವಾಗುತ್ತಿದ್ದವು. ಈ ಬಾರಿಯ ಕಾಡ್ಗಿಚ್ಚು ಹತೋಟಿಗೆ ಬರಲು ಒಂದು ವಾರ ಹಿಡಿಯಿತು.

Forest fire: ನೆರಿಯ, ಉಜಿರೆ ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಅನಾಹುತ

ಕೊಯಿರಾ ಬೆಟ್ಟಕ್ಕೆ ಬೆಂಕಿ:

ಈ ಮಧ್ಯೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಐತಿಹಾಸಿಕ ಕೊಯಿರಾ ಬೆಟ್ಟಕ್ಕೆ ಬೆಂಕಿ ಬಿದ್ದು, 50 ಎಕರೆಗೂ ಅಧಿಕ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದ್ದು, ಔಷಧೀಯ ಸಸ್ಯಗಳು, ಗಿಡ, ಮರ, ಬಳ್ಳಿಗಳು ಭಸ್ಮವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.