23 ವರ್ಷದ ಯುವಕನೋರ್ವ ಬರೋಬ್ಬರಿ 3300 ಕಿಲೋ ಮೀಟರ್ ಕ್ರಮಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಹಾಗಾದ್ರೆ ಈ ಪಾದಯಾತ್ರೆ ವೇಳೆ ಆತ ಮಾಡಿರೋದೇನು ?

ಕಾರವಾರ[ಜ.23]: ಜನರಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಬೇಕು. ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡಬೇಕು. ಇದಕ್ಕೆ ತನ್ನ ಅಳಿಲು ಸೇವೆ ಮಾಡಬೇಕು ಎಂದು ನಿರ್ಧರಿಸಿದ ಯುವಕ ದೇಶಾದ್ಯಂತ ಪಾದಯಾತ್ರೆ ಮೂಲಕ ಜನಜಾಗೃತಿ ಮಾಡುತ್ತಾ ಸಾಗುತ್ತಿದ್ದಾರೆ. 23 ವರ್ಷದ ತಮಿಳುನಾಡಿನ ಇಮಾನ್ಯೂ ವಲ್ ಜೋಸೆಫ್‌ರಾಜ ಬಿಟೆಕ್ ಪದವಿ ಶಿಕ್ಷಣ ಮುಗಿದ ತಕ್ಷಣ ಏನಾದರೂ ವಿಭಿನ್ನ ರೀತಿಯಲ್ಲಿ ಸಮಾಜಕ್ಕೆ ಸಂದೇಶ ನೀಡಬೇಕು ಎನ್ನುವ ಮಹದಾಸೆಯಿಂದ ಪ್ಲಾಸ್ಟಿಕ್ ಬಳಕೆ ಮಾಡಬೇಡಿ ಎಂದು ಜಾಗೃತಿ ಮೂಡಿಸಲು ಪಾದಯಾತ್ರೆ ಕೈಗೊಂಡಿದ್ದಾರೆ.

Add Asianetnews Kannada as a Preferred SourcegooglePreferred

ಪ್ಲಾಸ್ಟಿಕ್ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯ ಬೇಡಿ, ಕಸದ ಬುಟ್ಟಿಯಲ್ಲೇ ಹಾಕಿ ಎಂದು ನಾಮಫಲಕವನ್ನು ಹಾಕಿಕೊಂಡಿದ್ದು, ಇದನ್ನು ಕನ್ನಡದಲ್ಲೇ ಬರೆದದ್ದು ವಿಶೇಷವಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ ಆಯಾ ರಾಜ್ಯಕ್ಕೆ ತೆರಳಿದಾಗ ಅಲ್ಲಿನವರಲ್ಲಿ ವಿನಂತಿಸಿ ಆಯಾ ಭಾಷೆಯಲ್ಲೇ
ಬರೆದುಕೊಂಡು ರಾಜ್ಯ ಸುತ್ತುತ್ತೇನೆ ಎನ್ನುತ್ತಾರೆ. ಪ್ಲಾಸ್ಟಿಕ್ ಬೆಂಕಿಗೆ ಹಾಕಿ ಉರಿಸಬೇಡಿ ಎಂಬ ಬರಹವನ್ನು ಬರೆದಿದ್ದಾರೆ. ತಮಿಳು ಹಾಗೂ ಇಂಗ್ಲಿಷ್‌ನಲ್ಲಿ ಜನರೊಂದಿಗೆ ಸಂವಹನ ನಡೆಸುತ್ತಾರೆ.

2019 ರ ಆ. 23 ರಂದು ಕೋಲ್ಕತ್ತಾದಿಂದ ಆರಂಭವಾದ ಈ ಯಾತ್ರೆ ಕೋಲ್ಕತಾ, ಒಡಿಶಾ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಮುಗಿಸಿ ಕರ್ನಾಟಕದ ಮಂಗಳೂರಿನ ಮೂಲಕ ಗೋಕರ್ಣ, ಕಾರವಾರ, ಗೋವಾ, ಮಹಾರಾಷ್ಟ್ರ, ಗುಜರಾತ್‌ನ ದ್ವಾರಕಾಕ್ಕೆ ತೆರಳಲಿದ್ದಾರೆ. ದ್ವಾರಕಾದಲ್ಲಿ ಪಾದಯಾತ್ರೆ ಕೊನೆಗೊಳ್ಳಲಿದೆ. 

ಮೇದಿನಿ ಎಂಬ ಸುಂದರ ಊರಲ್ಲಿ 2ಹಗಲು 1ರಾತ್ರಿ : ಇಲ್ಲಿ ಜೀವಕ್ಕೆ ಗ್ಯಾರಂಟಿ ಇಲ್ಲ!...

ಇದುವರೆಗೆ3300 ಕಿಮೀ ದೂರ ಕ್ರಮಿಸಿದ್ದಾರೆ. 15 ಕೆಜಿ ಇರುವ ಇವರ ಬ್ಯಾಗ್ ಜತೆಗೆ ಹೆಜ್ಜೆ ಹಾಕುತ್ತಾರೆ. ಸಂಜೆ ಆಗುತ್ತಿದ್ದಂತೆ ತಲುಪಿದ ಊರಿನಲ್ಲಿನ ದೇವಾಲಯ, ಮಸೀದಿ, ಚರ್ಚ್ ಒಳಗೊಂಡು ಧಾರ್ಮಿಕ ಸ್ಥಳದ ಆವಾರ ಇಲ್ಲವೇ ಪೆಟ್ರೋಲ್ ಬಂಕ್‌ನಲ್ಲಿ ರಾತ್ರಿ ವಸತಿ ಮಾಡುತ್ತಾ ಬಂದಿದ್ದು, ತಿಂಡಿ, ಊಟ ಸಹಿತ ಉಚಿತವಾಗುವ ಸ್ಥಳದಲ್ಲೇ ಪಡೆದು ಸಾಗುತ್ತಾರೆ. ಹೀಗಾಗಿ ಹಣದ ಅವಶ್ಯಕತೆಯಿಲ್ಲ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಜೋಸೆಫ್‌ರಾಜ ತಂದೆ ಸೈನದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಹೋದರ ಮತ್ತು ಸಹೋದರಿ ಯರಿದ್ದು, ಸೋದರಿಯ ವಿವಾಹವಾಗಿದೆ. ಸಹೋದರ ವ್ಯಾಸಂಗ ಮಾಡುತ್ತಿದ್ದಾನೆ. ಜೋಸೆಫ್‌ರಾಜ ಪ್ರತಿನಿತ್ಯ ಕುಟುಂಬದೊಂದಿಗೆ ದೂರವಾಣಿ ಮೂಲಕ ಮಾತನಾಡುತ್ತಿದ್ದು,
ನಿಕಟ ಸಂಪರ್ಕದಲ್ಲಿದ್ದಾರೆ. ಉನ್ನತ ವ್ಯಾಸಂಗ ಮಾಡಿ ದುಡಿಯತ್ತ ಹೋಗಬೇಕಿದ್ದ ಯುವಕ ಸಮಾಜದಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದು, ವಿಶೇಷವೇ ಸರಿ.