Asianet Suvarna News Asianet Suvarna News

ಕೊಡಗಿನಲ್ಲಿ ಮಿತಿಮೀರಿದ ಗಜರಾಜನ ಹಾವಳಿ: 10 ವರ್ಷದಲ್ಲಿ ಕಾಡಾನೆ ದಾಳಿಗೆ 20 ಜನರ ಸಾವು

ಕಳೆದ 10 ವರ್ಷಗಳಲ್ಲಿ ಇದೊಂದೇ ಗ್ರಾಮದಲ್ಲಿ ಬರೋಬ್ಬರಿ 20 ಜನರು ಕಾಡಾನೆಗಳ ದಾಳಿಗೆ ತಮ್ಮ ಪ್ರಾಣತೆತ್ತಿದ್ದಾರೆ ಎನ್ನುವುದು ಎಂಥ ಭಯಾನಕ ವಿಷಯ. 

20 People Dies Due to Elephant Attack in Last 10 Years at Kodagu grg
Author
First Published Feb 8, 2024, 11:00 PM IST

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು(ಫೆ.08): ಕೊಡಗು ಜಿಲ್ಲೆಯಲ್ಲಿ ವನ್ಯಜೀವಿ ಮಾನವ ಸಂಘರ್ಷ ಹೊಸದೇನು ಅಲ್ಲ ಬಿಡಿ. ಆದರೆ ಇದೊಂದು ಊರಿನಲ್ಲಿ ಕಾಡಾನೆ ಮತ್ತು ಚಿರತೆ ದಾಳಿ ಹೇಳತೀರದು. ಅದು ಎಷ್ಟರ ಮಟ್ಟಿಗೆ ಎಂದರೆ ಕಳೆದ 10 ವರ್ಷಗಳಲ್ಲಿ ಇದೊಂದೇ ಗ್ರಾಮದಲ್ಲಿ ಬರೋಬ್ಬರಿ 20 ಜನರು ಕಾಡಾನೆಗಳ ದಾಳಿಗೆ ತಮ್ಮ ಪ್ರಾಣತೆತ್ತಿದ್ದಾರೆ ಎನ್ನುವುದು ಎಂಥ ಭಯಾನಕ ವಿಷಯ. 

ಹೌದು, ಕುಶಾಲನಗರ ತಾಲ್ಲೂಕಿನ ಚಿನ್ನೇನಹಳ್ಳಿಯಲ್ಲಿ ವಿಪರೀತ ಕಾಡಾನೆಗಳ ಹಾವಳಿ ಇದೆ. ಅರಣ್ಯದ ಅಂಚಿನ ಗ್ರಾಮವಾಗಿರುವುದರಿಂದ ರಾತ್ರಿ ಹೊತ್ತು ಅಷ್ಟೇ ಅಲ್ಲ ಹಗಲು ಹೊತ್ತಿನಲ್ಲೂ ಆನೆಗಳ ಕಾಟ ಮಿತಿಮೀರಿ ಹೋಗಿದೆ. ಸಂಜೆಯಾಯಿತ್ತೆಂದರೆ ಮನೆಗಳ ಸುತ್ತ ಬಂದು ಓಡಾಡುತ್ತವೆ. ಹೀಗಾಗಿ ಸಂಜೆ ಆಗಿತ್ತೆಂದರೆ ಇಲ್ಲಿನ ಜನರು ಮನೆ ಸೇರಿ ಬಾಗಿಲು ಹಾಕಿಕೊಂಡು ಒಳಗೇ ಇರಬೇಕು. ಆದರೂ ಆನೆಗಳು ಬಂದು ಮನೆಗೇನೇ ಅಟ್ಯಾಕ್ ಮಾಡುತ್ತವೆ ಎಂದು ಜನರು ಆತಂಕ ವ್ಯಕ್ತಪಡಿಸುತ್ತಾರೆ. 

ಮೈಸೂರು ಸಿಂಹನ ವಿರುದ್ಧ ಗುಟುರು ಹಾಕುತ್ತಿದೆ ಹಳ್ಳಿಹಕ್ಕಿ: ಲೋಕಸಭೆಗೆ ಕೈನಿಂದ ಸ್ಪರ್ಧಿಸಲು ವಿಶ್ವನಾಥ್ ಸಜ್ಜು!

ಗುರುವಾರವೂ ಕೂಡ ಆನೆಯೊಂದು ಚಿನ್ನೇನಹಳ್ಳಿಯ ವೆಂಕಟಮ್ಮ ಎಂಬ ವೃದ್ಧೆಯ ಮೇಲೆ ಅಟ್ಯಾಕ್ ಮಾಡಿದೆ. ಪರಿಣಾಮ ವೃದ್ಧೆ ವೆಂಕಟಮ್ಮ ಅವರ ಕಾಲು ನಜ್ಜುಗುಜ್ಜಾಗಿದೆ. ತಕ್ಷಣವೇ ಅವರನ್ನು ಮೈಸೂರು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಹಿಂದೆಯೂ ಇದೇ ವೆಂಕಟಮ್ಮ ಅವರ ಮೇಲೆ ಕಾಡಾನೆ ದಾಳಿ ಮಾಡಿತ್ತು. ಆಗ ಅವರು ಅಚ್ಚರಿಯಾಗಿ ಬಚಾವ್ ಆಗಿದ್ದರಂತೆ. ವಿಪರ್ಯಾಸ ಎಂದರೆ ಕಳೆದ 30 ವರ್ಷಗಳ ಹಿಂದೆಯೇ ವೆಂಕಟಮ್ಮ ಅವರ ಮಾವನನ್ನು ಆನೆ ಕೊಂದು ಹಾಕಿತ್ತಂತೆ. ಇದೀಗ ವೆಂಕಟಮ್ಮ ಅವರ ಮೇಲೆ ಅಟ್ಯಾಕ್ ಮಾಡಿದೆ. ಗ್ರಾಮದಲ್ಲಿ ಕಳೆದ 10 ವರ್ಷಗಳಲ್ಲಿ 50 ಕ್ಕೂ ಹೆಚ್ಚು ಜನರ ಮೇಲೆ ಕಾಡಾನೆಗಳ ದಾಳಿ ಆಗಿದ್ದು, 20 ಜನರನ್ನು ಆನೆಗಳು ಬಲಿ ಪಡೆದಿವೆ. ಇಷ್ಟೆಲ್ಲಾ ಆದರೂ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮದವರು ಅಷ್ಟೇ ಅಲ್ಲ ಮರೂರು, ಆರನೇ ಹೊಸಕೋಟೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅರಣ್ಯದ ಅಂಚಿನಲ್ಲಿ ಸೋಲಾರ್ ವಿದ್ಯುತ್ ಬೇಲಿಯನ್ನು ನಿರ್ಮಿಸಲಾಗಿದ್ದರೂ ಅದು ಅಷ್ಟರ ಮಟ್ಟಿಗೆ ಪ್ರಯೋಜನವಾಗಿಲ್ಲ. ಆನೆ ಕಂದಕಗಳನ್ನು ನಿರ್ಮಿಸಿದ್ದರೂ ಆಳವಾಗಿ ತೋಡದೆ ಇರುವುದರಿಂದ ಅವುಗಳು ಸುಲಭವಾಗಿ ಕಂದಕವನ್ನು ದಾಟಿ ಗ್ರಾಮಕ್ಕೆ ಬರುತ್ತಿವೆ ಎನ್ನುವುದು ಗ್ರಾಮದವರಾದ ಮಂಜುಳ ಅವರ ಅಸಮಾಧಾನ. ಹೀಗೆ ಆನೆಗಳ ದಾಳಿಯಿಂದ ಏನಾದರೂ ತೊಂದರೆ ಆದಾಗ ಮಾತ್ರ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಹಾರ ತೋರಿಸಿ ಜನರನ್ನು ಸುಮ್ಮನಿರಿಸಿ ಹೋಗುತ್ತಾರೆ. ಆ ನಂತರ ಮತ್ತೊಂದು ಕಾಡಾನೆಯ ದಾಳಿ ಆಗುವವರೆಗೆ ಕಾಡು ಪ್ರಾಣಿಗಳಿಂದ ಜನರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ತಿರುಗಿಯೂ ನೋಡುವುದಿಲ್ಲ ಎಂದು ಸ್ಥಳೀಯರಾದ ಗಿರೀಶ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ರಾಜ್ಯಗಳ ಶಕ್ತಿ ಕುಂದಿಸುವ ಯತ್ನ ಕೇಂದ್ರ ಸರ್ಕಾರದಿಂದ ಆಗುತ್ತಿದೆ: ಸಚಿವ ಕೃಷ್ಣ ಭೈರೇಗೌಡ ಕಿಡಿ

ಅರಣ್ಯ ಇಲಾಖೆಯ ಈ ನಡವಳಿಕೆಯಿಂದ ಬೇಸತ್ತಿರುವ ಜನರು ಅರಣ್ಯ ಇಲಾಖೆ ವಿರುದ್ಧವೇ ಪೊಲೀಸ್ ಇಲಾಖೆಗೆ ದೂರು ನೀಡಲು ಮುಂದಾಗಿದ್ದಾರೆ. ಆನೆಗಳ ಕಾಟ ಅಷ್ಟೇ ಅಲ್ಲ, ಇದರ ಜೊತೆಗೆ ಚಿರತೆಗಳ ಕಾಟವೂ ವಿಪರೀತವಾಗಿದೆ. ಹೀಗಾಗಿ ನಮ್ಮ ಮಕ್ಕಳನ್ನು ನೆಮ್ಮದಿಯಿಂದ ಶಾಲೆಗೆ ಕಳುಹಿಸುವಂತಿಲ್ಲ. ಇಲ್ಲ ಓದಿಸದೆ ಮನೆಯಲ್ಲಿಯೂ ಉಳಿಸಿಕೊಳ್ಳುವಂತಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ಬದುಕು ದೂಡಬೇಕಾಗಿದೆ ಎಂದು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ಒಟ್ಟಿನಲ್ಲಿ ಚಿನ್ನೇನಹಳ್ಳಿ ಗ್ರಾಮ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಕಾಡಾನೆಗಳ ದಾಳಿಗೆ ಕಳೆದ 10 ವರ್ಷದಲ್ಲಿ 20 ಜನರು ಪ್ರಾಣ ತೆತ್ತಿರುವುದು ಈ ವ್ಯಾಪ್ತಿಯ ಜನರ ಬದುಕಿನ ದುಸ್ಥರತೆಯನ್ನು ಸೂಚಿಸುತ್ತದೆ.

Follow Us:
Download App:
  • android
  • ios