ನಗರ ಕಡಪ- ಬೆಂಗಳೂರು ಬೈಪಾಸ್‌ ರಸ್ತೆಯಲ್ಲಿರುವ ಜೆಕೆ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಗರದ ವಾರ್ಡ್‌ ನಂ 26ರ ಮುಖಂಡ ಅಸ್ಲಾಂ ಸೇರಿದಂತೆ 20ಕ್ಕೂ ಹೆಚ್ಚು ಯುವಕರು ಕಾಂಗ್ರೇಸ್‌ ಪಕ್ಷವನ್ನು ತೊರೆದು ಶಾಸಕ ಜೆಕೆ ಕೃಷ್ಣಾರೆಡ್ಡಿರ ಸಮ್ಮುಖದಲ್ಲಿ ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಗೊಂಡರು.

ಚಿಂತಾಮಣಿ (ನ.14) : ನಗರ ಕಡಪ- ಬೆಂಗಳೂರು ಬೈಪಾಸ್‌ ರಸ್ತೆಯಲ್ಲಿರುವ ಜೆಕೆ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಗರದ ವಾರ್ಡ್‌ ನಂ 26ರ ಮುಖಂಡ ಅಸ್ಲಾಂ ಸೇರಿದಂತೆ 20ಕ್ಕೂ ಹೆಚ್ಚು ಯುವಕರು ಕಾಂಗ್ರೇಸ್‌ ಪಕ್ಷವನ್ನು ತೊರೆದು ಶಾಸಕ ಜೆಕೆ ಕೃಷ್ಣಾರೆಡ್ಡಿರ ಸಮ್ಮುಖದಲ್ಲಿ ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಗೊಂಡರು.

ಕ್ಷೇತ್ರದ ಜನತೆಯ ಆಶೀರ್ವಾದದೊಂದಿಗೆ ಮುಂಬರುವ 2023 ರ ವಿಧಾನಸಭೆ ಚುನಾವಣೆಯಲ್ಲಿ (Election) ಜೆಡಿಎಸ್‌ (JDS) ಪಕ್ಷದಿಂದ ಮೂರನೇ ಬಾರಿಗೆ ಗೆಲುವಿನ ಹ್ಯಾಟ್ರಿಕ್‌ ಸಾಧಿಸಲಿದ್ದೇನೆಂದು ಶಾಸಕ ಜೆಕೆ ಕೃಷ್ಣಾರೆಡ್ಡಿ ನುಡಿದರು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಮಂಜುನಾಥ್‌, ದೇವಳಂ ಶಂಕರ್‌, ಅಲ್ಲು, ಚಾಂದ್‌ಪಾಷಾ, ಸಾಧಿಕ್‌, ತಾಲ್ಲೂಕು ಅಧ್ಯಕ್ಷ ದಿನ್ನಮಿಂದಹಳ್ಳಿ ಬೈರಾರೆಡ್ಡಿ, ಸಿ.ಆರ್‌ ಶ್ರೀನಾಥ್‌, ಕೊತ್ತೂರುಬಾಬು, ಅಕುಲ ಸುಧಾಕರ್‌, ಮೂರ್ತಿ, ಅಪ್ಸರ್‌ ಬೊಮ್ಮೆಕಲ್ಲು ನಾರಾಯಣಸ್ವಾಮಿ ಉಪಸ್ಥಿತರಿದ್ದರು.

ಜೆಡಿಎಸ್ ಅಧಿಕಾರಕ್ಕೆ ಬರಲಿದೆ

ಕೆಜಿಎಫ್‌ (ನ.13): ರಾಜ್ಯಾದ್ಯಂತ ಜೆಡಿಎಸ್‌ ಪರವಾದ ವಾತಾವರಣ ಇದ್ದು, ಜನರು ಕುಮಾರಸ್ವಾಮಿ ಮತ್ತು ದೇವೇಗೌಡರ ಜನಪರ ಕಾರ‍್ಯಕ್ರಮಗಳನ್ನು ಮೆಚ್ಚಿದ್ದಾರೆ. ಈ ಹಿನ್ನೆಲೆಯಲ್ಲಿ 2023 ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದು ಖಚಿತ ಎಂದು ರಾಜ್ಯ ಯುವ ಜೆಡಿಎಸ್‌ ಉಪಾಧ್ಯಕ್ಷ ಜಾನಕಿ ಪ್ರಸಾದ್‌ ಹೇಳಿದರು.

ಕೆಜಿಎಫ್‌ (KGF) ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಕೈಗೊಳ್ಳಲು ಕೆಜಿಎಫ್‌ನ ಶ್ರೀ ವೆಂಕಟರಮಣಸ್ವಾಮಿ, ಕೋಟಿಲಿಂಗೇಶ್ವರ, ಗಂಗಮ್ಮ, ಸಾಯಿಬಾಬ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಕೆಜಿಎಫ್‌ಗೂ ಬರಲಿದೆ ಪಂಚರತ್ನ ಯಾತ್ರೆ

ಕೋಲಾರ (Kolar ) ಜಿಲ್ಲೆಯಲ್ಲಿ ಆರು ಕ್ಷೇತ್ರಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಗೆಲುವು ಸಾಧಿಸಲು ಕುಮಾರಸ್ವಾಮಿ ಪಂಚರತ್ನ ಯಾತ್ರೆ ಹಮ್ಮಿಕೊಳ್ಳಲಿದ್ದಾರೆ. ಕಾರ್ಯಕ್ರಮ ಪಟ್ಟಿಯಲ್ಲಿ ಕೈಬಿಟ್ಟಿದ್ದ ಕೆಜಿಎಫ್‌ ಕ್ಷೇತ್ರವನ್ನು ಪಂಚರತ್ನ ಯಾತ್ರೆಯ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ. ಕ್ಷೇತ್ರದಲ್ಲಿ ಪಂಚರತ್ನ ಯಾತ್ರೆಯ ಉದ್ದೇಶಗಳನ್ನು ಮತದಾರರಿಗೆ ತಿಳಿಸಲಾಗುವುದೆಂದು ತಿಳಿಸಿದರು.

ಪಕ್ಷದ ಪರವಾಗಿ ಕೆಲಸ ಮಾಡುವೆ

ಈಗಾಗಲೇ ಜೆಡಿಎಸ್‌ ಪಕ್ಷದಲ್ಲಿ ಕೆಜಿಎಫ್‌ ವಿಧಾನಸಭಾ ಕ್ಷೇತ್ರದಿಂದ ಸ್ಥಳೀಯರಾದ ಸುರೇಶ್‌, ಕೋಲಾರ ಮೂಲದ ರಮೇಶ್‌ಬಾಬು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು, ನಾನು ಸಹ ಪಕ್ಷದ ಸಂಘಟನೆಯಲ್ಲಿ ತೊಡಗಿಸಕೊಳ್ಳತ್ತೇನೆ. ಪಕ್ಷವು ಬೇರೆಯವರಿಗೆ ಟಿಕೆಟ್‌ ನೀಡಿದರೆ ತಾವು ಪಕ್ಷದ ನಿಷ್ಠಾವಂತ ಸಾಮಾನ್ಯ ಕಾರ‍್ಯಕರ್ತನಾಗಿ ಪಕ್ಷದ ಕೆಲಸ ಮಾಡುವುದಾಗಿ ತಿಳಿಸಿದರು.

ಕೆಜಿಎಫ್‌ ಕ್ಷೇತ್ರದಲ್ಲಿ ಜೆಡಿಎಸ್‌ ಕಚೇರಿ ತೆರೆಯಲಾಗುವುದು, ಕಚೇರಿಯ ಉದ್ಘಾಟನೆಗೆ ನಿಖಿಲ್‌ ಕುಮಾರಸ್ವಾಮಿ ಬರಲಿದ್ದು, ಅಂದು ಪಕ್ಷದ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ಜೆಡಿಎಸ್‌ನ ತಾಲೂಕು ಅಧ್ಯಕ್ಷ ಪಿ.ದಯಾನಂದ್‌, ತಾಲೂಕು ಕಾರ‍್ಯದರ್ಶಿ ಬಾಬು ಇದ್ದರು.

ನಾನು ವಾಪಸ್ ಹೋಗಲ್ಲ

ತುಮಕೂರು : ತಾವು ಜೆಡಿಎಸ್‌ಗೆ ವಾಪಸ್‌ ಹೋಗುವುದಿಲ್ಲ ಎನ್ನುವ ಮೂಲಕ ತಮ್ಮ ಮನೆಗೆ ಬಂದಿದ್ದ ಸಾ.ರಾ ಮಹೇಶ್‌ ಭೇಟಿ ನೀಡಿದ ಸಂಬಂಧ ಉಂಟಾಗಿದ್ದ ವಿವಾದಕ್ಕೆ ಜೆಡಿಎಸ್‌ ಉಚ್ಛಾಟಿತ ಶಾಸಕ ಎಸ್‌.ಆರ್‌. ಶ್ರೀನಿವಾಸ್‌ ತೆರೆ ಎಳೆದಿದ್ದಾರೆ. ಗುಬ್ಬಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಫೇಸ್‌ ಮಾಡುವ ಧೈರ್ಯ ಕುಮಾರಸ್ವಾಮಿಗಿಲ್ಲ ಎಂದು ವಾಗ್ದಾಳಿ ನಡೆಸಿದರು. ಸಾ.ರಾ ಮಹೇಶ್‌ ತಮ್ಮ ಮನೆಗೆ ಭೇಟಿ ನೀಡಿದ್ದು ಸ್ನೇಹ ಪೂರ್ವಕವಾಗಿ ಎಂದ ಅವರು ನನ್ನ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಅದು ಮುಗಿದು ಹೋದ ಕತೆ, ಪಕ್ಷಕ್ಕೆ ವಾಪಸ್‌ ಬರಲು ನಾನು ಜಿಟಿ ದೇವೇಗೌಡ, ಶಿವರಾಮೇಗೌಡ ಅಲ್ಲ, ನಾನು ವಾಸಣ್ಣ ಎಂದರು.

ನನಗೇನು ತೋಚುತ್ತೋ ಅದನ್ನೇ ಮಾಡುವುದಾಗಿ ತಿಳಿಸಿದ ಶ್ರೀನಿವಾಸ್‌ ಅವರು ಹೇಳಿದಂಗೇ ಇವರು ಹೇಳಿದಂಗೆ ಕೇಳುವುದಿಲ್ಲ. ಅನ್ನದಾನಿ, ಸಾ.ರಾ ಮಹೇಶ್‌ ಸೇರಿದಂತೆ ಅಲ್ಲಿ ಇರುವ ಎಲ್ಲಾ ಶಾಸಕರಿಗೂ ನಾನು ಜೆಡಿಎಸ್‌ನಲ್ಲಿ ಉಳಿಯಬೇಕು ಅಂತ ಆಸೆಯಿದೆ. ಆದರೆ ನಮ್ಮ ಲೀಡರ್‌ಗೆ ಅದಿಲ್ಲ, ಅವರು ನಮ್ಮ ಮನೆ ಬಳಿ ಬರುವುದಿಲ್ಲ, ನನ್ನ ಫೇಸ್‌ ಮಾಡುವ ಧೈರ್ಯ ಕುಮಾರಸ್ವಾಮಿಗಿಲ್ಲ ಎಂದರು. ನಾನು ಇವತ್ತೊಂದು, ನಾಳೆಯೊಂದು ಮಾತನಾಡುವ ವ್ಯಕ್ತಿಯಲ್ಲ. ನನ್ನದೇ ವ್ಯಕ್ತಿತ್ವ ಇಟ್ಟುಕೊಂಡಿರುವ ರಾಜಕಾರಣಿ ಎಂದರು.