ಹುಬ್ಬಳ್ಳಿ-ಧಾರವಾಡದಲ್ಲಿ ಬೆಳಗಿನ ತಾಪಮಾನ 16 ಡಿಗ್ರಿ ಸೆಲ್ಸಿಯಸ್‌ನಷ್ಟು ಇದ್ದು, ವಿಶೇಷವಾಗಿ ಕೆರೆ ಕಟ್ಟೆಗಳು, ನದಿ ಹಳ್ಳಕೊಳ್ಳಗಳು, ಬೆಣ್ಣೆಹಳ್ಳದ ತಟದ ಕುಂದಗೋಳ, ನವಲಗುಂದದ ಹಳ್ಳಿಗಳಲ್ಲಿ ಚಳಿಯ ಪ್ರಮಾಣ ಸ್ವಲ್ಪ ಜಾಸ್ತಿಯಾಗಿಯೇ ಇದೆ. 

ಶಿವಾನಂದ ಅಂಗಡಿ 

Add Asianetnews Kannada as a Preferred SourcegooglePreferred

ಹುಬ್ಬಳ್ಳಿ(ಜ.04): ಹೊಸ್ತಿಲ ಹುಣ್ಣಿಮೆಗೆ ಮನೆಯ ಹೊಸ್ತಿಲು ನಡುಗುತ್ತದೆ ಎಂದು ಚಳಿಯ ಅಗಾಧತೆಯನ್ನು ವಿಶ್ಲೇಷಿಸುತ್ತಾರೆ ಗ್ರಾಮೀಣರು. ಹೌದು ಇದು ಸರಿ ಎನ್ನುವಂತೆ ಈ ಬಾರಿ ಮಂಜಿನ ಜತೆ ಭರ್ಜರಿ ಚಳಿಬೀಳುತ್ತಿದ್ದು, ಇಲ್ಲಿಯ ಎಪಿಎಂಸಿಯಲ್ಲಿ ಕಾಯಿಪಲ್ಲೆ ಹಾಗೂ ಹೂವಿನ ಸಗಟು ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ಸೇರಿದಂತೆ ಬೆಳೆಗಾರರು. ಗ್ರಾಹಕರು ಗಡಗಡ ನಡುಗುತ್ತಿದ್ದಾರೆ. 

ಮಾರುಕಟ್ಟೆಯಲ್ಲಿ ಬೆಳಗಿನ 6 ಗಂಟೆಗೆ ಕಾಯಿಪಲ್ಲೆ ಸವಾಲು ನಡೆಯುತ್ತದೆ. ಹೀಗಾಗಿ ನೂರಾರು ಗೂಡ್ಸ್ ವಾಹನಗಳು ಬೆಳಗಿನ ವರೆಗೂ ಕಾಯಿಪಲ್ಲೆಯನ್ನು ಹೊತ್ತು ತರುತ್ತವೆ. ಸವಾಲು ನಡೆಯುವ ವೇಳೆಗೆ ಕಾಯಿಪಲ್ಲೆ ಖರೀದಿದಾರರು ಆಗಮಿಸುತ್ತಾರೆ. ವ್ಯಾಪಾರಸ್ಥರು, ಖರೀದಿದಾರರು, ಗ್ರಾಹಕರು ಹೀಗೆ ಸಾವಿರಾರು ಜನರು ಏಕಕಾಲದಲ್ಲಿ ಸೇರುತ್ತಾರೆ. ಹೀಗೆ ವ್ಯಾಪಾರ ವಹಿವಾಟು ನಡೆಸುತ್ತಿದ್ದವರಿಗೆ ಚಳಿ, ತಂಪು ವಾತಾವರಣ ನಡುಗುವಂತೆ ಮಾಡಿದೆ. 

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಸರ್ಕಾರ ಸಮ್ಮತಿ

ಮಹಿಳೆಯರೇ ಜಾಸ್ತಿ: 

ಹುಬಳ್ಳಿ-ಧಾರವಾಡ ಸೇರಿದಂತೆ ರಾಜ್ಯದ ಬಹುತೇಕ ಕಾಯಿಪಲ್ಲೆ ಮಾರುಕಟ್ಟೆಗಳಲ್ಲಿ ಮಹಿಳೆಯರೇ ವ್ಯಾಪಾರ ಮಾಡುತ್ತಿದ್ದು, ಸಗಟು ಮಾರುಕಟ್ಟೆಯಿಂದ ಅವರೇ ಸ್ವತಃ ಕಾಯಿಪಲ್ಲೆ ಖರೀದಿಸುತ್ತಾರೆ. ಬಳಿಕ ಅಲ್ಲಿಂದ ಸಂತೆ ನಡೆಯುವ ಸ್ಥಳ ಹಾಗೂ ತಾಲೂಕು ಕೇಂದ್ರಗಳಿಗೆ ಕಾಯಿಪಲ್ಲೆ ತಗೆದು ಕೊಂಡು ಹೋಗುತ್ತಾರೆ. 

ಕುಂದಗೋಳ ತಾಲೂಕಿನ ಬೆಟದೂರಿನಲ್ಲಿ ನಿತ್ಯ 10 -20 ಮಹಿಳೆಯರು ಗಾಡಿಯಲ್ಲಿ ಕಾಯಿಪಲ್ಲೆ ಖರೀದಿಗೆ ಬರುತ್ತೇವೆ ಎನ್ನುತ್ತಾರೆ ಗ್ರಾಮದ ಮಹಿಳೆ ಪಾರ್ವತೆವ್ವ, ನಿತ್ಯ ಬೆಳಗ್ಗೆ6 ಗಂಟೆಗೆ ಬರುತ್ತೇವೆ. ಚಳಿ ಬಂದರೂ ಪರವಾಗಿಲ್ಲ ದೇವರು ನಮಗ್ ಹಿಂಗ್ ಗಟ್ಟೆ ಇರಲಿ ಎಂದು ಪ್ರಾರ್ಥಿಸುತ್ತಾರೆ. 

ಸ್ಟೇಟರ್, ಉಲನ್ ಕ್ಯಾಪ್, ಝರಕಿನ್, ಕಂಬಳಿ ಹೀಗೆ ದೇಹವನ್ನು ಬೆಚ್ಚಗಿಡುವ ಯಾವುದೇ ವಸ್ತ್ರಗಳನ್ನು ಧರಿಸಿದರೂ ಅಲ್ಲಿಯ ಜನರಿಗೆ ನಡುಕ ಮಾತ್ರ ನಿಲುತ್ತಿಲ್ಲ. ಸದ್ಯ ಹುಬ್ಬಳ್ಳಿ-ಧಾರವಾಡದಲ್ಲಿ ಬೆಳಗಿನ ತಾಪಮಾನ 16 ಡಿಗ್ರಿ ಸೆಲ್ಸಿಯಸ್‌ನಷ್ಟು ಇದ್ದು, ವಿಶೇಷವಾಗಿ ಕೆರೆ ಕಟ್ಟೆಗಳು, ನದಿ ಹಳ್ಳಕೊಳ್ಳಗಳು, ಬೆಣ್ಣೆಹಳ್ಳದ ತಟದ ಕುಂದಗೋಳ, ನವಲಗುಂದದ ಹಳ್ಳಿಗಳಲ್ಲಿ ಚಳಿಯ ಪ್ರಮಾಣ ಸ್ವಲ್ಪ ಜಾಸ್ತಿಯಾಗಿಯೇ ಇದೆ. ಪತ್ರಿಕೆ ವಿತರಕರು ಹಾಗೂ ಅವರ ಸಹಾಯಕರು ಸಹ ಇಲ್ಲಿಯ ಕೊಪ್ಪಿಕ‌ರ್ ರಸ್ತೆ ಸೇರಿದಂತೆ ಪೇಪರ್ ಇಳಿಸುವ ಸ್ಥಳಗಳಲ್ಲಿ ಧಾವಂತದಲ್ಲಿ ಪೇಪರ್ ಹೊಂದಿಸಿ ಕೊಳ್ಳುತ್ತಿದ್ದರೂ ಅವರ ನಡುಕ ಮಾತ್ರ ನಿಲ್ಲುವುದೇ ಇಲ್ಲ. ಮನೆ ಮನೆಗೆ ಹಾಲಿನ ಪ್ಯಾಕೇಟ್ ಹಾಕುವವರು, ವಾಯುವಿಹಾರಿಗಳು ಹಾಗೂ ಆಟೋ ಚಾಲಕರನ್ನು ಚಳಿಯ ಕಂಗೆಡಿಸಿದೆ.

ಧಾರವಾಡ: ಮುಸ್ಲಿಂ ಕುಟುಂಬದಿಂದ ಅಯ್ಯಪ್ಪ ಮಾಲಾಧಾರಿಗಳ ಪಾದಪೂಜೆ!

ತೋಟದಲ್ಲಿ ಬದನೆಕಾಯಿ ಬೆಳೆದಿದ್ದೇವೆ. ಹೀಗಾಗಿ ಮೂರ್ನಾಲ್ಕು ದಿನಕ್ಕೊಮ್ಮೆ ಕಾಯಿಪಲ್ಲೆ ಟ್ರೇ ಜತೆ ಹುಬ್ಬಳ್ಳಿಗೆ ನಸುಕಿನ ಜಾವದಲ್ಲಿ ಬರುತ್ತೇನೆ. ಚಳಿಗೆ ನೆಗಡಿ ಶುರುವಾಗಿದ್ದು, ಕಡಿಮೆ ಆಗುತ್ತಿಲ್ಲ, ಎಷ್ಟೇ ಬೆಚ್ಚಗಿನ ಬಟ್ಟೆ ಧರಿಸಿದರೂ ನಡುಕ ಮಾತ್ರ ನಿಲ್ಲುತ್ತಿಲ್ಲ ಎಂದು ಅದರಗುಂಚಿ ಕಾಯಿಪಲ್ಲೆ ಬೆಳೆಗಾರ ಮಹಮ್ಮದ ಹನೀಫ ತಿಳಿಸಿದ್ದಾರೆ. 

ಎಪಿಎಂಸಿಯಲ್ಲಿರುವ ಸಗಟು ಕಾಯಿಪಲ್ಲೆ ಮಾರುಕಟ್ಟೆಯಲ್ಲಿ ದಶಕಗಳಿಂದ ಕಾಯಿಪಲ್ಲೆ ವ್ಯಾಪಾರ ಮಾಡುತ್ತಿದ್ದು, ಬೆಳಗ್ಗೆ ಎಷ್ಟೇ ಚಳಿ ಬಿದ್ದರೂ ದುಡಿಮೆಯ ಹಿನ್ನೆಲೆಯಲ್ಲಿ ಬರಬೇಕಾಗಿದೆ. ಈ ಬಾರಿ ಕಳೆದ 15 ದಿನಗಳಿಂದ ಚಳಿ ಪ್ರಮಾಣ ಹೆಚ್ಚಾಗಿದ್ದು, ಬೆಳಗ್ಗೆ 9 ಗಂಟೆಯಾದರೂ ಚಳಿ ಬಿಡುವುದೇ ಇಲ್ಲ ಎಂದು ಗಡವಾಲೆ ಎಚ್‌ಎಸ್‌ಎಫ್ ಟ್ರೇಡರ್ಸ್ ಹುಸೇನ ನಬೀಸಾಬ ಹೇಳಿದ್ದಾರೆ.