ಕಾರಿನಲ್ಲಿ ಬಂದು ಮನೆಮುಂದಿನ ಕೊಟ್ಟಿಗೆಯಿಂದಲೇ ಕುರಿ ಕದ್ದೊಯ್ದರು..!
ಮಂಡ್ಯದಲ್ಲಿ ರಾತ್ರೋ ರಾತ್ರಿ ಕೈಚಳಕ ತೋರಿಸಿದ ಕಳ್ಳರು ಮನೆಯ ಮುಂದಿನ ಕೊಟ್ಟಿಗೆಯಿಂದಲೇ ಕುರಿಗಳನ್ನು ಕದ್ದೊಯ್ದಿದ್ದಾರೆ. ಮನೆಯ ಮುಂದಿನ ಚಿಲಕ ಹಾಕಿ ಕುರಿಗಳನ್ನು ಕದಿಯಲಾಗಿದೆ. ಇದರಿಂದ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ.
ಮಂಡ್ಯ(ಸೆ.04): ಮನೆಯ ಮುಂಬಾಗಿಲ ಚಿಲಕ ಹಾಕಿ ಕೊಟ್ಟಿಗೆಯಲ್ಲಿದ್ದ 15ಕ್ಕೂ ಹೆಚ್ಚು ಕುರಿಗಳನ್ನು ಕದ್ದೊಯ್ದಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ನಾಗಮಂಗಲ ತಾಲೂಕಿನ ಚಾಮರಾಜನಗರ ಜೀವರ್ಗಿ- ರಾಷ್ಟ್ರೀಯ ಹೆದ್ದಾರಿಯ ಹೊಣಕೆರೆ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಘಟನೆ ಸಂಭವಿಸಿದ್ದು ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ.
ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಹಾಳೇಗೌಡ ಎಂಬುವರ ಮನೆಯಲ್ಲಿ ಘಟನೆ ಸಂಭವಿಸಿದೆ. ಘಟನೆಯಿಂದ ಹೊಣಕೆರೆ ಸೇರಿದಂತೆ ಸುತ್ತಮುತ್ತಲಿನ ಜನರು ಆತಂಕ್ಕೀಡಾಗಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಗ್ರಾಮದ ರೈತ ಹಾಳೇಗೌಡರ ಕುಟುಂಬಸ್ಥರು ಸೋಮವಾರ ರಾತ್ರಿ ಎಂದಿನಂತೆ ಊಟ ಮುಗಿಸಿ ಮಲಗಿದ್ದ ವೇಳೆ ತಡರಾತ್ರಿ ಸಮಯದಲ್ಲಿ ಕಾರಿನಲ್ಲಿ ಬಂದಿರುವ ಕುರಿ ಕಳ್ಳರು ಮನೆಯ ಮುಂಬಾಗಿಲ ಚಿಲಕ ಹಾಕಿ ಮನೆಯ ಪಕ್ಕದ ಕೊಟ್ಟಿಗೆಯಲ್ಲಿ ಕೂಡಿಹಾಕಿದ್ದ 15ಕ್ಕೂ ಹೆಚ್ಚು ಕುರಿಗಳನ್ನು ಕದ್ದೊಯ್ದಿದ್ದಾರೆ.
ಕಳ್ಳತನದ ಬಗ್ಗೆ ತಿಳಿದರೂ ಅಸಹಾಯಕರಾದ ಮನೆಮಂದಿ:
ಕೊಟ್ಟಿಗೆಯಲ್ಲಿ ಕುರಿಗಳು ಒಡಾಡುತ್ತಿದ್ದ ಶಬ್ದಕೇಳಿ ಎಚ್ಚರಗೊಂಡ ಮನೆಯವರು ಹೊರಗಿನಿಂದ ಚಿಲಕ ಹಾಕಿದ್ದ ಬಾಗಿಲು ತೆಗೆಯಲು ಸಾಧ್ಯವಾಗದೆ ನೆರವಿಗಾಗಿ ಕೂಗಿ ಕೊಳ್ಳುತ್ತಿದ್ದಂತೆ ಕಳ್ಳರು ಪರಾರಿಯಾಗಿದ್ದಾರೆ.
ಸುದ್ದಿ ತಿಳಿದ ತಹಸೀಲ್ದಾರ್ ಎಂ.ವಿ.ರೂಪಾ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದ ಬಳಿಕ ಮನೆಯವರಿಂದ ಮಾಹಿತಿ ಪಡೆದುಕೊಂಡರು. ಈ ಸಂಬಂಧ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಷಪೂರಿತ ಬಳ್ಳಿ ಸೇವಿಸಿ 30ಕ್ಕೂ ಹೆಚ್ಚು ಕುರಿಗಳು ಸಾವು
ಮತ್ತೊಂದು ಪ್ರಕರಣದಲ್ಲಿ ತಾಲೂಕಿನ ಎ.ಶ್ರೀರಾಮನಹಳ್ಳಿ ಮತ್ತು ಅರೇಹಳ್ಳಿ ಗ್ರಾಮಗಳಲ್ಲಿಯೂ ಭಾನುವಾರ ಮನೆಯ ಮುಂಭಾಗದಲ್ಲಿ ಕಟ್ಟಿಹಾಕಿದ್ದ 11ಮೇಕೆಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ.