Asianet Suvarna News Asianet Suvarna News

RR ನಗರ ಉಪಕದನ: ಪತ್ರ ಪಡೆದರೂ ಅಂಚೆ ಮತ ಚಲಾಯಿಸದ ಜನ..!

ಮತಗಟ್ಟೆಗೂ ಆಗಮಿಸಿ ಮತದಾನ ಅವಕಾಶವಿಲ್ಲ| ಕೊರೋನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಭಾರತೀಯ ಚುನಾವಣಾ ಆಯೋಗ 80 ವರ್ಷ ಮೇಲ್ಪಟ್ಟ ಹಾಗೂ ಅಂಗವಿಕಲರಿಗೆ ಅಂಚೆ ಮತದಾನಕ್ಕೆ ಅವಕಾಶ ನೀಡಿತ್ತು| ಮತದಾನಕ್ಕೆ ಅ.29ರಿಂದ ಅ.31ರವರೆಗೆ ಅವಕಾಶ ನೀಡಲಾಗಿತ್ತು| 

102 People Did Not Vote in RR Nagar ByElection grg
Author
Bengaluru, First Published Nov 2, 2020, 3:18 PM IST

ಬೆಂಗಳೂರು(ನ.02): ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಅಂಚೆ ಮತ ಪತ್ರ ಸ್ವೀಕರಿಸಿದ 512 ಮಂದಿಯ ಪೈಕಿ 102 ಜನರು ಮತದಾನ ಮಾಡಿಲ್ಲ. ಇದರಿಂದಾಗಿ ಮತಗಟ್ಟೆಗೂ ಆಗಮಿಸಿ ಮತದಾನ ಮಾಡುವ ಅವಕಾಶವನ್ನು ಅವರು ಕಳೆದುಕೊಂಡಿದ್ದಾರೆ.

ಕೊರೋನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಭಾರತೀಯ ಚುನಾವಣಾ ಆಯೋಗ 80 ವರ್ಷ ಮೇಲ್ಪಟ್ಟ ಹಾಗೂ ಅಂಗವಿಕರಿಗೆ ಅಂಚೆ ಮತದಾನಕ್ಕೆ ಅವಕಾಶ ನೀಡಿತ್ತು. ಅದರಂತೆ ಆರ್‌ಆರ್‌ನಗರದಲ್ಲಿ 80 ವರ್ಷ ಮೇಲ್ಪಟ್ಟ5,560 ಹಿರಿಯ ನಾಗಕರಿಕರು ಹಾಗೂ 695 ಅಂಗವಿಕಲರನ್ನು ಗುರುತಿಸಿ ಅಂಚೆ ಮತದಾನ ಮಾಡುವುದಕ್ಕೆ ಅವಕಾಶ ನೀಡಿತ್ತು. ಈ ಪೈಕಿ ಅಂಚೆ ಮತದಾನ ಮಾಡುವುದಾಗಿ ಹೇಳಿ 489 ಹಿರಿಯ ನಾಗರಿಕರು ಹಾಗೂ 23 ಅಂಗವಿಕಲರು ಅಂಚೆ ಮತಪತ್ರ ಪಡೆದುಕೊಂಡಿದ್ದರು.

ಮತದಾನಕ್ಕೆ ಅ.29ರಿಂದ ಅ.31ರವರೆಗೆ ಅವಕಾಶ ನೀಡಲಾಗಿತ್ತು. ಈ ಪೈಕಿ 101 ಹಿರಿಯ ನಾಗರಿಕರು ಹಾಗೂ ಒಬ್ಬ ಅಂಗವಿಕಲ ಸೇರಿದಂತೆ ಒಟ್ಟು 102 ಮಂದಿ ಅಂಚೆ ಪತ್ರ ಪಡೆದರೂ ಮತದಾನ ಮಾಡಿಲ್ಲ. ಉಳಿದ 410 ಮಂದಿ ಮತ ಚಲಾಯಿಸಿದ್ದಾರೆ ಎಂದು ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

RR ನಗರ ಬೈ ಎಲೆಕ್ಷನ್: ಕೊರೋನಾ ಸೋಂಕಿತರಿಗೂ ಮತದಾನಕ್ಕೆ ಅವಕಾಶ, ಅದು ಹೇಗೆ?

ಅಂಚೆ ಪತ್ರ ಪಡೆದು ಸಹ ಮತದಾನ ಮಾಡದವರಿಗೆ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಲು ಅವಕಾಶವಿಲ್ಲ. ಆದರೆ, ಅಂಚೆ ಮತಪತ್ರ ಸ್ವೀಕರಿಸದ ಮತದಾರರು ನ.3ರಂದು ಮತಗಟ್ಟೆಗೆ ಆಗಮಿಸಿ ಮತದಾನ ಮಾಡಲು ಅವಕಾಶವಿದೆ ಎಂದು ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಮತಪತ್ರ ಪಡೆದವರ ಪೈಕಿ ಮೂವರು ಸಾವು

ಅಂಚೆ ಮತದಾನಕ್ಕೆ ಒಪ್ಪಿ ಅಂಚೆ ಮತ ಪತ್ರ ಸ್ವೀಕರಿಸಿದ 80 ವರ್ಷ ಮೇಲ್ಪಟ್ಟವರ ಪೈಕಿ ಮತದಾನ ಮಾಡುವ ಮುನ್ನವೇ ಮೂವರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಅಂಚೆ ಮತಪತ್ರ ವಾಪಾಸ್‌ ಪಡೆಯುವುಕ್ಕೆ ಚುನಾವಣಾ ಅಧಿಕಾರಿಗಳು ಮನೆಗೆ ಭೇಟಿ ನೀಡಿದ ವೇಳೆ ಈ ವಿಷಯ ತಿಳಿದು ಬಂದಿದೆ. ಇನ್ನು 1,665 ಹಿರಿಯ ನಾಗರಿಕರು ಹಾಗೂ 255 ಅಂಗವಿಕಲರು ನೇರವಾಗಿ ಮತಗಟ್ಟೆಗೆ ಬಂದು ಮತದಾನ ಹಕ್ಕು ಚಲಾಯಿಸುವುದಾಗಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಇನ್ನುಳಿದ 3823 ಮಂದಿ ಚುನಾವಣಾ ಅಧಿಕಾರಿಗಳ ಸಂಪರ್ಕಕ್ಕೆ ಸಿಕ್ಕಿಲ್ಲ.
 

Follow Us:
Download App:
  • android
  • ios