*  ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಬಸ್‌ ನಿಲ್ದಾಣದಲ್ಲಿ ನಡೆದ ಘಟನೆ*  ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಗು *  ಈ ಸಂಬಂಧ ಮುದ್ದೇಬಿಹಾಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು  

ಮುದ್ದೇಬಿಹಾಳ(ಸೆ.10): ಹತ್ತು ದಿನದ ಹೆಣ್ಣು ಮಗುವನ್ನು ಮುದ್ದೇಬಿಹಾಳ ಬಸ್‌ ನಿಲ್ದಾಣದಲ್ಲಿ ಬಿಟ್ಟು ಹೋದ ಘಟನೆ ಗುರುವಾರ ನಡೆದಿದೆ.

ನಿಲ್ದಾಣದ ಬಸ್‌ಪಾಸ್‌ ನೀಡುವ ಕೊಠಡಿಯ ಪಕ್ಕದಲ್ಲಿ ಬಿಟ್ಟು ಹೋಗಿದ್ದಾರೆ. ಕೂಸು ಅಳುವುದನ್ನು ಗಮನಿಸಿದ ನಾಲತವಾಡ ಪಟ್ಟಣದ ಮಹಿಳೆ ಮಗುವನ್ನು ಸಮಾಧಾನ ಮಾಡಲು ಯತ್ನಿಸಿ ನಂತರ ಮಗುವಿನ ಪಾಲಕರಿಗಾಗಿ ಹುಡುಕಿದ್ದಾಳೆ. ಆದರೂ ಸಿಕ್ಕಿಲ್ಲ. ಸ್ಥಳಕ್ಕಾಗಮಿಸಿದ ಪೊಲೀಸರು ಮಗುವನ್ನು ವಶಪಡೆದಿದ್ದಾರೆ.

ದೇಶದ 9.2 ಲಕ್ಷ ಮಕ್ಕಳಲ್ಲಿ ತೀವ್ರ ಸ್ವರೂಪದ ಅಪೌಷ್ಟಿಕತೆ!

ಪೊಲೀಸರು ಮಗುವನ್ನು ತಾಲೂಕಾಸ್ಪತ್ರೆಗೆ ತಂದು ಆರೋಗ್ಯ ತಪಾಸಣೆ ಮಾಡಿದಾಗ ಮಗು ಅಪೌಷ್ಟಿಕತೆಯಿಂದ ಬಳಲುತ್ತಿದೆ ಎಂದು ತಿಳಿದು ಬಂದಿದೆ. ಸದ್ಯ ಮಗುವನ್ನು ಜಿಲ್ಲಾಸ್ಪತ್ರೆಗೆ ರವಾನಿಸಿದ್ದು ಮಗುವಿನ ಜೊತೆ ಮಹಿಳಾ ಸಾಂತ್ವನ ಸಿಬ್ಬಂದಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಸಾವಿತ್ರಿ ಗುಗ್ಗರಿ ತೆರಳಿದ್ದಾರೆ. ಈ ಕುರಿತು ಮುದ್ದೇಬಿಹಾಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.