ಹಜ್‌ಭವನ ಮತ್ತು ಎಚ್‌ಎಎಲ್‌ನಲ್ಲಿ 800 ಹಾಸಿಗೆಗಳ ವ್ಯವಸ್ಥೆ ಇರುವ ಕೋವಿಡ್‌ ಆರೈಕೆ ಕೇಂದ್ರ ಆರಂಭ| ತಲಾ 150ರಂತೆ 1500 ಹಾಸಿಗೆ ವ್ಯವಸ್ಥೆ| ಮಾಹಿತಿಗೆ ಆಪ್ತಮಿತ್ರ ಸಹಾಯವಾಣಿ 14410 ಸಂಪರ್ಕಿಸಿ| 

ಬೆಂಗಳೂರು(ಏ.15): ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆಯಿಂದ 10 ಕೋವಿಡ್‌ ಆರೈಕೆ ಕೇಂದ್ರ ತೆರೆಯಲು ತೀರ್ಮಾನಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ಗುಪ್ತಾ ತಿಳಿಸಿದರು.

Add Asianetnews Kannada as a Preferred SourcegooglePreferred

ಬುಧವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌.ಅಂಬೇಡ್ಕರ್‌ ಅವರ 130ನೇ ಜಯಂತಿ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈಗಾಗಲೇ ಹಜ್‌ಭವನ ಮತ್ತು ಎಚ್‌ಎಎಲ್‌ನಲ್ಲಿ 800 ಹಾಸಿಗೆಗಳ ವ್ಯವಸ್ಥೆ ಇರುವ ಕೋವಿಡ್‌ ಆರೈಕೆ ಕೇಂದ್ರಗಳನ್ನು ಆರಂಭಿಸಲಾಗಿದೆ. ಹೊಸದಾಗಿ ತೆರೆಯಲು ಉದ್ದೇಶಿಸಿರುವ 10 ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ತಲಾ 150ರಂತೆ 1500 ಹಾಸಿಗೆ ವ್ಯವಸ್ಥೆ ಇರಲಿದೆ ಎಂದು ಹೇಳಿದರು.

ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೀಡಲು ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ಐದು ಸಾವಿರ ಹಾಸಿಗೆ ಕೋವಿಡ್‌ ರೋಗಿಗಳಿಗೆ ಮೀಸಲಿಡಬೇಕು ಎಂದು ನೋಟಿಸ್‌ ನೀಡಿದ್ದು, ಈಗಾಗಲೇ 2500 ಹಾಸಿಗೆಗಳು ಸೋಂಕಿತರಿಗೆ ಲಭ್ಯವಿದೆ. ಇನ್ನೂ 2500 ಹಾಸಿಗೆಗಳನ್ನು ಮೀಸಲಿಡಸಲು ಸೂಚಿಸಲಾಗಿದೆ. ಯಾವುದೇ ತೊಂದರೆ, ಮಾಹಿತಿ ಬೇಕಾಗಿದ್ದಲ್ಲಿ ತುರ್ತು ಆಪ್ತಮಿತ್ರ ಸಹಾಯವಾಣಿ 14410 ಸಂಪರ್ಕ ಮಾಡಿ ಸಲಹೆ ಪಡೆಯಬಹುದು ಎಂದು ಹೇಳಿದರು.

ಬೆಂಗ್ಳೂರಲ್ಲಿ ಕಂಟ್ರೋಲ್‌ ತಪ್ಪಿದ ಕೊರೋನಾ: ಈ ದೃಶ್ಯ ನೋಡಿದ್ರೆ ನಿಮ್ಮ ಎದೆ ನಡುಗುತ್ತೆ..!

ಈ ಸಂದರ್ಭದಲ್ಲಿ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌, ಪಾಲಿಕೆ ವಿಶೇಷ ವಲಯ ಆಯುಕ್ತರಾದ ರಂದೀಪ್‌, ಮನೋಜ್‌ ಜೈನ್‌, ರವೀಂದ್ರ, ರಾಜೇಂದ್ರ ಚೋಳನ್‌, ರೆಡ್ಡಿ ಶಂಕರ ಬಾಬು, ತುಳಸಿ ಮದ್ದಿನೇನಿ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಸಾವಿನ ಪ್ರಮಾಣ ಕಡಿಮೆ

ಕೋವಿಡ್‌ 2ನೇ ಅಲೆ ಹರಡುವ ವೇಗ ತೀವ್ರವಾಗಿರುವ ಕಾರಣದಿಂದಲೇ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಆದರೆ, ಸಾವಿನ ಪ್ರಮಾಣ ಶೇ.0.5ರಷ್ಟು ಇರುವುದರಿಂದ ಭೀತಿಗೆ ಒಳಗಾಗುವ ಅವಶ್ಯಕತೆ ಇಲ್ಲ. ಮಾರುಕಟ್ಟೆ, ಜನದಟ್ಟಣೆಯ ಪ್ರದೇಶಗಳಲ್ಲಿ ಕೋವಿಡ್‌ ಮಾರ್ಗಸೂಚಿ ಪಾಲನೆ ಅಗುತ್ತಿಲ್ಲ ಎನ್ನುವ ಆರೋಪಗಳು ಬಂದಿದ್ದು, ಈ ಸಂಬಂಧ ಪೊಲೀಸ್‌ ಆಯುಕ್ತರೊಂದಿಗೆ ಸಭೆ ನಡೆಸಿ, ಮತ್ತಷ್ಟು ಪರಿಣಾಮಕಾರಿಯಾಗಿ ಕೋವಿಡ್‌ ನಿಯಮ ಪಾಲನೆಗೆ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದೇವೆ ಎಂದು ಮುಖ್ಯ ಆಯುಕ್ತ ಗೌರವ್‌ ಗುಪ್ತಾ ತಿಳಿಸಿದರು.