ನಗರದಲ್ಲಿ ಇರುವ ಇಂದಿರಾ ಕ್ಯಾಂಟೀನ್‌ಗಳಿಗೆ ಬಣ್ಣ ಬಳಿಯುವುದು, ನೀರು, ವಿದ್ಯುತ್‌ ಸೇರಿದಂತೆ ಮೂಲಸೌಕರ್ಯಕ್ಕೆ ತಲಾ .1 ಲಕ್ಷ ನೀಡಲು ಬಿಬಿಎಂಪಿ ನಿರ್ಧರಿಸಿದೆ. 

ಬೆಂಗಳೂರು (ಮೇ.27): ನಗರದಲ್ಲಿ ಇರುವ ಇಂದಿರಾ ಕ್ಯಾಂಟೀನ್‌ಗಳಿಗೆ ಬಣ್ಣ ಬಳಿಯುವುದು, ನೀರು, ವಿದ್ಯುತ್‌ ಸೇರಿದಂತೆ ಮೂಲಸೌಕರ್ಯಕ್ಕೆ ತಲಾ .1 ಲಕ್ಷ ನೀಡಲು ಬಿಬಿಎಂಪಿ ನಿರ್ಧರಿಸಿದೆ. ಶುಕ್ರವಾರ ಬಿಬಿಎಂಪಿಯ ವಿವಿಧ ವಿಭಾಗದ ಮುಖ್ಯಸ್ಥರೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌, ಪ್ರತಿ ಇಂದಿರಾ ಕ್ಯಾಂಟೀನ್‌ಗೆ ಮೂಲಸೌಕರ್ಯ ಕಲ್ಪಿಸಲು ತಲಾ .1 ಲಕ್ಷವನ್ನು ತಕ್ಷಣಕ್ಕೆ ನೀಡಲಾಗುವುದು. ಸ್ಥಗಿತಗೊಂಡಿರುವ ಇಂದಿರಾ ಕ್ಯಾಂಟೀನ್‌ ಹಾಗೂ ಮೊಬೈಲ್‌ ಕ್ಯಾಂಟೀನ್‌ಗಳನ್ನು ಮರು ಚಾಲನೆ ನೀಡಲು ವಲಯ ಮಟ್ಟದ ಅಧಿಕಾರಿಗಳಿಗೆ ಕ್ರಮ ವಹಿಸುವಂತೆ ಸೂಚಿಸಿದರು.

ಮಳೆಗಾಲಕ್ಕೆ ಮುಚ್ಚೆಚ್ಚರಿಕೆ ವಹಿಸಿ: ಮುಂಗಾರು ಆರಂಭವಾಗಲಿರುವ ಹಿನ್ನೆಲೆಯಲ್ಲಿ ವಲಯವಾರು ಎಂಟು ನೋಡಲ್‌ ಅಧಿಕಾರಿಗಳನ್ನು ನೇಮಿಸಿ. ಬೆಸ್ಕಾಂ, ಜಲಮಂಡಳಿ, ಅಗ್ನಿ ಶಾಮಕ ದಳ, ಎನ್‌ಡಿಆರ್‌ಎಫ್‌ ಒಳಗೊಂಡಂತೆ ಪ್ರತ್ಯೇಕ ತಂಡ ರಚಿಸಬೇಕು. ಮಳೆ ಪ್ರವಾಹ ನಿಯಂತ್ರಿಸಲು ಅಗತ್ಯ ಇರುವ ನೀರಿನ ಪಂಪ್‌, ಮರ ಕತ್ತರಿಸುವ ಯಂತ್ರ ಹಾಗೂ ಇತರೆ ಸಾಧನ ಸಲಕರಣೆಯನ್ನು ಸಿದ್ಧಪಡಿಸಿಕೊಳ್ಳಬೇಕು, ಶಿಥಿಲವಾಗಿರುವ ಮತ್ತು ಬೀಳಬಹುದಾದ ಮರಗಳ ಬಗ್ಗೆ ಹೊಸದಾಗಿ ವರದಿ ನೀಡಲು ಅರಣ್ಯ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು. ಬಿಲ್‌ ಪಾವತಿಯ ಮೊದಲು ಪ್ರೀಆಡಿಟ್‌ ವ್ಯವಸ್ಥೆ ಮಾಡಿ. ಇದಕ್ಕೆ ಸಂಬಂಧಿಸಿದ ಮಾರ್ಗಸೂಚಿ ಸಿದ್ಧಪಡಿಸಿ ಎಲ್ಲ ಕಚೇರಿಗೆ ರವಾನಿಸಬೇಕು. ಆಸ್ತಿ ತೆರಿಗೆ ಬಾಕಿ ವಸೂಲಾತಿ ಚುರುಕು ಗೊಳಿಸುವಂತೆ ಸೂಚಿಸಿದರು.

ಕರೆಂಟ್‌ ಬಿಲ್‌ ಕಟ್ಬೇಡಿ, ಮಹಿಳೆಯರು ಬಸ್‌ ಟಿಕೆಟ್‌ ತಗೋಬೇಡಿ: ಬಿಜೆಪಿ, ಜೆಡಿಎಸ್‌ ಕರೆ!

ಎಲ್ಲವೂ ಆನ್‌ಲೈನ್‌: ಎಲ್ಲವೂ ಆನ್‌ಲೈನ್‌ ಮುಖಾಂತರ ಖಾತಾ ಸಂಬಂಧಿಸಿದ ಅರ್ಜಿ ಸಲ್ಲಿಸಲು ಇ-ಆಸ್ತಿ ತಂತ್ರಾಂಶ ಅಧಿಕೃತವಾಗಿ ಚಾಲನೆಗೆ ಕ್ರಮ ಕೈಗೊಳ್ಳಬೇಕು. ಖಾತಾ ಸಂಬಂಧಿಸಿದ ಅರ್ಜಿಗೆ ಪ್ರಮಾಣ ಪತ್ರ ನೀಡಲು ಆಯಾ ವಲಯ ಜಂಟಿ ಆಯುಕ್ತರಿಗೆ ಜವಾಬ್ದಾರಿ ಮಾಡಲು ನಿರ್ದೇಶಿಸಿದರು.

ಕೂಪನ್‌ಗಳ ಹಂಚಿ 50 ಕಡೆ ಕಾಂಗ್ರೆಸ್‌ ಗೆಲುವು, ನಿಖಿಲ್‌ ಸೋಲಿಗೂ ಇದೇ ಕಾರಣ: ಎಚ್‌ಡಿಕೆ

ಅಕ್ರಮ ಖಾತಾ ವರದಿ ಕೊಡಿ: ಎಲ್ಲಾ ವಲಯ ಆಯುಕ್ತರು ವಲಯವಾರು ತಂಡಗಳನ್ನು ರಚಿಸಿ ಕಳೆದ ವರ್ಷದಿಂದ ಈವರೆಗೆ ಬಿ- ಖಾತಾ ಆಸ್ತಿಗಳಿಗೆ ಎ- ಖಾತಾ ನೀಡುವ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಕಂದಾಯ ವಿಭಾಗದ ವಿಶೇಷ ಆಯುಕ್ತರು ಅಗತ್ಯ ಕ್ರಮವಹಿಸುವಂತೆ ನಿರ್ದೇಶಿಸಿದರು. ಸಭೆಯಲ್ಲಿ ಇ ಆಡಳಿತ ಇಲಾಖೆಯ ಕಾರ್ಯದರ್ಶಿ ಪೊನ್ನುರಾಜ್‌, ಪಾಲಿಕೆಯ ವಿಶೇಷ ಆಯುಕ್ತರಾದ ಜಯರಾಮ ರಾಯಪುರ, ಡಾ. ಆರ್‌.ಎಲ್‌.ದೀಪಕ್‌, ಡಾ. ತ್ರಿಲೋಕ ಚಂದ್ರ, ಡಾ. ಕೆ.ಹರೀಶ್‌ ಕುಮಾರ್‌, ಪ್ರೀತಿ ಗೆಹ್ಲೋಟ್‌, ರವೀಂದ್ರ, ರೆಡ್ಡಿ ಶಂಕರ್‌ ಬಾಬು ಉಪಸ್ಥಿತರಿದ್ದರು.