Asianet Suvarna News Asianet Suvarna News

ಲಂಚ ಪಡೆದು ಪೇಡೆ ಬಾಕ್ಸ್‌ ಕೊಟ್ಟರು: ಆಡಳಿತ ಪಕ್ಷದಿಂದಲೆ ಭ್ರಷ್ಟಾಚಾರದ ಆರೋಪ !

  • ಆಡಳಿತ ಪಕ್ಷದಿಂದಲೆ ಭ್ರಷ್ಟಾಚಾರದ ಆರೋಪ
  • ಹುಧಾ ಮಹಾನಗರ ಪಾಲಿಕೆ ಕಂದಾಯ ಇಲಾಖೆ ವಿರುದ್ಧ ಗಂಭೀರ ಆರೋಪ
  • ಅಧಿಕಾರಿ ಮೇಲೆ ತನಿಖೆ ನಡೆಸಿ 15 ದಿನದಲ್ಲಿ ವರದಿ ನೀಡಲು ಮೇಯರ್‌ ಸೂಚನೆ
  • ಪಾಲಿಕೆ ಆದಾಯ ಹೆಚ್ಚಳ ಕ್ರಮಕ್ಕೆ 2 ತಿಂಗಳ ಗಡುವು
.Allegation of corruption by the ruling party  in hubli rav
Author
Hubli, First Published Jul 30, 2022, 12:53 PM IST

ಹುಬ್ಬಳ್ಳಿ (ಜು.30): ಮಹಾನಗರ ಪಾಲಿಕೆ ಕಚೇರಿಯ ಅಧಿಕಾರಿಗಳು ವ್ಯಾಪಕ ಭ್ರಷ್ಟಾಚಾರ ನಡೆಸುತ್ತಿರುವ ಬಗ್ಗೆ ಆಡಳಿತ ಪಕ್ಷದಿಂದಲೆ ತೀವ್ರ ಅಸಮಾಧಾನ, ಪಾಲಿಕೆಯ ಆದಾಯ ಹೆಚ್ಚಿಸುವಲ್ಲಿ ನಿರ್ಲಕ್ಷ್ಯ ಧೋರಣೆ, ಕ್ರಮ ವಹಿಸಲು ಎರಡು ತಿಂಗಳ ಗಡುವು... ಶುಕ್ರವಾರ ಇಲ್ಲಿನ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಚೇರಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಒಳಪಟ್ಟಪ್ರಮುಖ ಅಂಶಗಳಿವು.

ಅಧಿಕಾರಿಗಳು ಲಂಚ ಪಡೆಯುತ್ತಿರುವ ಬಗ್ಗೆ ಮಾಜಿ ಮೇಯರ್‌ ವೀರಣ್ಣ ಸವಡಿ(Veeranna Savadi) ಗಂಭೀರ ಆರೋಪಕ್ಕೆ ಹಲವು ಸದಸ್ಯರು ಧ್ವನಿಗೂಡಿಸಿದರು. ಅಂತಿಮವಾಗಿ ಪಾಲಿಕೆಯ ಉಪ ಆಯುಕ್ತ (ಕಂದಾಯ) ಆನಂದ ಕಲ್ಲೊಳಿಕರ ವಿರುದ್ಧ ತನಿಖೆ ನಡೆಸಿ ಕ್ರಮ ವಹಿಸುವಂತೆ ಮೇಯರ್‌ ಈರೇಶ ಅಂಚಟಗೇರಿ(Earesh anchatageri) ಆದೇಶಿಸಿದರು. ಕೈಗೊಂಡಿರುವ ಬಗ್ಗೆ 15 ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದರು. ಗಮನ ಸೆಳೆಯುವ ಸೂಚನೆ ಅವಧಿಯಲ್ಲಿ ವಿಷಯ ಪ್ರಸ್ತಾಪಿಸಿದ ಸವಡಿ, ಕಂದಾಯ ಇಲಾಖೆಯಲ್ಲಿ ಅಧಿಕಾರಿಗಳು ಯಾವುದೇ ಕೆಲಸ ಮಾಡುತ್ತಿಲ್ಲ. ಇ ಸ್ವತ್ತು ಸಂಬಂಧಿಸಿ ಪ್ರತಿನಿತ್ಯ ಕೋಟ್ಯಂತರ ರುಪಾಯಿ ವಹಿವಾಟು ನಡೆಯುತ್ತಿದೆ. ಇಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಎಂದು ದೂರಿದರು.

ಎ.ಸಿ.ಬಿ ಬಲೆಗೆ ಬಿದ್ದ ಹಾವೇರಿ ನಗರ ಸಭೆ ಮಿಕಗಳು

32ನೇ ವಾರ್ಡ್‌ನ ಸತೀಶ ಹಾನಗಲ್‌, ಕಂದಾಯ ಇಲಾಖೆಯ ಅಧಿಕಾರಿ ಆನಂದ ಅವರು ಕಡತಗಳನ್ನು ಸಹಿ ಮಾಡಲು, ವರ್ಗಾಯಿಸಲು . 80ರಿಂದ . 90 ಸಾವಿರ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು. 41ನೇ ವಾರ್ಡ್‌ನ ಸಂತೋಷ ಚವಾಣ್‌ ಮಾತನಾಡಿ, ಆನಂದ ಪಾಲಿಕೆಗೆ ಬಂದು 9 ತಿಂಗಳಾಗಿದೆ. ಈ ಅವಧಿಯಲ್ಲಿ ಮಾಡಿದ ಭ್ರಷ್ಟಾಚಾರದ ದಾಖಲೆ ನಮ್ಮ ಬಳಿಯಿದೆ ಎಂದರು. ಶಿವು ಹಿರೇಮಠ ಸೇರಿ ಹಲವು ಹಿರಿಯ ಸದಸ್ಯರು ಈ ಬಗ್ಗೆ ಕ್ರಮ ವಹಿಸಲು ಒತ್ತಾಯಿಸಿದರು.

ಇದಕ್ಕೂ ಮುನ್ನ ಪಾಲಿಕೆಯಲ್ಲಿ ಆರ್ಥಿಕ ಪರಿಸ್ಥಿತಿ ನಿರ್ವಹಣೆ ಬಗ್ಗೆ ಮಾಹಿತಿ ನೀಡಲು ಸದಸ್ಯ ವೀರಣ್ಣ ಸವಡಿ ವಿಷಯ ಮಂಡಿಸಿದರು. 2022ನೇ ಸಾಲಿನಲ್ಲಿ ಸದಸ್ಯರಿಗೆ ಘೋಷಿಸಲಾದ ವಾರ್ಡ್‌ ಫಂಡ್‌ . 50 ಲಕ್ಷ ಯಾವುದಕ್ಕೂ ಸಾಲಲ್ಲ ಎಂದು ಆಕ್ಷೇಪಿಸಿದರು. ಹುಧಾ ಮಹಾನಗರದಲ್ಲಿ 2.50 ಲಕ್ಷ ಆಸ್ತಿಗಳಿವೆ. ಅವುಗಳಿಂದ ಜಿಐಎಸ್‌ ಸರ್ವೇ ಮಾಡಿ ತೆರಿಗೆ ತುಂಬದವರ ಸಂಪೂರ್ಣ ವರದಿ ಪಡೆಯಬೇಕು. ಇದಕ್ಕಾಗಿ ಹೊಸದಾಗಿ ಟೆಂಡರ್‌ ಕರೆಯಬೇಕು. ಕರ ಭರಿಸದವರ ವಿರುದ್ಧ ಕ್ರಮ ಆಗಬೇಕು ಎಂದರು.

ಅಕ್ರಮ ಮರಳು ದಂಧೆ; ಕಣ್ಣು ಮುಚ್ಚಿ ಕುಳಿತ ಜಿಲ್ಲಾಡಳಿತ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ!

ಮಹಾನಗರದಲ್ಲಿ 2700 ನಿವೇಶನವನ್ನು ಲೀಸ್‌ಗೆ ನೀಡಲಾಗಿದೆ. ಇದರ ತೆರಿಗೆ ಸಮರ್ಪಕವಾಗಿ ಬರುತ್ತಿಲ್ಲ. ಹುಬ್ಬಳ್ಳಿಯಲ್ಲಿ 900, ಧಾರವಾಡದಲ್ಲಿ 600 ಪಾಲಿಕೆಯ ವಾಣಿಜ್ಯ ಸಂಕೀರ್ಣ ಇದೆ. ಹಳೇ ಮಾದರಿಯಲ್ಲೇ ಇವುಗಳಿಂದ ಬಾಡಿಗೆ ಆಕರಣೆ ಮುಂದುವರಿದಿದೆ. ಬಾಡಿಗೆ ಹೆಚ್ಚಿಸಿ. ಹೊಸ ಬಾಡಿಗೆ ವಿಧಿಸಬೇಕು ಎಂದರು.

ಸದಸ್ಯ ಶಿವು ಹಿರೇಮಠ ಮಾತನಾಡಿ, ನಗರದಲ್ಲಿ ಜಿಯೋ, ಏರ್‌ಟೆಲ್‌ ಸೇರಿ ಹಲವು ಟೆಲಿಕಾಂ ಕಂಪನಿಗಳು ಪಾಲಿಕೆಯಿಂದ 5 ಕಿಮೀ ಪರವಾನಗಿ ಪಡೆದು 15-20 ಕಿಮೀ ಭೂಗತ ಕೇಬಲ್‌ ಹಾಕುತ್ತಾರೆ. ಈ ರೀತಿ ಸಾವಿರಾರು ಕಿಮೀ ಕೇಬಲ್‌ ಅಳವಡಿಕೆ ಆಗುತ್ತಿದೆ. ಇದಕ್ಕೆ ಪಾಲಿಕೆ ಯಾವುದೇ ಬಾಡಿಗೆಯನ್ನೇ ಹಾಕುತ್ತಿಲ್ಲ ಎಂದರು.

ಈ ನಡುವೆ ಮಾತನಾಡಿದ ಕಾಂಗ್ರೆಸ್‌ನ ನಿರಂಜನ ಹಿರೇಮಠ, ಪಾಲಿಕೆಗೆ ಯಾಕೆ ವಿಶೇಷ ಅನುದಾನ ಬರಲ್ಲ? ಕೇಂದ್ರ, ರಾಜ್ಯ ಸರ್ಕಾರ ನಮ್ಮದೇ ಆಗಿದೆ. ಹೆಚ್ಚಿನ ಅನುದಾನಕ್ಕೆ ಪ್ರಯತ್ನಿಸಿ ಎಂದರು. ಇದಕ್ಕೆ ಮೇಯರ್‌ ಪ್ರತಿಕ್ರಿಯಿಸಿ ಪಾಲಿಕೆಗೆ . 150 ಕೋಟಿ ವಿಶೇಷ ಅನುದಾನ ಬಂದಿದೆ ಎಂದು ಚರ್ಚೆಗೆ ತೆರೆ ಎಳಿದರು.

ಸದಸ್ಯ ಶಿವು ಮೆಣಸಿನಕಾಯಿ ಮಾತನಾಡಿ, ಮಹಾನಗರದಲ್ಲಿರುವ ಪಾಲಿಕೆಯ ವಾಣಿಜ್ಯ ಕಟ್ಟಡದಲ್ಲಿ ಬಹುತೇಕ ದುರ್ಬಳಕೆ ಆಗುತ್ತಿವೆ. ಮೂಲದಲ್ಲಿ ಬಾಡಿಗೆ ಪಡೆದಿದ್ದವರು ಈಗ ಬೇರೆಯವರಿಗೆ ನೀಡಿ ತಾವು ಲಾಭ ಪಡೆಯುತ್ತಿದ್ದಾರೆ ಎಂದು ದೂರಿದರು.

ಸದಸ್ಯ ರಾಜಣ್ಣ ಕೊರವಿ, ಇಂದೋರ್‌ ಮಹಾನಗರ ಪಾಲಿಕೆ ಮಾದರಿಯಲ್ಲಿ ಆರ್ಥಿಕ ಶಿಸ್ತು ಅಳವಡಿಸಿಕೊಳ್ಳುವ ಪ್ರಯತ್ನ ಆಗಬೇಕು ಎಂದರು.

ಹೆಚ್ಚುವರಿ ವಿಷಯಕ್ಕೆ ವಿರೋಧ; ಸಭೆ ಮುಕ್ತಾಯ:

ಹೆಚ್ಚಿನ ವಿಷಯ ಪಟ್ಟಿಯಲ್ಲಿ 19 ವಿಷಯಗಳನ್ನು ಇಟ್ಟಹಿನ್ನೆಲೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್‌ನ ಸುವರ್ಣ ಮಣಿಕುಂಟ್ಲ ಸೇರಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ನಾಲ್ಕಾರು ವಿಷಯ ಇಟ್ಟರೆ ಚರ್ಚೆ ಮಾಡಬಹುದು. ಇಷ್ಟೊಂದು ವಿಷಯ ಇಟ್ಟರೆ ಹೇಗೆ ಎಂದು ಆಕ್ಷೇಪಿಸಿದರು. ಆದರೆ ಇದಕ್ಕೆ ಮೇಯರ್‌ ಒಪ್ಪಲಿಲ್ಲ. ಅಧಿಕಾರಿಗಳು ಹಾಗೂ ಬಿಜೆಪಿ ವಿರುದ್ಧ ಘೋಷಣೆ ಕೂಗಿದ ವಿಪಕ್ಷ ನಾಯಕರು ಬಾವಿಗಿಳಿದು ಅಸಮಾಧಾನ ವ್ಯಕ್ತಪಡಿಸಿದರು. ಇದರಿಂದ ಮೇಯರ್‌ ಸಭೆಯನ್ನು ಹತ್ತು ನಿಮಿಷಗಳ ಕಾಲ ಮುಂದೂಡಿದರು. ಪುನಃ ಸಭೆ ಆರಂಭವಾದರೂ ಕಾಂಗ್ರೆಸ್ಸಿಗರು ಗಲಾಟೆ ಮುಂದುವರಿಸಿದರು. ಹೀಗಾಗಿ ಎಲ್ಲ 19 ವಿಷಯಗಳಿಗೆ ಆಡಳಿತರೂಢ ಪಕ್ಷದ ಸದಸ್ಯರು ಅನುಮೋದನೆ ನೀಡಿದರು. ಸಭೆಯನ್ನು ಮುಕ್ತಾಯಗೊಳಿಸುವುದಾಗಿ ಮೇಯರ್‌ ಘೋಷಿಸಿದರು.

ಲಂಚ ಕೊಟ್ಟು ಕೆಲಸ ಮಾಡಿಸಿಕೊಂಡು ಪೇಡೆ ಬಾಕ್ಸ್‌ ಕೊಟ್ಟರು:

ಸಭೆ ಬಳಿಕ ಮಾತನಾಡಿದ ಮೇಯರ್‌ ಈರೇಶ ಅಂಚಟಗೇರಿ, ಪಾಲಿಕೆ ವ್ಯಾಪ್ತಿಯಲ್ಲಿ ಯಾರೇ ತಪ್ಪು ಮಾಡಿದರೂ ಅದು ಆಡಳಿತ ಪಕ್ಷದ ಜವಾಬ್ದಾರಿ. ಆದರೆ ಯಾರೊಬ್ಬರೂ ಲಿಖಿತವಾಗಿ ದೂರು ಕೊಡುವುದಿಲ್ಲ. ಸ್ವತಃ 5ನೇ ವಲಯ ವ್ಯಾಪ್ತಿಯಲ್ಲಿ ನಾನೇ ಸೂಚಿಸಿದ ಒಂದು ಕೆಲಸ ಆಗಿರಲಿಲ್ಲ. ಬಳಿಕ . 6500 ಲಂಚ ನೀಡಿದ ಬಳಿಕ ಕೆಲಸ ಆಯ್ತು ಎಂದು ವ್ಯಕ್ತಿಯೊಬ್ಬರು ಪೇಡೆ ಕೊಟ್ಟು ಹೇಳಿದರು. ಆಯಾ ಇಲಾಖೆಯಲ್ಲಿ ಯಾರೇ ಭ್ರಷ್ಟಾಚಾರ ಮಾಡಿದರೂ ಇಲಾಖೆ ಮುಖ್ಯಸ್ಥರನ್ನೆ ಹೊಣೆಗಾರರಾಗಿ ಮಾಡುತ್ತೇವೆ. ಏಜೆಂಟ್‌ರ ಹಾವಳಿ ತಡೆಗೆ ಎಫ್‌ಐಆರ್‌ ದಾಖಲಿಸುವ ಮೂಲಕ ಕ್ರಮ ವಹಿಸಲಾಗುವುದು ಎಂದರು.

ಮೃತ ಪೌರ ಕಾರ್ಮಿಕರಿಗೆ . 5 ಲಕ್ಷ ಪರಿಹಾರ; ಪ್ರತಿಭಟನೆ:

ಈಚೆಗೆ ದುರಂತದಲ್ಲಿ ಜು. 23ರಂದು ಮೃತಪಟ್ಟಪೌರ ಕಾರ್ಮಿಕ ವಸಂತ ದುರ್ಗಪ್ಪ ಇಳಕಲ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪಾಲಿಕೆ ಸಭೆ ಅವರ ಅವಲಂಬಿತರ ಕುಟುಂಬಕ್ಕೆ . 5 ಲಕ್ಷ ಪರಿಹಾರ ನೀಡಲು ಒಪ್ಪಿತು. ಆದರೆ, ಸೂಕ್ತ ಚರ್ಚೆ ಇಲ್ಲದೆ ಕೇವಲ . 5 ಲಕ್ಷ ಪರಿಹಾರ ಸೀಮಿತಗೊಳಿಸಲಾಗಿದೆ. ಇದು ಖಂಡನೀಯ ಎಂದು ಪೌರಕಾರ್ಮಿಕರು ಪ್ರತಿಭಟಿಸಿದರು.

ಪಾಲಿಸ್ಟರ್‌ ಧ್ವಜ ವಿರೋಧಿಸಿ ಟೋಪಿ:

ಖಾದಿ ಹೋರಾಟದ ಭಾಗವಾಗಿ ಕಾಂಗ್ರೆಸ್‌ ಸದಸ್ಯರು ಸಭೆಯಲ್ಲಿ ಟೋಪಿ ಧರಿಸಿ ಭಾಗಿಯಾಗಿದ್ದರು. ವಿಪಕ್ಷ ನಾಯಕ ದೊರೈರಾಜ ಮಣಿಕುಂಟ್ಲ ಸೇರಿ ಹಲವರು ಖಾದಿ ಟೋಪಿ ಧರಿಸಿ ಬಂದಿದ್ದರು. ಹೆಚ್ಚಿನ ವಿಷಯ ಪಟ್ಟಿಯಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಕುರಿತು ವಿಷಯಸೂಚಿ ಇತ್ತಾದರೂ ಚರ್ಚೆ ಆಗಲಿಲ್ಲ.

ಇ-ಸ್ವತ್ತು ಅವ್ಯವಸ್ಥೆ ವಿರುದ್ಧ ಪ್ರತಿಭಟನೆ:

ಸಭೆ ನಡೆಯುವ ವೇಳೆ ಹುಧಾ ಡಿಪ್ಲೊಮಾ ಸಿವಿಲ್‌ ಎಂಜಿನಿಯರ್ಸ್‌ ಅಸೋಸಿಯೇಶನ್‌ನವರು ಪ್ರತಿಭಟನೆ ನಡೆಸಿದರು. ಕಟ್ಟಡ ಪರವಾನಗಿ ಪಡೆಯುವಾಗ ಇ-ಸ್ವತ್ತು ಮತ್ತು ಅಸೆಸ್‌ಮೆಂಟ್‌ ಉತಾರ ಸ್ವೀಕರಿಸದಿರಲು ಆದೇಶಿಸಬೇಕು. ನಿರ್ಮಾಣ-2 ಸದ್ಯ ಸ್ಥಗಿತಗೊಂಡಿದ್ದು ಶೀಘ್ರ ಮರು ಪ್ರಾರಂಭಿಸಬೇಕು. ಕಟ್ಟಡ ಪರವಾನಗಿ ನೀಡುವಿಕೆಯಲ್ಲಿ ತುಂಬಾ ವಿಳಂಬವಾಗುತ್ತಿದ್ದು, ಈ ಪ್ರಕ್ರಿಯೆ ಚುರುಕುಗೊಳಿಸಲು ಕ್ರಮ ವಹಿಬೇಕು ಎಂದು ಆಗ್ರಹಿಸಿದರು.

Follow Us:
Download App:
  • android
  • ios