Asianet Suvarna News Asianet Suvarna News

ಯಾರಿಗೆ ಯಶವಂತಪುರದಲ್ಲಿ ಒಲಿಯುತ್ತದೆ ಯಶ..?

ವೈವಿಧ್ಯಮಯ ಕ್ಷೇತ್ರದಲ್ಲಿ ಪ್ರಸ್ತುತ ಚುನಾವಣಾ ಕಣ ರಂಗೇರಿದೆ. ಕಳೆದ ಬಾರಿ ಕಾಂಗ್ರೆಸ್  ಅಭ್ಯರ್ಥಿಯಾಗಿ ಸ್ಪರ್ಧಿಸಿ  30 ಸಾವಿರ ಮತಗಳ ಅಂತರದಿಂದ ಗೆದ್ದಿದ್ದ ಎಸ್.ಟಿ.ಸೋಮಶೇಖರ್ ಮತ್ತೊಮ್ಮೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಕಳೆದ ಬಾರಿ ಸೋಮಶೇಖರ್ ವಿರುದ್ದ ಸೋತಿದ್ದ ಜೆಡಿಎಸ್‌ನ ಟಿ.ಎನ್. ಜವರಾಯಿಗೌಡ ಮುಯ್ಯಿ ತೀರಿಸಿಕೊಳ್ಳುವ ತವಕದಲ್ಲಿದ್ದಾರೆ. ಈ ನಡುವೆ ಕ್ಷೇತ್ರಕ್ಕೆ ಕಡೆ ಕ್ಷಣದಲ್ಲಿ ಕಾಲಿಟ್ಟಿರುವ ನಟ ಜಗ್ಗೇಶ್ ಬಿಜೆಪಿಯ ಅಭ್ಯರ್ಥಿಯಾಗಿದ್ದಾರೆ. 

Yeshwanthpur Constituency Fight

ಶ್ರೀಕಾಂತ್ ಎನ್. ಗೌಡಸಂದ್ರ

ಬೆಂಗಳೂರು :  ಪೈಕಿ ಯಶವಂತಪುರ ವಿಧಾನಸಭಾ ಕ್ಷೇತ್ರವೂ ಒಂದು. ಬೆಂಗಳೂರಿನಲ್ಲಿ ಪೈಕಿ ಅತಿ ವೇಗವಾಗಿ ನಗರೀಕರಣಗೊಳ್ಳುತ್ತಿರುವ ಕ್ಷೇತ್ರವೂ ಹೌದು. ಹಳ್ಳಿ ಸೊಗಡು ಹಾಗೂ ನಗರ ಜೀವನಶೈಲಿ ಸಮ ಮಿಶ್ರಣದಂತಿರುವ ಕ್ಷೇತ್ರದಲ್ಲಿ ಮೂಲಸೌಕರ್ಯ ಸಮಸ್ಯೆಗೆ ಕೊರತೆ ಇಲ್ಲ. ಯಶವಂತಪುರ ರೈಲ್ವೆ ಜಂಕ್ಷನ್, ನಗರದ ಅತಿದೊಡ್ಡ ಎಪಿಎಂಸಿ ಮಾರುಕಟ್ಟೆಯು ಯಶವಂತಪುರದಲ್ಲಿವೆ. ಆದರೆ, ಎರಡೂ ಸಹ ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವುದಿಲ್ಲ. ಬಿಬಿಎಂಪಿಯ ಐದು ವಾರ್ಡ್ ವ್ಯಾಪ್ತಿಯಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರದಲ್ಲಿ ಹಳ್ಳಿ ಪ್ರದೇಶವೂ ಕೃಷಿಯಿಂದ ದೂರವಾಗುತ್ತಿದೆ. 

ಇಂತಹ ವೈವಿಧ್ಯಮಯ ಕ್ಷೇತ್ರದಲ್ಲಿ ಪ್ರಸ್ತುತ ಚುನಾವಣಾ ಕಣ ರಂಗೇರಿದೆ. ಕಳೆದ ಬಾರಿ ಕಾಂಗ್ರೆಸ್  ಅಭ್ಯರ್ಥಿಯಾಗಿ ಸ್ಪರ್ಧಿಸಿ  30 ಸಾವಿರ ಮತಗಳ ಅಂತರದಿಂದ ಗೆದ್ದಿದ್ದ ಎಸ್.ಟಿ.ಸೋಮಶೇಖರ್ ಮತ್ತೊಮ್ಮೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಕಳೆದ ಬಾರಿ ಸೋಮಶೇಖರ್ ವಿರುದ್ದ ಸೋತಿದ್ದ ಜೆಡಿಎಸ್‌ನ ಟಿ.ಎನ್. ಜವರಾಯಿಗೌಡ ಮುಯ್ಯಿ ತೀರಿಸಿಕೊಳ್ಳುವ ತವಕದಲ್ಲಿದ್ದಾರೆ. ಈ ನಡುವೆ ಕ್ಷೇತ್ರಕ್ಕೆ ಕಡೆ ಕ್ಷಣದಲ್ಲಿ ಕಾಲಿಟ್ಟಿರುವ ನಟ ಜಗ್ಗೇಶ್ ಬಿಜೆಪಿಯ ಅಭ್ಯರ್ಥಿಯಾಗಿದ್ದಾರೆ. ಒಕ್ಕಲಿಗ ಸಮುದಾಯದ ಮತಗಳೇ ನಿರ್ಣಾಯಕ  ಎಂಬಂತಿರುವ ಕ್ಷೇತ್ರದಲ್ಲಿ ಎಸ್‌ಸಿ-ಎಸ್‌ಟಿ, ಹಿಂದುಳಿದ ವರ್ಗ ಹಾಗೂ ಮುಸ್ಲಿಂ ಮತಗಳು ಬಹುಸಂಖ್ಯೆಯಲ್ಲಿವೆ. ಈ ಕಾರಣಕ್ಕೆ ಮೂರೂ ಪಕ್ಷಗಳು ಒಕ್ಕಲಿಗರನ್ನೇ ಕಣಕ್ಕಿಳಿಸಿದ್ದು ಒಕ್ಕಲಿಗರ ಹೊರತಾಗಿ ಹೆಚ್ಚು ಮತಗಳಿರುವ ಸಮುದಾಯವನ್ನು ಸೆಳೆದವರಿಗೆ ಗೆಲ್ಲುವ ಸಾಧ್ಯತೆ ಹೆಚ್ಚು.

ಹತ್ತು ಗ್ರಾಮಪಂಚಾಯ್ತಿ ಹಾಗೂ ಐದು ವಾರ್ಡ್ ಹೊಂದಿರುವ ಕ್ಷೇತ್ರದಲ್ಲಿ ಹೆಮ್ಮಿಗೆಪುರ, ದೊಡ್ಡಬಿದರಕಲ್ಲು, ಹೇರೊಹಳ್ಳಿ ವಾರ್ಡ್‌ನಲ್ಲಿ ಕಾಂಗ್ರೆಸ್ ಹಾಗೂ ಉಲ್ಲಾಳು, ಕೆಂಗೇರಿಯಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಗ್ರಾಮ ಪಂಚಾಯ್ತಿಗಳಲ್ಲೂ
ಕಾಂಗ್ರೆಸ್ ಮೇಲುಗೈ ಹೊಂದಿರುವುದು ಸೋಮಶೇಖರ್‌ಗೆ ಪೂರಕ ವಾತಾವರಣ ನಿರ್ಮಿಸಿದೆ. ಸೋಮಶೇಖರ್ ಕ್ಷೇತ್ರಕ್ಕೆ ಸಾಮರ್ಥ್ಯಕ್ಕೂ ಮೀರಿ ಅನುದಾನದ ಹೊಳೆ ಹರಿಸಿ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಆದರೆ, ಬೃಹತ್ ಕ್ಷೇತ್ರದಲ್ಲಿ ಮೂಲಸೌಕರ್ಯಗಳ ಕೊರತೆ  ಹಾಗೆಯೇ ಉಳಿದಿದೆ. 

ಹೀಗಾಗಿ ಕೆಲ ವರ್ಗಗಳಿಗೆ ಕ್ಷೇತ್ರದಲ್ಲಾದ ಅಭಿವೃದ್ಧಿ ತೃಪ್ತಿ ತಂದಿಲ್ಲ. ಇದರ ನಡುವೆ ನಾಲ್ಕು ಬಿಬಿಎಂಪಿ ಕಸ ಸಂಸ್ಕರಣಾ ಘಟಕಗಳು ಕ್ಷೇತ್ರಕ್ಕೆ ಬಂದಿದೆ. ಈ  ಬಗ್ಗೆ ತುಸು ಅಸಮಾಧಾನವಿದೆ. ಇದೆಲ್ಲದರ ನಡುವೆಯೂ ಸರ್ಕಾರದ  ಕಾರ್ಯಕ್ರಮಗಳು, ಕ್ಷೇತ್ರದ ಮೇಲಿರುವ ತಮ್ಮ ಪ್ರಭಾವದೊಂದಿಗೆ  ಸೋಮಶೇಖರ್ ಬಿರುಸಿನ ಪ್ರಚಾರ ಹಮ್ಮಿಕೊಂಡಿದ್ದಾರೆ. ಸೋಮಶೇಖರ್‌ಗೆ ಪ್ರಬಲ ಪೈಪೋಟಿ ನೀಡುತ್ತಿರುವ ಜವರಾಯಿಗೌಡ ಒಕ್ಕಲಿಗ ಮತಗಳನ್ನು ಜೆಡಿಎಸ್‌ನತ್ತ ಕ್ರೋಡೀಕರಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ. ಕ್ಷೇತ್ರಕ್ಕೆ ಕಸ ಸಂಸ್ಕರಣಾ ಘಟಕಗಳನ್ನು ತಂದು ಸಾರ್ವಜನಿಕರ ಆರೋಗ್ಯಕ್ಕೆ ಹಾನಿ ಉಂಟು ಮಾಡಿದ್ದಾರೆ. ಅಪಾರ್ಟ್‌ಮೆಂಟ್‌ಗಳು ಶರವೇಗದಲ್ಲಿ ಬೆಳೆಯುತ್ತಿದ್ದು, ನೀರು ಕೊರತೆ ಗಿಸುತ್ತಿಲ್ಲ ಎಂಬಿತ್ಯಾದಿ ವಿಚಾರಗಳನ್ನು ಇಟ್ಟುಕೊಂಡು ಸೋಮಶೇಖರ್ ವಿರುದ್ಧ ಪ್ರಚಾರ ಆರಂಭಿಸಿದ್ದಾರೆ. ಇದು ಸೋಮಶೇಖರ್‌ಗೆ ತಲೆ ನೋವು ತಂದಿತ್ತಿದೆ.

2008 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಶೋಭಾ ಕರಂದ್ಲಾಜೆ 1082 ಮತಗಳಿಂದ ಸೋಮಶೇಖರ್ ವಿರುದ್ದ ಗೆದ್ದಿದ್ದರು. ಆದರೆ, ೨೦೧೩ರಲ್ಲಿ ಅವರು ಸ್ಪರ್ಧೆ ಮಾಡದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಬಿಜೆಪಿ ನಾಯಕತ್ವ ಇಲ್ಲದಾಗಿತ್ತು. 2018 ರ  ಚುನಾವಣೆಯಲ್ಲಿ ಕೊನೆಯವರೆಗೂ ಸಂಸದೆ ಶೋಭಾ ಕರಂದ್ಲಾಜೆ ಅವರೇ ಸ್ಪರ್ಧಿಸಲಿದ್ದಾರೆ ಎಂಬ ಗುಮಾನಿ ಇತ್ತು. ಹೀಗಾಗಿ ಕಾದುಕುಳಿತಿದ್ದ ಸ್ಥಳೀಯ ಮುಖಂಡರು ಅಭ್ಯರ್ಥಿ ಘೋಷಣೆ ವಿಳಂಬದಿಂದಾಗಿ ವಿವಿಧ ಪಕ್ಷಗಳಲ್ಲಿ ನೆಲೆ ಕಂಡುಕೊಂಡರು. ಇದೀಗ ಕೊನೆ ಕ್ಷಣದಲ್ಲಿ ನಟ ಜಗ್ಗೇಶ್ ಅವರನ್ನು ಬಿಜೆಪಿಯಿಂದ ಕಣಕ್ಕಿಳಿಸಿದ್ದು, ಸಾಂಪ್ರದಾಯಿಕ ಕಾರ್ಯಕರ್ತರ ಮೂಲಕ ಪ್ರಚಾರ ಶುರು ಮಾಡಿದ್ದಾರೆ. 

ಕ್ಷೇತ್ರ ಪ್ರವೇಶಿಸಿದ ಕೂಡಲೇ ಸೋಮಶೇಖರ್ ವಿರುದ್ಧ ಏಕವಚನದಲ್ಲಿ ಹರಿಹಾಯ್ದ ಜಗ್ಗೇಶ್, ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಹಾಗೂ ನರೇಂದ್ರ ಮೋದಿ ವರ್ಚಸ್ಸಿನಿಂದ ಗೆದ್ದು ಬರುತ್ತೇನೆ ಎಂಬ ವಿಶ್ವಾಸದಲ್ಲಿದ್ದಾರೆ. ಆದರೆ, ತುರುವೇಕೆರೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದು ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ್ದರು. ಇಲ್ಲೂ ಗೆದ್ದರೂ ನಿಷ್ಠರಾಗಿ ಉಳಿಯುವರೇ ಎಂದು ಪ್ರತಿಪಕ್ಷಗಳು ಅವರ ವಿರುದ್ಧ ಪ್ರಚಾರ ಮಾಡುತ್ತಿವೆ. ಹೀಗಾಗಿ ಈ ಕ್ಷೇತ್ರದಲ್ಲೇನಿದ್ದ ರೂ ಕಾಂಗ್ರೆಸ್- ಜೆಡಿಎಸ್ ನಡುವಿನ ಹಣಾಹಣಿ. 

Follow Us:
Download App:
  • android
  • ios