ಆಪ್ತರ ಪರ ಯಶ್ ಚುನಾವಣಾ ಪ್ರಚಾರ
ಮೇ 12ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಪೈಕಿ ತಮಗೆ ಆಪ್ತರಾಗಿರುವ ಕೆಲವರ ಪರವಾಗಿ ಪ್ರಚಾರ ಮಾಡುವುದಕ್ಕೆ ಖ್ಯಾತ ಚಿತ್ರ ನಟ ಯಶ್ ಮುಂದಾಗಿದ್ದಾರೆ.
ಬೆಂಗಳೂರು: ಮೇ 12ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಪೈಕಿ ತಮಗೆ ಆಪ್ತರಾಗಿರುವ ಕೆಲವರ ಪರವಾಗಿ ಪ್ರಚಾರ ಮಾಡುವುದಕ್ಕೆ ಖ್ಯಾತ ಚಿತ್ರ ನಟ ಯಶ್ ಮುಂದಾಗಿದ್ದಾರೆ.
ಯಶ್ ಅವರ ಚುನಾವಣಾ ಪ್ರಚಾರ ಕಾರ್ಯ ಆರಂಭವಾಗಿದೆ. ಮೈಸೂರಿನಿಂದ ಆರಂಭಿಸಿ ಇಡೀ ಕರ್ನಾಟಕದಾದ್ಯಂತ ತಮ್ಮ ಆತ್ಮೀಯರ ಪರವಾಗಿ ಪ್ರಚಾರ ಮಾಡುವುದಾಗಿ ಯಶ್ ಹೇಳಿದ್ದಾರೆ. ಮೈಸೂರಿನಲ್ಲಿ ಸಾ.ರಾ. ಮಹೇಶ್ ಪರವಾಗಿ ಯಶ್ ಚುನಾವಣಾ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.
ಯಾವುದೇ ಪಕ್ಷದ ಪರವಾಗಿ ನಾನು ಪ್ರಚಾರ ಮಾಡುತ್ತಿಲ್ಲ. ನನಗೆ ಗೊತ್ತಿರುವ, ತಮ್ಮ ತಮ್ಮ ಕ್ಷೇತ್ರಕ್ಕೆ ಒಳ್ಳೆಯ ಕೆಲಸ ಮಾಡುತ್ತಾರೆಂಬ ನಂಬಿಕೆಯಿರುವ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವುದಕ್ಕೆ ನಾನು ನಿರ್ಧರಿಸಿದ್ದೇನೆ.
ನಾನು ಯಾರ ಪರವಾಗಿ ಪ್ರಚಾರ ಮಾಡುತ್ತೇನೋ ಅವರೆಲ್ಲರೂ ನನಗೆ ಬಹಳ ವರ್ಷಗಳಿಂದ ಗೊತ್ತಿರುವವರು. ಅವರಾಗಿಯೇ ಬಂದು ಪ್ರಚಾರ ಕಾರ್ಯಕ್ಕೆ ನೆರವಾಗುವಂತೆ ಕೇಳಿಕೊಂಡಿದ್ದರು ಈಗಾಗಲೇ ಸಾ.ರಾ.ಮಹೇಶ್, ಎಂ.ಬಿ.ಪಾಟೀಲ್, ಸಿ.ಎಂ.ಉದಾಸಿ, ವಿನಯ್ ಕುಲಕರ್ಣಿ, ಜ್ಯೋತಿ ಗಣೇಶ್, ರಾಮದಾಸ್, ಸತೀಶ್ ರೆಡ್ಡಿ ಪರ ಪ್ರಚಾರ ಮಾಡಲು ನಿರ್ಧರಿಸಿದ್ದೇನೆ. ಈ ಪಟ್ಟಿಯಲ್ಲಿ ಇನ್ನೂ ಅನೇಕರು ಇದ್ದಾರೆ ಎಂದು ಯಶ್ ತಿಳಿಸಿದ್ದಾರೆ.