ಭಾಗ್ಯಲಕ್ಷ್ಮೀ ಬಾಂಡ್ ಮೊತ್ತ 2 ಲಕ್ಷಕ್ಕೆ ಏರಿಕೆ
ಈ ಹಿಂದೆ ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅನುಷ್ಠಾನಕ್ಕೆ ತಂದಿದ್ದ ಭಾಗ್ಯಲಕ್ಷ್ಮೀ ಬಾಂಡ್ನ ಮೊತ್ತವನ್ನು 1 ಲಕ್ಷದಿಂದ 2 ಲಕ್ಷ ರು.ಗೆ ಏರಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ.
ಬೆಂಗಳೂರು [ಮೇ 18] : ಈ ಹಿಂದೆ ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅನುಷ್ಠಾನಕ್ಕೆ ತಂದಿದ್ದ ಭಾಗ್ಯಲಕ್ಷ್ಮೀ ಬಾಂಡ್ನ ಮೊತ್ತವನ್ನು 1 ಲಕ್ಷದಿಂದ 2 ಲಕ್ಷ ರು.ಗೆ ಏರಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾಗಿ ಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸಿದ ಅವರು ಸಂಜೆ ವೇಳೆಗೆ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಮಠಾಧೀಶರಾದ ಡಾ. ಶಿವಕುಮಾರ ಸ್ವಾಮೀಜಿಯ ಆಶೀರ್ವಾದ ಪಡೆದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಗಳ ದರ್ಶನ ಪಡೆದಿದ್ದೇನೆ. ಅವರ ಆಶೀರ್ವಾದದಿಂದಾಗಿ ನಾವಿವತ್ತು ದೊಡ್ಡ ಗೆಲುವನ್ನು ಸಾಧಿಸಿ ಜನರ ಪ್ರೀತಿ ಗಳಿಸಿ ಸರ್ಕಾರ ರಚಿಸಲು ಸಾಧ್ಯ ವಾಯಿತು ಎಂದು ತಿಳಿಸಿದರು. ಬಹುಮತ ಸಾಬೀತಿನ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಇನ್ನು 10, 12 ದಿವಸದೊಳಗೆ ವಿಧಾನ ಮಂಡಲ ಅಧಿವೇಶನ ಕರೆದು ಬಹುಮತ ಸಾಬೀತುಪಡಿಸುವುದಾಗಿ
ಭರವಸೆ ವ್ಯಕ್ತಪಡಿಸಿದರು. ವಿಧಾನ ಮಂಡಲದ ಅಧಿವೇಶನದಲ್ಲಿ 100 ಕ್ಕೆ 100 ರಷ್ಟು ಬಹುಮತ ಸಾಬೀತು ಪಡಿಸುವ ವಿಶ್ವಾಸ ತಮಗಿದೆ ಎಂದರು.
ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬದೇಶದ ಪ್ರಧಾನಿ ಮೋದಿ ಅವರ ಚಿಂತನೆಯಂತೆ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುವುದಾಗಿ ತಿಳಿಸಿದರು. ಹಾಗೆಯೇ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಆಸೆಯಂತೆ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲಾಗಿದೆ ಎಂದರು. ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡು ಮುಂದುವರೆಯಲು ಯತ್ನಿಸಿವೆ ಎಂದರು.