ಸಿದ್ದರಾಮಯ್ಯ ಪರ ಸುದೀಪ್ ಚುನಾವಣಾ ಪ್ರಚಾರ
ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರು ಸಿಎಂ ಸಿದ್ದರಾಮಯ್ಯ ಪರ ಚುನಾವಣಾ ಪ್ರಚಾರ ಮಾಡಲಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಸುದೀಪ್ ಸಿದ್ದರಾಮಯ್ಯ ಪರವಾಗಿ ಪ್ರಚಾರ ಮಾಡುತ್ತಿದ್ದೇನೆ ಹೊರತು, ಇದು ಶ್ರೀ ರಾಮುಲು ವಿರುದ್ಧದ ಪ್ರಚಾರ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು : ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರು ಸಿಎಂ ಸಿದ್ದರಾಮಯ್ಯ ಪರ ಚುನಾವಣಾ ಪ್ರಚಾರ ಮಾಡಲಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಸುದೀಪ್, ಸಿದ್ದರಾಮಯ್ಯ ಪರವಾಗಿ ಪ್ರಚಾರ ಮಾಡುತ್ತಿದ್ದೇನೆ ಹೊರತು, ಇದು ಶ್ರೀ ರಾಮುಲು ವಿರುದ್ಧದ ಪ್ರಚಾರ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಬಿಜೆಪಿ ಮುಖಂಡ ಶ್ರೀ ರಾಮುಲು ನನ್ನ ಸಹೋದರ ಇದ್ದಂತೆ. ಆದ್ದರಿಂದ ಅವರ ವಿರುದ್ಧ ಪ್ರಚಾರ ಮಾಡುವ ಉದ್ದೇಶ ಇಲ್ಲ. ಸಂಸದ ಶ್ರೀ ರಾಮುಲು ಅವರು ನನಗೆ ಆತ್ಮೀಯರು. ಸಿದ್ದರಾಮಯ್ಯ ನನಗೆ ಪರಿಚಿತರು, ಆದ್ದರಿಂದ ಪ್ರಚಾರ ಮಾಡಬೇಕೆಂದು ಸಿದ್ದರಾಮಯ್ಯ ಮನವಿ ಮಾಡಿದ್ದಕ್ಕೆ ಸಮ್ಮತಿ ಸೂಚಿಸಿದ್ದೇನೆ ಎಂದು ಸುವರ್ಣ ನ್ಯೂಸ್ ಗೆ ಸ್ಯಾಂಡಲ್ ವುಡ್ ಸ್ಟಾರ್ ಕಿಚ್ಚ ಸುದೀಪ್ ಹೇಳಿದ್ದಾರೆ.
ಇನ್ನು ಸಿದ್ದರಾಮಯ್ಯ ಪರ ಪ್ರಚಾರದ ನಿರ್ಧಾರದ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ. ಪ್ರಚಾರದ ವೇಳೆ ರಾಜಕೀಯ ಭಾಷಣ ಮಾಡಿ ಯಾರಿಗೂ ಮನ ನೋಯಿಸುವುದಿಲ್ಲ. ನಾನು ಯಾವುದೇ ರಾಜಕೀಯ ಪಕ್ಷದ ಪರವಾಗಿಯೂ ಕೂಡ ವಕಾಲತ್ತು ವಹಿಸುವ ಪ್ರಶ್ನೆಯೇ ಇಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ನನಗೆ ಆಪ್ತರಾದ್ದರಿಂದಲೇ ಪ್ರಚಾರಕ್ಕೆ ನಿರ್ಧಾರ ಮಾಡಿದ್ದು, ಆದರೆ ಇದು ಶ್ರೀ ರಾಮುಲು ವಿರುದ್ಧದ ಪ್ರಚಾರ ಎನ್ನುವುದು ತಪ್ಪು ಎಂದು ಸುದೀಪ್ ಸ್ಪಷ್ಟಪಡಿಸಿದ್ದಾರೆ.