ಶಿವಮೊಗ್ಗ ಜಿಲ್ಲೆಗಿಲ್ಲ ಪೂರ್ಣಾವಧಿ ಸಿಎಂ ಭಾಗ್ಯ
24 ನೇ ಮುಖ್ಯಮಂತ್ರಿ ಆಗಿ ಗುರುವಾರವಷ್ಟೇ ಅಧಿಕಾರ ಸ್ವೀಕರಿಸಿದ್ದ ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪ ಶನಿವಾರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವ ಮೂಲಕ ಶಿವಮೊಗ್ಗ ಜಿಲ್ಲೆಯ ಪಾಲಿಗೆ ಪೂರ್ಣಾವಧಿ ಮುಖ್ಯಮಂತ್ರಿ ಭಾಗ್ಯ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾದಂತಾಗಿದೆ.
ಬೆಂಗಳೂರು (ಮೇ 20) : 24 ನೇ ಮುಖ್ಯಮಂತ್ರಿ ಆಗಿ ಗುರುವಾರವಷ್ಟೇ ಅಧಿಕಾರ ಸ್ವೀಕರಿಸಿದ್ದ ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪ ಶನಿವಾರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವ ಮೂಲಕ ಶಿವಮೊಗ್ಗ ಜಿಲ್ಲೆಯ ಪಾಲಿಗೆ ಪೂರ್ಣಾವಧಿ ಮುಖ್ಯಮಂತ್ರಿ ಭಾಗ್ಯ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾದಂತಾಗಿದೆ.
ರಾಜ್ಯದ ರಾಜಕೀಯ ಇತಿಹಾಸದಲ್ಲಿ ಶಿವಮೊಗ್ಗ ಜಿಲ್ಲೆಯಿಂದ ಒಟ್ಟು ನಾಲ್ವರು ಸಿಎಂ ಆಗಿದ್ದಾರೆ. ಆದರೆ, ಯಾರೂ ಈವರೆಗೂ ಪೂರ್ಣಾವಧಿ ಅಧಿಕಾರ ಅನುಭವಿಸಿಲ್ಲ ಎಂಬುದು ಗಮನಾರ್ಹ. 1956 ರ ಆಗಸ್ಟ್ನಲ್ಲಿ ಜಿಲ್ಲೆಯ ಕಾಂಗ್ರೆಸ್ ಮುಖಂಡ ಕಡಿದಾಳ್ ಮಂಜಪ್ಪ ಅವರು ರಾಜ್ಯದ 3 ನೇ ಹಾಗೂ ಜಿಲ್ಲೆಯ ಪ್ರಥಮ ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಆದರೆ, ಕೇವಲ 75 ದಿನಗಳಿಗೆ ಅಕ್ಟೋಬರ್ನಲ್ಲಿ ಎಸ್ ನಿಜಲಿಂಗಪ್ಪ ಅವರಿಗೆ ಅಧಿಕಾರ ಬಿಟ್ಟುಕೊಡಬೇಕಾಯಿತು.
ಬಳಿಕ 1990 ರಲ್ಲಿ ರಾಜ್ಯಕ್ಕೆ ಪ್ರವಾಸ ಬಂದಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ವಾಪಸ್ ತೆರಳುವಾಗ ವಿಮಾನ ನಿಲ್ದಾಣದಲ್ಲೇ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರನ್ನು ಪದಚ್ಯುತಗೊಳಿಸಿ ಎಸ್. ಬಂಗಾರಪ್ಪರನ್ನು ಸಿಎಂ ಆಗಿ ಘೋಷಿಸಿದ್ದರು. ಬಂಗಾರಪ್ಪ 2 ವರ್ಷ ಅಧಿಕಾರವನ್ನೂ ನಡೆಸಿದರು.
ಆದರೆ, ರಾಜೀವ್ ಗಾಂಧಿ ನಿಧನದ ಬಳಿಕ ಎಐಸಿಸಿ ಅಧ್ಯಕ್ಷರಾಗಿದ್ದ ಸೀತಾರಾಮ್ ಕೇಸರಿ ಅವರೊಂದಿಗಿನ ಭಿನ್ನಾಭಿಪ್ರಾಯ ದಿಂದಾಗಿ ಬಂಗಾರಪ್ಪ ಅಧಿಕಾರ ಕಳೆದುಕೊಳ್ಳಬೇಕಾಯಿತು ಜೆ.ಎಚ್.ಪಟೇಲ್ ಜಿಲ್ಲೆಯ(ಅವಿಭಜಿತ ಶಿವಮೊಗ್ಗ-ದಾವಣಗೆರೆ ಜಿಲ್ಲೆ) 3ನೇ ಸಿಎಂ ಆಗಿ 3 ವರ್ಷ ಆಡಳಿತ ನಡೆಸಿದರು. ಬಳಿಕ ಯಡಿಯೂರಪ್ಪ ೩ ಬಾರಿ ಅವಧಿಗೆ ಮುನ್ನವೇ ಅಧಿಕಾರ ತ್ಯಾಗ ಮಾಡಿದ್ದಾರೆ.