ಶಾಮನೂರುಗೆ ಡಿಸಿಎಂ ಸ್ಥಾನ ನೀಡಿ: ರಂಭಾಪುರ ಶ್ರೀ ಒತ್ತಾಯ
ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಡಾ.ಶಾಮನೂರ ಶಿವಶಂಕರಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಬಾಳೆಹೊನ್ನೂರು ರಂಭಾಪುರಿಮಠದ ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಆಗ್ರಹಿಸಿದ್ದಾರೆ.
ಬೈಲಹೊಂಗಲ : ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಡಾ.ಶಾಮನೂರ ಶಿವಶಂಕರಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಬಾಳೆಹೊನ್ನೂರು ರಂಭಾಪುರಿಮಠದ ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಆಗ್ರಹಿಸಿದ್ದಾರೆ.
ಬುಧವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಶಿವಶಂಕರಪ್ಪ ಅವರ ಅನುಭವ, ಸಮಾಜಕ್ಕೆ ನೀಡಿದ ಸೇವೆ ಅನುಸರಿಸಿ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿದರೆ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಕಾಂಗ್ರೆಸ್ಗಂಟಿದ ಕೆಟ್ಟಹೆಸರು ಸರಿಯಾಗಲು ಸಾಧ್ಯವಾದೀತು ಎಂದು ಅಭಿಪ್ರಾಯಪಟ್ಟರು.
ವೀರಶೈವ ಲಿಂಗಾಯತ ಧರ್ಮ ವಿಭಜನೆಯ ವಿಚಾರದಿಂದಾಗಿಯೇ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಸರ್ಕಾರ ಮತದಾರರಿಂದ ತಿರಸ್ಕರಿಸಲ್ಪಟ್ಟಿದೆ. ಈಗಿನ ರಚನೆಯಾಗಿರುವ ಹೊಸ ಸಮ್ಮಿಶ್ರ ಸರ್ಕಾರದಲ್ಲಿ ಬಹು ಸಂಖ್ಯಾತ ವೀರಶೈವ ಲಿಂಗಾಯತ ಸಮುದಾಯವನ್ನು ದೂರವಿಟ್ಟಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಹದಿನಾರು ವೀರಶೈವ ಶಾಸಕರಲ್ಲಿ ಕನಿಷ್ಠ ಪಕ್ಷ 6 ಶಾಸಕರಿಗೆ ಸಚಿವ ಸ್ಥಾನ ನೀಡಬೇಕೆಂದು ವೀರಶೈವ ಸಮುದಾಯದವರು ಚರ್ಚಿಸುತ್ತಿದ್ದಾರೆ. ಸಮಾಜದ ಮುಖಂಡ ಎಸ್.ಎಸ್ ಮಲ್ಲಿಕಾರ್ಜುನ ಅವರ ಮನೆಯಲ್ಲಿ ವೀರಶೈವ ಶಾಸಕರು ಸೇರಿ ಒಮ್ಮತದ ನಿರ್ಧಾರ ಕೈಗೊಂಡಿದ್ದಾರೆ. ಇದು ಸಮಾಜದ ಹಿತದೃಷ್ಟಿಯಿಂದ ಒಳ್ಳೆಯದು. ಅವರ ಭಾವನೆಗಳನ್ನು ಸಮ್ಮಿಶ್ರ ಸರ್ಕಾರ ಮಾನ್ಯ ಮಾಡದಿದ್ದರೆ ರಾಜಿನಾಮೆ ಕೊಡುವ ಗಟ್ಟಿಮಾತನ್ನು ಹೇಳಿರುವುದು ಸಮಾಜದ ಬಗ್ಗೆ ಅವರಿಗಿರುವ ಕಳಕಳಿ ತೋರಿಸುತ್ತದೆ ಎಂದರು.
ಆಡಿದ ಮಾತಿನಂತೆ ಎಲ್ಲರೂ ಒಂದಾಗಿ ರಾಜಕೀಯದಲ್ಲಿ ಧ್ವನಿ ಎತ್ತಿದ್ದರಿಂದ ಈ ಸಮಾಜವನ್ನು ಕಡೆಗಣಿಸುವ ನಾಯಕರು ಎಚ್ಚೆತ್ತುಕೊಳ್ಳಲಿದ್ದಾರೆ. ಈ ಹಿಂದೆ ಯಾವುದೇ ಸರ್ಕಾರ ಇದ್ದರೂ ವೀರಶೈವ ಲಿಂಗಾಯತರಿಗೆ ಪ್ರಮುಖ ಖಾತೆ ಕೊಟ್ಟಿಲ್ಲ. ಸುಮ್ಮನೆ ನೆಪಕ್ಕೆ ಮಾತ್ರ ಸಚಿವ ಪದವಿ ಕೊಟ್ಟು ಸಮಾಧಾನ ಮಾಡಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಾದರೂ ಲಿಂಗಾಯತ ಸಮುದಾಯಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ತಮ್ಮ ಆಗ್ರಹ ಎಂದರು.