ವೋಟರ್ ಸ್ಲಿಪ್ ತೋರಿಸಿ ನಕಲಿ ಮತದಾನ : ಯುಟಿ ಖಾದರ್
ಈ ಬಾರಿ ಕೇವಲ ವೋಟರ್ ಸ್ಲಿಪ್ ತೋರಿಸಿದರೆ ಮತದಾನಕ್ಕೆ ಅವಕಾಶವಿದ್ದುದರಿಂದ ಬಹಳಷ್ಟು ನಕಲಿ ಮತದಾನ ನಡೆದಿರುವ ಸಾಧ್ಯತೆಗಳಿವೆ. ಹೀಗಾಗಿ ಈ ಕುರಿತು ಚುನಾವಣಾ ಆಯೋಗಕ್ಕೆ ಪತ್ರ ಬರೆಯುವುದಾಗಿ ಆಹಾರ ಸಚಿವ, ಮಂಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯು.ಟಿ. ಖಾದರ್ ತಿಳಿಸಿದ್ದಾರೆ.
ಮಂಗಳೂರು (ಮೇ 15): ಈ ಬಾರಿ ಕೇವಲ ವೋಟರ್ ಸ್ಲಿಪ್ ತೋರಿಸಿದರೆ ಮತದಾನಕ್ಕೆ ಅವಕಾಶವಿದ್ದುದರಿಂದ ಬಹಳಷ್ಟು ನಕಲಿ ಮತದಾನ ನಡೆದಿರುವ ಸಾಧ್ಯತೆಗಳಿವೆ. ಹೀಗಾಗಿ ಈ ಕುರಿತು ಚುನಾವಣಾ ಆಯೋಗಕ್ಕೆ ಪತ್ರ ಬರೆಯುವುದಾಗಿ ಆಹಾರ ಸಚಿವ, ಮಂಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯು.ಟಿ. ಖಾದರ್ ತಿಳಿಸಿದ್ದಾರೆ. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಮತದಾನ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕ ವಾಗಿ ನಡೆದಿಲ್ಲ ಎಂದು ಆರೋಪಿಸಿದರು.
ಮತದಾರರು ತಮ್ಮ ಗುರುತಿನ ಚೀಟಿ ತೋರಿಸದೆ ಕೇವಲ ವೋಟರ್ ಸ್ಲಿಪ್ ತೋರಿಸಿ ಮತದಾನ ಮಾಡಬಹುದಾಗಿತ್ತು. ವೋಟರ್ ಸ್ಲಿಪ್ನಲ್ಲಿ ಮನೆ ನಂಬರ್ ನಮೂದಿಸಿಲ್ಲ. ಮತದಾರರ ಭಾವಚಿತ್ರ ಅಚ್ಚಾಗಿದ್ದರೂ ಪ್ರಿಂಟ್ ದೋಷದಿಂದ ಬಹುತೇಕ ಭಾವಚಿತ್ರಗಳು ಸರಿಯಾಗಿ ಕಾಣುತ್ತಿರಲಿಲ್ಲ.
ಇದರ ದುರುಪಯೋಗ ಪಡೆದು ಯಾರದೋ ಹೆಸರಿನಲ್ಲಿ ಬೇರೆ ಯಾರೋ ಮತದಾನ ನಡೆಸಿರುವ ಸಾಧ್ಯತೆ ಬಹಳಷ್ಟು ಹೆಚ್ಚಿದೆ ಎಂದು ದೂರಿದರು. ಈ ತಪ್ಪನ್ನು ಚುನಾವಣಾ ಆಯೋಗ ಮುಂದಿನ ಲೋಕಸಭೆ ಚುನಾವಣೆ ಸಂದರ್ಭದಲ್ಲಾದರೂ ಸರಿಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.