ಸಿದ್ದು ತ್ರಿವಳಿ ಬಂಟರಿಂದ ಬೆಂಗಳೂರು ನಗರ ಹಾಳು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆಂಗಳೂರಿನ ಬಗ್ಗೆ ಯಾಕಿಷ್ಟು ಕೋಪವೋ ಗೊತ್ತಿಲ್ಲ. ಬೆಂಗಳೂರಿನ ಚಿತ್ರಣವನ್ನು ಬದಲಿಸಿದ ತ್ರಿವಳಿಗಳಿಗೆ ಜವಾಬ್ದಾರಿ ನೀಡಿ ನಗರದ ಭವಿಷ್ಯವನ್ನು ಹಾಳು ಮಾಡಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಪರೋಕ್ಷವಾಗಿ ಸಚಿವರಾದ ಕೆ.ಜೆ.ಜಾರ್ಜ್, ರೋಷನ್ ಬೇಗ್ ಹಾಗೂ ಶಾಸಕ ಹ್ಯಾರಿಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು (ಮೇ.09): ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆಂಗಳೂರಿನ ಬಗ್ಗೆ ಯಾಕಿಷ್ಟು ಕೋಪವೋ ಗೊತ್ತಿಲ್ಲ. ಬೆಂಗಳೂರಿನ ಚಿತ್ರಣವನ್ನು ಬದಲಿಸಿದ ತ್ರಿವಳಿಗಳಿಗೆ ಜವಾಬ್ದಾರಿ ನೀಡಿ ನಗರದ ಭವಿಷ್ಯವನ್ನು ಹಾಳು ಮಾಡಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಪರೋಕ್ಷವಾಗಿ ಸಚಿವರಾದ ಕೆ.ಜೆ.ಜಾರ್ಜ್, ರೋಷನ್ ಬೇಗ್ ಹಾಗೂ ಶಾಸಕ ಹ್ಯಾರಿಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಬೆಂಗಳೂರಿನಲ್ಲಿ ಮಾತ್ರ ತ್ರಿವಳಿಗಳಿಲ್ಲ. ರಾಜ್ಯ ಮಟ್ಟದಲ್ಲಿಯೂ ಇದ್ದಾರೆ. ‘ಬಿ.ಎಸ್.ಎಂ.’ ನಾಯಕರು ಕಾಂಗ್ರೆಸ್ಗೆ ಎಟಿಎಂನಂತೆ ಕೆಲಸ ಮಾಡುತ್ತಿದ್ದಾರೆ ಎಂದು ಹೆಸರನ್ನು ಪ್ರಸ್ತಾಪಿಸದೆ ಟೀಕಿಸಿದ್ದಾರೆ. ಅವರು ಕೂಡ ಮೂವರು ಪ್ರಭಾವಿ ಸಚಿವರು ಆಗಿರಬಹುದು ಎನ್ನಲಾಗಿದೆ.
ವಿಶ್ವದ ಗಮನ ಸೆಳೆದಿರುವ ಬೆಂಗಳೂರು ಕುಖ್ಯಾತಿಗೆ ಬರುವಂತೆ ಮಾಡಲು ತ್ರಿವಳಿಗಳು ಕಾರಣ. ಜಗತ್ತು ಗೌರವಿಸುವ ಈ ನಗರಕ್ಕೆ ತ್ರಿವಳಿಗಳಿಂದ ಅವಮಾನ ಆಗಿದೆ. ಇವರ ಕರಾಮತ್ತಿನಿಂದ ಕಳೆದ 5 ವರ್ಷಗಳಲ್ಲಿ ಬೆಂಗಳೂರು ಸಂಪೂರ್ಣ ಹಾಳಾಗಿದೆ. ಅವರು ಒಬ್ಬರಿಗೊಬ್ಬರು ಸಹಕಾರ ಕೊಡುತ್ತಾ ಬೆಂಗಳೂರನ್ನು ಹಾಳು ಮಾಡಿದ್ದಾರೆ ಎಂದು ಕಿಡಿಕಾರಿದರು. ಶಾಂತಿಪ್ರಿಯ ನಗರವಾಗಿದ್ದ, ಉದ್ಯಮದಲ್ಲಿ ವಿಶ್ವದಲ್ಲಿಯೇ ಖ್ಯಾತಿ ಪಡೆದಿದ್ದ ಬೆಂಗಳೂರಿಗೆ ಕಾಂಗ್ರೆಸ್ಸಿನ ತ್ರಿವಳಿಗಳು ಕಪ್ಪುಚುಕ್ಕೆಯಾಗಿದ್ದಾರೆ. ಗೃಹ ಸಚಿವರಾಗಿದ್ದವರೊಬ್ಬರು ಪ್ರಾಮಾಣಿಕ ಪೊಲೀಸ್ ಅಧಿಕಾರಿಯೊಬ್ಬರ ನಿಗೂಢ ಸಾವಿನಲ್ಲಿ ಮೊದಲ ಆರೋಪಿಯಾಗಿದ್ದಾರೆ. ಜೈಲಿನಲ್ಲಿರಬೇಕಾದ ಈ ವ್ಯಕ್ತಿ ಸರ್ಕಾರದಲ್ಲಿದ್ದಾರೆ. ಮತ್ತೊಬ್ಬರು ಭೂಕಬಳಿಕೆಯಲ್ಲಿ ಮುಳುಗಿದ್ದು, ಬೆಂಗಳೂರು ಅಭಿವೃದ್ಧಿಯಾಗದಂತೆ ‘ರೋಷನ್’ ಮೂಡಿಸಿದ್ದಾರೆ. ಕೊಲ್ಲಿ ದೇಶಗಳಿಂದ ಹಣ ತಂದು ನಗರದಲ್ಲಿ ಬಂಡವಾಳ ಹೂಡಿದ್ದಾರೆ. ಇನ್ನೋರ್ವ ಶಾಸಕರ ಕ್ಷೇತ್ರದಲ್ಲಿ
‘ಶಾಂತಿ’ಯೊಂದನ್ನು ಬಿಟ್ಟು ಎಲ್ಲವೂ ಇದೆ. ಅವರ ಪುತ್ರ ಯುವರಾಜ ಗೂಂಡಾಗಿರಿ ಸಂಸ್ಕೃತಿ ಮೆರೆಯುತ್ತಿದ್ದಾರೆ. ಇಂತಹ ವ್ಯಕ್ತಿಗಳ ಮೂಲಕ ಬೆಂಗಳೂರು ಖ್ಯಾತಿಯನ್ನು ಮಣ್ಣುಪಾಲು ಮಾಡಿದೆ ಎಂದು ಗುಡುಗಿದರು. ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಆರಂಭಿಸಿರುವ ಮುಖ್ಯಮಂತ್ರಿಗಳು ಅರ್ಜಿಗಳಿರುವ ಸೂಟ್ಕೇಸನ್ನು ಯಾವಾಗಲೂ ತಮ್ಮ ಬಳಿ ಇಟ್ಟುಕೊಂಡಿರುತ್ತಾರೆ. ತಮ್ಮ ಸಚಿವರ ವಿರುದ್ಧ ಪ್ರಕರಣಗಳು ದಾಖಲಾದರೆ
ಅವರಿಗೆ ಕ್ಲೀನ್ ಚಿಟ್ ನೀಡುತ್ತಾರೆ ಎಂದು ವ್ಯಂಗ್ಯವಾಡಿದರು.