ಮೋದಿಯಿಂದ ಬ್ಲ್ಯಾಕ್ ಮೇಲ್ ತಂತ್ರ : ಸಿಎಂ
ಮಹದಾಯಿ ಸಮಸ್ಯೆ ಬಗೆಹರಿಸುವಂತೆ ಸರ್ವಪಕ್ಷ ನಿಯೋಗ ಒಯ್ದು ಮನವಿ ಮಾಡಿಕೊಂಡರೂ ಪ್ರಧಾನಿ ಮೋದಿ ಕಿಂಚಿತ್ತೂ ಸ್ಪಂದಿಸಲಿಲ್ಲ. ಆದರೆ, ಇಂದು ಕರ್ನಾಟಕಕ್ಕೆ ಬಂದು ಬಿಜೆಪಿಗೆ ಮತ ನೀಡಿದರೆ ಮಹದಾಯಿ ಸಮಸ್ಯೆ
ಬಗೆಹರಿಸುತ್ತೇವೆ ಎನ್ನುತ್ತಿದ್ದಾರೆ. ಇದು ಬ್ಲ್ಯಾಕ್ಮೇಲ್ ತಂತ್ರ ಅಲ್ಲವೇ ಎಂದು ಸಿಎಂ ವಾಗ್ದಾಳಿ ನಡೆಸಿದ್ದಾರೆ.
ಗುಳೇದಗುಡ್ಡ ( ಬಾಗಲಕೋಟೆ): ಮಹದಾಯಿ ಸಮಸ್ಯೆ ಬಗೆಹರಿಸುವಂತೆ ಸರ್ವಪಕ್ಷ ನಿಯೋಗ ಒಯ್ದು ಮನವಿ ಮಾಡಿಕೊಂಡರೂ ಪ್ರಧಾನಿ ಮೋದಿ ಕಿಂಚಿತ್ತೂ ಸ್ಪಂದಿಸಲಿಲ್ಲ. ಆದರೆ, ಇಂದು ಕರ್ನಾಟಕಕ್ಕೆ ಬಂದು ಬಿಜೆಪಿಗೆ ಮತ ನೀಡಿದರೆ ಮಹದಾಯಿ ಸಮಸ್ಯೆ ಬಗೆಹರಿಸುತ್ತೇವೆ ಎನ್ನುತ್ತಿದ್ದಾರೆ. ಇದು ಬ್ಲ್ಯಾಕ್ಮೇಲ್ ತಂತ್ರ ಅಲ್ಲವೇ? ಮೋದಿ ಅವರಿಗೆ ಮತ ಕೇಳಲು ಯಾವ ನೈತಿಕತೆ ಇಲ್ಲ.
ದೇಶ ಕಂಡ ಅತ್ಯಂತ ಸುಳ್ಳು ಪ್ರಧಾನಿ ಅಂದರೆ ಅದು ಮೋದಿ ಎಂದು ಸಿಎಂ ಸಿದ್ದರಾಮಯ್ಯ ಅವರು ತೀವ್ರ ವಾಗ್ದಾಳಿ ನಡೆಸಿದರು. ಬಾದಾಮಿಯಲ್ಲಿ ಪ್ರಚಾರದ ಬಳಿಕ ಪಟ್ಟಣದ ಭಂಡಾರಿ ಕಾಲೇಜು ಮೈದಾನದಲ್ಲಿ ಶನಿವಾರ ಹಮ್ಮಿಕೊಂಡ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ‘ಚಾಮುಂಡೇಶ್ವರಿಯಲ್ಲಿ ಗೆಲ್ಲೋದು ನಾನೇ. ಜಿಲ್ಲಾ ಜನರ ಒತ್ತಾಯಕ್ಕೆ ಮಣಿದು ಬಾದಾಮಿಯಲ್ಲಿ ಸ್ಪರ್ಧಿಸುತ್ತಿದ್ದೇನೆ. ಇಲ್ಲೂ ಗೆಲ್ಲೋದು ನಾನೇ. ಬಾದಾಮಿ ಜತೆ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಒತ್ತುಕೊಟ್ಟು ಪ್ರಾದೇಶಿಕ ಅಸಮಾನತೆ ಸರಿಪಡಿಸುತ್ತೇನೆ’ ಎಂದು ಭರವಸೆ ನೀಡಿದರು.
ಮುಂದಿನ ಸಿಎಂ ನಾನೇ: ‘ಕಳೆದ ೫ ವರ್ಷದಲ್ಲಿ ನನ್ನ ಮೇಲೆ ಒಂದು ಕಪ್ಪು ಚುಕ್ಕೆ ಇಲ್ಲ. ನಮ್ಮ ಸರ್ಕಾರದ ಮೇಲೆ ಒಂದೂ ಹಗರಣದ ಆರೋಪವೂ ಇಲ್ಲ. ಶ್ರೀರಾಮುಲು ಅವರನ್ನು ಸೋಲಿಸಿ ನನಗೆ ಆಶೀರ್ವದಿಸಿ. ನಾನೇ ಮುಂದಿನ ಸಿಎಂ ಆಗ್ತೇನೆ’ ಎಂದರು.