ಕಾಂಗ್ರೆಸ್ ನಲ್ಲಿದ್ದೇನೆ, ಕಾಂಗ್ರೆಸ್ ನಲ್ಲಿಯೇ ಇರುತ್ತೇನೆ : ರಾಜಶೇಖರ್ ಪಾಟೀಲ್
ಬಿಜೆಪಿಯ ಯಾವುದೇ ನಾಯಕರು ನನ್ನ ಸಂಪರ್ಕದಲ್ಲಿ ಇಲ್ಲ. ನನಗೆ ಯಾರೂ ಯಾವ ಪಕ್ಷಕ್ಕೆ ಸೇರಲೂ ಆಹ್ವಾನ ನೀಡಿಲ್ಲ. ನಾನು ಕಾಂಗ್ರೆಸ್ನಲ್ಲೇ ಇರುತ್ತೇನೆ ಎಂದು ಹುಮ್ನಾಬಾದ್ ಕಾಂಗ್ರೆಸ್ ಶಾಸಕ ರಾಜಶೇಖರ್ ಪಾಟೀಲ್ ಹುಮ್ನಾಬಾದ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು : ಬಿಜೆಪಿಯ ಯಾವುದೇ ನಾಯಕರು ನನ್ನ ಸಂಪರ್ಕದಲ್ಲಿ ಇಲ್ಲ. ನನಗೆ ಯಾರೂ ಯಾವ ಪಕ್ಷಕ್ಕೆ ಸೇರಲೂ ಆಹ್ವಾನ ನೀಡಿಲ್ಲ. ನಾನು ಕಾಂಗ್ರೆಸ್ನಲ್ಲೇ ಇರುತ್ತೇನೆ ಎಂದು ಹುಮ್ನಾಬಾದ್ ಕಾಂಗ್ರೆಸ್ ಶಾಸಕ ರಾಜಶೇಖರ್ ಪಾಟೀಲ್ ಹುಮ್ನಾಬಾದ್ ಸ್ಪಷ್ಟಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ನನ್ನನ್ನು ಯಾರೂ ಬಿಜೆಪಿಗೆ ಕರೆದಿಲ್ಲ. ಆ ಪಕ್ಷದ ಯಾವ ನಾಯಕರೂ ಸಂಪರ್ಕಿಸಿಲ್ಲ. ಯಾರೂ ಯಾವ ಆಮಿಷವನ್ನೂ ನೀಡಿಲ್ಲ. ನಾನು ಕಾಂಗ್ರೆಸ್ನ ಶಿಸ್ತಿನ ಸಿಪಾಯಿ. ನಾಲ್ಕು ಬಾರಿ ಕಾಂಗ್ರೆಸ್ ನಿಂದ ಶಾಸಕನಾಗಿ ಆಯ್ಕೆಯಾಗಿದ್ದೇನೆ.
ಕಾಂಗ್ರೆಸ್ನಲ್ಲೇ ಇದ್ದೇನೆ, ಮುಂದೆಯೂ ಕಾಂಗ್ರೆಸ್ನಲ್ಲೇ ಇರುತ್ತೇನೆ ಎಂದರು. ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರಿಗೆ ನನ್ನ ಮೇಲೆ ಪ್ರೀತಿ ಜಾಸ್ತಿ ಇರಬಹುದು. ಅದಕ್ಕೆ ನನ್ನೊಂದಿಗೆ ಸಂಪರ್ಕದಲ್ಲಿರುವುದಾಗಿ ಸುದ್ದಿ ಹಬ್ಬಿಸಿರಬಹುದು. ಆದರೆ ನನಗೆ ಅವರ ಮೇಲೆ ಪ್ರೀತಿ ಇರಬೇಕಲ್ಲ.
ಚುನಾವಣೆಗೆ ಮೊದಲು ಕೂಡ ಇದೇ ರೀತಿ ಸುಳ್ಳು ಸುದ್ದಿ ಹಬ್ಬಿಸಿದ್ದರು. ರಾಜಶೇಖರ್ ಪಾಟೀಲ್ ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸುತ್ತಾರೆ, ಅವರಿಗೆ ಬಿಜೆಪಿ ಈಗಾಗಲೇ ಬಿ- ಫಾರಂ ನೀಡಿಬಿಟ್ಟಿದೆ ಎಂದು ಮಾಧ್ಯಮಗಳು ಪ್ರಸಾರ ಮಾಡಿದ್ದವು. ಅಂತಿಮವಾಗಿ ನಾನು ಕಾಂಗ್ರೆಸ್ ನಿಂದ ಸ್ಪರ್ಧಿಸಿ ಗೆದ್ದಿದ್ದೇನೆ. ಕಾಂಗ್ರೆಸ್ನಲ್ಲೇ ಇರುತ್ತೇನೆ ಎಂದರು.