ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥನ ಮೇಲೆ ಜನರಿಗೆ ಅಪಾರ ನಂಬಿಕೆ ಇದ್ದು, ಕರ್ನಾಟಕ ಚುನಾವಣೆ ವೇಳೆ ಈ ದೇವರ ಮೇಲೆ ಪ್ರಮಾಣ ಮಾಡಿಸುತ್ತಾರೆ. ಇದಕ್ಕೆ ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ.ವೀರೇಂದ್ರ ಹೆಗ್ಗಡೆಯವರು ಜನರಲ್ಲಿ ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದ್ದು, ಭ್ರಷ್ಟ ಹಣಕ್ಕೆ ಮಾಡುವ ಆಣೆ ಪ್ರಮಾಣಕ್ಕೆ ಕಪ್ಪ ಕಟ್ಟುವ ಅಗತ್ಯವಿಲ್ಲವೆಂದು ಹೇಳಿದ್ದಾರೆ. 

ಬೆಂಗಳೂರು: ದಿನ ಬೆಳಗಾದರೆ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿದೆ. ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಹಣ ಹಾಗೂ ಇತರೆ ಉಡುಗೊರೆಗಳನ್ನು ನೀಡಿ, ತಮಗೇ ಮತ ಹಾಕುವಂತೆ ಆಣೆ ಪ್ರಮಾಣ ಮಾಡಿಸಿಕೊಳ್ಳುವುದು ಸಹಜ. 

Add Asianetnews Kannada as a Preferred SourcegooglePreferred

ಅದರಲ್ಲಿಯೂ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥನ ಮೇಲೆ ಜನರಿಗೆ ಅಪಾರ ನಂಬಿಕೆ ಇದ್ದು, ಈ ದೇವರ ಮೇಲೆ ಪ್ರಮಾಣ ಮಾಡಿಸುತ್ತಾರೆ. ಇದಕ್ಕೆ ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ.ವೀರೇಂದ್ರ ಹೆಗ್ಗಡೆಯವರು ಜನರಲ್ಲಿ ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದ್ದು, ಭ್ರಷ್ಟ ಹಣಕ್ಕೆ ಮಾಡುವ ಆಣೆ ಪ್ರಮಾಣಕ್ಕೆ ಕಪ್ಪ ಕಟ್ಟುವ ಅಗತ್ಯವಿಲ್ಲವೆಂದು ಹೇಳಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸುವ ಕರಪತ್ರಗಳನ್ನು ಹಂಚುತ್ತಿದ್ದು, ಮಾನ್ಯ ಮತದಾರ ಪ್ರಭುಗಳು ಈ ಬಗ್ಗೆ ಜಾಗೃತರಾಗುವುದು ಅಗತ್ಯ.

ಶ್ರೀ ಹೆಗ್ಗಡೆಯವರು ಹಂಚಿದ ಕರಪತ್ರದ ಒಕ್ಕಣಿಕೆ ಹೀಗಿದೆ...

'ನಮ್ಮ ಭಾರತವು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಈ ಜಾತ್ಯಾತೀತ ರಾಷ್ಟ್ರದಲ್ಲಿ ಜನಿಸಿರುವುದು ನಮ್ಮ ಪೂರ್ವಜನ್ಮದ ಸುಕೃತ. ಈ ಮಾದರಿ ಪ್ರಜಾಪ್ರಭುತ್ವವನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಈಗ ಚುನಾವಣೆ ಸಮಯವಾಗಿರುವುದರಿಂದ ಕೆಲವು ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಣ, ಒಡವೆ, ಸೀರೆ ಇತ್ಯಾದಿ ವಸ್ತುಗಳ ಆಮಿಷಗಳನ್ನು ಒಡ್ಡುತ್ತಾರೆ. ಅದಕ್ಕಾಗಿ ಶ್ರೀ ಕ್ಷೇತ್ರದ ಹಾಗೂ ಇನ್ನಿತರ ಧಾರ್ಮಿಕ ದೇವರುಗಳ ಫೋಟೋಗಳನ್ನು ಇಟ್ಟು ಪ್ರಮಾಣ ಮಾಡಿಸುತ್ತಾರೆ. ಇದು ಅಕ್ಷಮ್ಯ ಅಪರಾಧ. ಇದಕ್ಕೆ ಬಲಿಯಾಗಬೇಡಿ. ಪರಿಸ್ಥಿತಿಯ ಒತ್ತಡದಿಂದ ಒಂದು ವೇಳೆ ನೀವು ಆಮಿಷಗಳಿಗೆ ಬಲಿಯಾಗಿ ಪ್ರಮಾಣ ಮಾಡಿದರೂ ಚಿಂತಿಸಬೇಕಾಗಿಲ್ಲ. ಏಕೆಂದರೆ ಅದು ಅವರು ಕಷ್ಟಪಟ್ಟು ದುಡಿದು, ಗಳಿಸಿದ ನ್ಯಾಯವಾದ ಹಣವಾಗಿರುವುದಿಲ್ಲ. ಹೀಗಾಗಿ ಶ್ರೀ ಕ್ಷೇತ್ರಕ್ಕೆ ಯಾವುದೇ ರೀತಿಯ ತಪ್ಪು ಕಾಣಿಕೆ ಕಟ್ಟುವ ಅವಶ್ಯಕತೆಯೂ ಇಲ್ಲ. ಈ ಚುನಾವಣೆಯಲ್ಲಿ ನಾವೆಲ್ಲರೂ ನಮ್ಮ ಆತ್ಮ ಸಾಕ್ಷಿಯಂತೆ ಮತದಾನ ಮಾಡಿ, ಯೋಗ್ಯರನ್ನು ಚುನಾಯಿಸೋಣ. ಮತದಾನ ನಮ್ಮೆಲ್ಲರ ಕರ್ತವ್ಯ.'