ಸಿದ್ದರಾಮಯ್ಯ ಕಾಲೆಳೆಯಲು ಹೋಗಿ ಮತ್ತೊಂದು ಎಡವಟ್ಟು ಮಾಡಿಕೊಂಡ ಮೋದಿ
ಚುನಾವಣಾ ಸಂದರ್ಭದಲ್ಲಿ ಮಹದಾಯಿ ವಿಚಾರವನ್ನು ಕೆದಕಲು ಹೋದ ಪ್ರಧಾನಿ ಮೋದಿ ಸಿದ್ದರಾಮಯ್ಯ ಕಾಲೆಳೆಯಲು ಹೋಗಿ ಮತ್ತೊಮ್ಮೆ ಎಡವಟ್ಟು ಮಾಡಿಕೊಂಡಿದ್ದಾರೆ.
ಗದಗ (ಮೇ.05) : ಮಹದಾಯಿ ಬಗ್ಗೆ ಕೊನೆಗೂ ಮೌನ ಮುರಿದ ಪ್ರಧಾನಿ ಮೋದಿ, ವಿಚಾರ ಪ್ರಸ್ತಾಪಿಸುವ ಜೊತೆಗೆ ಸಿದ್ದರಾಮಯ್ಯ ಕಾಲೆಳೆಯಲು ಹೋಗಿ ಇನ್ನೊಂದು ಎಡವಟ್ಟು ಮಾಡಿಕೊಂಡಿದ್ದಾರೆ.
ಶನಿವಾರ ಗದಗದಲ್ಲಿ ಚುನಾವಣಾ ಭಾಷಣವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಸಿದ್ದರಾಮಯ್ಯನವರೇ ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್ ರಾಜಕಾರಣದ ಬಗ್ಗೆ ನಿಮಗೆ ಗೊತ್ತಿಲ್ಲ. ಏಕೆಂದರೆ 2007ರಲ್ಲಿ ನೀವು ಕಾಂಗ್ರೆಸ್ ಪಕ್ಷದಲ್ಲಿರಲಿಲ್ಲ. ನಿಮಗೆ ಪಕ್ಷ ಬದಲಿಸುವುದು ಹೊಸ ವಿಷಯವೇನಲ್ಲ, ಅದುದರಿಂದ ನೀವು ಯಾವ ಪಕ್ಷದಲ್ಲಿದ್ದಿರಿ ಎಂದು ಕೂಡಾ ನಿಮಗೆ ಗೊತ್ತಿರಲಿಕ್ಕಿಲ್ಲ, ಎಂದು ವ್ಯಂಗ್ಯವಾಡಿದ್ದಾರೆ.
ಆದರೆ ಸಿದ್ದರಾಮಯ್ಯ ಜನತಾ ಪರಿವಾರವನ್ನು ಬಿಟ್ಟು 2006ರಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.
ಕಳೆದ ಮೇ.03ರಂದು ಕಲಬುರಗಿಯಲ್ಲಿ ಕಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡುವ ವೇಳೆ, 1948ರಲ್ಲಿ ಭಾರತ-ಪಾಕಿಸ್ತಾನ ಯುದ್ಧದ ಬಳಿಕ, ಆಗಿನ ಪ್ರಧಾನಿ ನೆಹರೂ ಹಾಗೂ ರಕ್ಷಣಾ ಸಚಿವ ಕೃಷ್ಣ ಮೆನನ್, ಜನರಲ್ ತಿಮ್ಮಯ್ಯರನ್ನು ಅವಮಾನಿಸಿದ್ದರು ಎಂದು ಹೇಳಿದ್ದರು. ವಾಸ್ತವದಲ್ಲಿ 1948ರಲ್ಲಿ ಕೃಷ್ಣ ಮೆನನ್ ರಕ್ಷಣಾ ಸಚಿವರೂ ಆಗಿರಲಿಲ್ಲ, ಜನರಲ್ ತಿಮ್ಮಯ್ಯ ಸೇನೆಯ ಕಮಾಂಡರ್-ಇನ್-ಚೀಫ್ ಕೂಡಾ ಆಗಿರಲಿಲ್ಲ.