Asianet Suvarna News Asianet Suvarna News

ಚುನಾವಣೆಯಲ್ಲಿ ಸ್ಪರ್ಧಿಸಿದ ಮೇಯರ್ ಸಂಪತ್ ರಾಜ್ : ಮಾನದಂಡಗಳೇನು..?

ಸಿ.ವಿ.ರಾಮನ್ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಬೆಂಗಳೂರು ಪ್ರಥಮ ಪ್ರಜೆ ಆರ್.ಸಂಪತ್‌ರಾಜ್ ಟಿಕೆಟ್ ಗಿಟ್ಟಿಸಿದ್ದಾರೆ. ಮೇಯರ್ ಅವಧಿ ಇನ್ನೂ ಆರು ತಿಂಗಳು ಬಾಕಿ ಇರುವಂತೆಯೇ ಅವರು ಶಾಸಕ ಖುರ್ಚಿ ಅಲಂಕರಿಸಲು ಸ್ಪರ್ಧೆಗಿಳಿದಿದ್ದಾರೆ.

Mayor Sampath Raj Contest Election

ಲಿಂಗರಾಜು ಕೋರಾ 

ಬೆಂಗಳೂರು :  ಸಿ.ವಿ.ರಾಮನ್ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಬೆಂಗಳೂರು ಪ್ರಥಮ ಪ್ರಜೆ ಆರ್.ಸಂಪತ್‌ರಾಜ್ ಟಿಕೆಟ್ ಗಿಟ್ಟಿಸಿದ್ದಾರೆ. ಮೇಯರ್ ಅವಧಿ ಇನ್ನೂ ಆರು ತಿಂಗಳು ಬಾಕಿ ಇರುವಂತೆಯೇ ಅವರು ಶಾಸಕ ಖುರ್ಚಿ ಅಲಂಕರಿಸಲು ಸ್ಪರ್ಧೆಗಿಳಿದಿದ್ದಾರೆ.
ಎನ್‌ಎಸ್‌ಯುಐ, ಯುವ ಕಾಂಗ್ರೆಸ್ ಮೂಲಕ ಪುಲಕೇಶಿ ನಗರದಲ್ಲಿ ಸಕ್ರಿಯರಾಗಿದ್ದ ಸಂಪತ್‌ರಾಜ್ ಅವರಿಗೆ ಅಚ್ಚರಿ ಬೆಳವಣಿಗೆ ಗಳಲ್ಲಿ ಸಿ.ವಿ.ರಾಮನ್‌ನಗರ ಕ್ಷೇತ್ರದ ಟಿಕೆಟ್ ದಕ್ಕಿದೆ. ಮೇಯರ್ ಹುದ್ದೆಯಲ್ಲಿದ್ದುಕೊಂಡೇ ಶಾಸಕ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಮೊದಲಿಗರು ಎಂಬ ಹೆಗ್ಗಳಿಕೆಯನ್ನೂ ಗಿಟ್ಟಿಸಿಕೊಂಡಿದ್ದಾರೆ. ಸಚಿವ ಎಚ್.ಸಿ.ಮಹದೇವಪ್ಪ, ಪಿ.ರಮೇಶ್ ಸೇರಿದಂತೆ ಪ್ರಮುಖರನ್ನು ಹಿಂದಿಕ್ಕಿರುವ ಅವರು ಕ್ಷೇತ್ರದಲ್ಲಿನ ಹಣಾಹಣಿ, ಬಂಡಾಯ, ನಾಗರಿಕರ ಸ್ಪಂದನೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ್ದಾರೆ.

ಕ್ಷೇತ್ರದಲ್ಲಿ ಪ್ರಚಾರ ಅರಂಭಿಸಿದ್ದೀರಿ, ಜನರ ಸ್ಪಂಧನೆ ಹೇಗಿದೆ?

ಈಗಾಗಲೇ ಕ್ಷೇತ್ರದಾದ್ಯಂತ ಒಂದು ಸುತ್ತು ಸಂಚರಿಸಿ ಪ್ರಚಾರ ನಡೆಸಿದ್ದೇನೆ. ಈಗ ಮನೆ ಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದೇನೆ. ಎಲ್ಲೆಡೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಮೇಯರ್ ಆಗಿರುವುದರಿಂದ ನಾನು ಕ್ಷೇತ್ರದ ಜನರಿಗೆ ಹೊಸ ಪರಿಚಯವೇನಲ್ಲ. ಸಣ್ಣ ಮಕ್ಕಳಿಂದ ವೃದ್ಧರವರೆಗೂ ಎಲ್ಲರೂ ನನ್ನನ್ನು ಗುರುತಿಸಿ ಗೌರವಿಸುತ್ತಿದ್ದಾರೆ. ಕ್ಷೇತ್ರದ ಜನ ನನ್ನನ್ನು ಮನೆ ಮಗನಂತೆ ಕಾಣುತ್ತಿದ್ದಾರೆ.

ಪುಲಿಕೇಶಿನಗರ ಕ್ಷೇತ್ರದ ಆಕಾಂಕ್ಷಿಯಾಗಿದ್ದ ನಿಮಗೆ ಪಕ್ಷ ಸಿ.ವಿ  ರಾಮನ್ ನಗರದ ಟಿಕೆಟ್ ನೀಡಿದೆ. ತಳ ಮಟ್ಟದ ಕಾರ್ಯಕರ್ತ ರೊಂದಿಗೆ ಹೊಂದಾಣಿಕೆಗೆ ಅಲ್ಲಿ ಸಮಯ ಬೇಕಾಗಲಿಲ್ಲವೇ?

ಹಾಗೇನೂ ಇಲ್ಲ, ನಾನು ಎನ್‌ಎಸ್‌ಯುಐ, ಯುವ ಕಾಂಗ್ರೆಸ್ ಮೂಲಕ ರಾಜಕೀಯವಾಗಿ ಬೆಳೆದಿದ್ದರಿಂದ ನಗರದ ಎಲ್ಲಾ ಭಾಗದ ಕಾಂಗ್ರೆಸ್ ಕಾರ್ಯಕರ್ತರ ಪರಿಚಯವಿದೆ. ಕಳೆದ ಆರು ತಿಂಗಳಿಂದ ಬೆಂಗಳೂರಿನ ಮೇಯರ್ ಆಗಿ ಬಿಬಿಎಂಪಿಯ  198 ವಾರ್ಡುಗಳಲ್ಲೂ ಕೆಲಸ ಮಾಡಿದ್ದೇನೆ. ಇದರಿಂದ ಎಲ್ಲ ಕ್ಷೇತ್ರಗಳ ಕಾರ್ಯಕರ್ತರ ಪರಿಚಯವೂ ಇತ್ತು. ಪಾಲಿಕೆ ಆಡಳಿತದಲ್ಲಿ ಈ
ವರೆಗೂ ಒಂದೂ ಕಪ್ಪುಚುಕ್ಕೆ ಇಲ್ಲದೆ, ನಗರದ ಯಾವುದೇ ಭಾಗದಲ್ಲಿ ಏನೇ ಸಮಸ್ಯೆಯಾದರೂ ತಕ್ಷಣ ಸ್ಥಳಕ್ಕೆ ತೆರಳಿ ಸ್ಪಂದಿಸಿದ್ದೇನೆ. ಹಾಗಾಗಿ ಜನರೂ ತಾವಾಗೇ ನನ್ನನ್ನು ಗುರುತಿಸುತ್ತಿದ್ದಾರೆ.

ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಪಿ.ರಮೇಶ್ ಕಾಂಗ್ರೆಸ್ ತೊರೆದು ಜೆಡಿಎಸ್‌ನಿಂದ ಸ್ಪರ್ಧಿಸುವುದರಿಂದ ಕಾಂಗ್ರೆಸ್ ಮತಗಳ ವಿಭಜನೆಯಾಗಬಹುದು?

ಪಿ.ರಮೇಶ್ ಕಾಂಗ್ರೆಸ್ ತೊರೆದಿದ್ದರಿಂದ ಪಕ್ಷದ ಮತ ವಿಭಜನೆ ಯಾಗುತ್ತವೆ ಎಂಬುದು ಸುಳ್ಳು. ಕಾಂಗ್ರೆಸ್‌ನಲ್ಲಿ ವ್ಯಕ್ತಿಯಿಂದ ಪಕ್ಷ ಅಲ್ಲ, ಪಕ್ಷದಿಂದ ವ್ಯಕ್ತಿ. ಕ್ಷೇತ್ರದಲ್ಲಿ ಜೆಡಿಎಸ್ ಪ್ರಾಭಲ್ಯವೂ ಇಲ್ಲ. ಹಾಗಾಗಿ ಮತ ವಿಭಜನೆಯಾಗುವ ಪ್ರಮೇಯವೇ ಇಲ್ಲ.

ನೀವು ಶಾಸಕ ಸ್ಥಾನಕ್ಕೆ ಸ್ಪರ್ಧಿಸುವ ನಿರ್ಧಾರಕ್ಕೆ ಬಂದಿದ್ದೇಕೆ? ಬೆಂಗಳೂರಿನ ಪ್ರಥಮ ಪ್ರಜೆ ಹುದ್ದೆಗಿಂತ ಶಾಸಕ ಸ್ಥಾನ ದೊಡ್ಡದಾ?

ಇದರಲ್ಲಿ ನನ್ನ ತೀರ್ಮಾನ ಏನೂ ಇಲ್ಲ. ನಾನು ಆಕಾಂಕ್ಷಿಯೂ ಆಗಿರಲಿಲ್ಲ, ಅರ್ಜಿಯನ್ನೂ ಹಾಕಿರಲಿಲ್ಲ. ಮೇಯರ್  ಹುದ್ದೆಯಲ್ಲಿರುವವರಿಗೆ ಟಿಕೆಟ್ ನೀಡಿದರೆ, ಕ್ಷೇತ್ರದ ಗೆಲುವು ಸುಲಭವಾ ಗುತ್ತದೆ. ಜತೆಗೆ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲು ಕೂಡ ಸಹಕಾರಿಯಾಗುತ್ತದೆ ಎಂಬುದನ್ನು ಮನಗಂಡು ಪಕ್ಷ ನನಗೆ ಟಿಕೆಟ್ ನೀಡಿತು. ಪಕ್ಷದ ನಿರ್ಧಾರದಂತೆ ಸ್ಪರ್ಧಿಸಿದ್ದೇನೆ.

ಯಾವ ವಿಷಯಗಳನ್ನು ಇಟ್ಟುಕೊಂಡು ಮತ ಕೇಳುತ್ತಿದ್ದೀರಿ?

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಳೆದ ಐದು ವರ್ಷಗಳಲ್ಲಿ ನೀಡಿರುವ ಜನಪರ ಯೋಜನೆಗಳು, ಮೇಯರ್ ಆಗಿ ಕಳೆದ ಆರು ತಿಂಗಳು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತ ಯಾಚಿಸುತ್ತೇನೆ. ಅಲ್ಲದೆ, ಕ್ಷೇತ್ರದಲ್ಲಿ ಪ್ರಮುಖವಾಗಿ ಎಲ್ಲೆಡೆ ನೀರಿನ ಸಮಸ್ಯೆ ಇದೆ. ಒಳಚರಂಡಿ ಸಮಸ್ಯೆ ಇದೆ. ಇದರ ಬಗ್ಗೆ ವಿಧಾನಸೌಧದಲ್ಲಿ ಧ್ವನಿ ಸಮಸ್ಯೆ ಹರಿಹರಿಸಲು ಹಾಲಿ ಶಾಸಕ ರಘು ವಿಫಲರಾಗಿದ್ದಾರೆ. ಇದರಿಂದ ಜನರು ಬದಲಾವಣೆ ಬಯಸಿದ್ದಾರೆ. ನಾನು ಗೆದ್ದು ವಿಧಾನಸೌಧಕ್ಕೆ ಹೋಗುತ್ತೇನೆಂಬ ಸಂಪೂರ್ಣ ವಿಶ್ವಾಸವಿದೆ.

Follow Us:
Download App:
  • android
  • ios