ಬಿಜೆಪಿ ಸರ್ಕಾರ ಪತನದ ಬಗ್ಗೆ ನಟ ಪ್ರಕಾಶ್ ರೈ ಟ್ವೀಟ್ ಹೋರಾಟ ಮುಂದುವರಿಯುವುದು, ಸಿದ್ಧರಾಗಿ: ಬೆಂಬಲಿಗರಿಗೆ ಕರೆ
ನವದೆಹಲಿ [ಮೇ. 19]: ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ #JustAsking ಎಂಬ ಅಭಿಯಾನದ ಮೂಲಕ ಹೋರಾಟ ನಡೆಸುತ್ತಿರುವ ನಟ ಪ್ರಕಾಶ್ ರೈ, ಯಡಿಯೂರಪ್ಪ ಸರ್ಕಾರ ಪತನದ ಬಗ್ಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕವು ಕೇಸರಿಕರಣಗೊಳ್ಳಲ್ಲ, ಬದಲಾಗಿ ವರ್ಣರಂಜಿತವಾಗಿ ಉಳಿಯಲಿದೆ. ಪಂದ್ಯ ಆರಂಭವಾಗುವ ಮುಂಚೆಯೇ ಮುಕ್ತಾಯವಾಗಿದೆ. 56 ಬಿಡಿ, 55 ಗಂಟೆಗಳ ಕಾಲ ಮುಂದುವರಿಯಲಿಕ್ಕೆ ಆಗಲಿಲ್ಲ. ಜನರೇ, ಇನ್ನೂ ಹೆಚ್ಚಿನ ಕೊಳಕು ರಾಜಕೀಯಕ್ಕೆ ಸಿದ್ಧರಾಗಿರಿ... ಜನರಿಗಾಗಿ ಹೋರಾಟ ಹಾಗೂ ಪ್ರಶ್ನಿಸುವುದನ್ನು ಮುಂದುವರೆಸುತ್ತೇನೆ ಎಂದು ಪ್ರಕಾಶ್ ರೈ ಟ್ವೀಟಿಸಿದ್ದಾರೆ.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಬಳಿಕ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಾ ಬಂದಿರುವ ಪ್ರಕಾಶ್ ರೈ, ಬಲಪಂಥೀಯ ಸಂಘಟನೆಗಳಿಂದ ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಅಪಾಯದಲ್ಲಿದೆ ಎಂದು #JustAsking ಚಳುವಳಿ ನಡೆಸುತ್ತಿದ್ದಾರೆ.
ಕಳೆದ ಮೇ.15ರಂದು ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಪ್ರಕಟವಾದ ಬೆನ್ನಲ್ಲಿ, ರಾಜ್ಯಪಾಲ ವಜುಭಾಯಿ ವಾಲ ಬಿಜೆಪಿಗೆ ಸರ್ಕಾರ ರಚಿಸಲು ಆಹ್ವಾನಿಸಿದ್ದರು. ಸತತ ರಾಜಕೀಯ ಹೈಡ್ರಾಮಾಗಳ ಬಳಿಕ ಗುರುವಾರವಷ್ಟೇ ಮುಖ್ಯಂಮಂತ್ರಿಯಾಗಿ ಶಪಥ ಸ್ವೀಕರಿಸಿದ ಯಡಿಯೂರಪ್ಪ, ಶನಿವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಗೆ ಮುನ್ನವೇ ರಾಜೀನಾಮೆ ನೀಡಿದ್ದಾರೆ.
