ಮೋದಿಗಿತ್ತಾ ಜೀವಭಯ? ಶೋಭಾ ಕರಂದ್ಲಾಜೆ ಹೇಳಿದ್ದೇನು?
ಪ್ರಧಾನಿ ನರೇಂದ್ರ ಮೋದಿಗೆ ಜೀವ ಭಯವಿದೆ. ಆ ಕಾರಣಗಳಿಂದ ಪ್ರಧಾನಿ ಕೃಷ್ಣ ಮಠಕ್ಕೆ ಭೇಟಿ ನೀಡುವುದು ಬೇಡವೆಂದು ವಿಶೇಷ ಭದ್ರತಾ ಪಡೆ ಎಚ್ಚರಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಮಠಕ್ಕೆ ಭೇಟಿ ನೀಡಲಿಲ್ಲವೆಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಉಡುಪಿ (ಮೇ. 02): ಪ್ರಧಾನಿ ನರೇಂದ್ರ ಮೋದಿಗೆ ಜೀವಭಯವಿದೆ. ಹೀಗಾಗಿ ನಿನ್ನೆ ಉಡುಪಿಗೆ ಬಂದರೂ ಮೋದಿ ಕೃಷ್ಣಮಠಕ್ಕೆ ಭೇಟಿ ನೀಡಬಾರದೆಂದು ವಿಶೇಷ ಭದ್ರತಾ ಪಡೆ ಸಲಹೆ ನೀಡಿತ್ತು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ವಿಶೇಷ ಭದ್ರತಾ ಪಡೆ ಪರಿಶೀಲನೆ ವೇಳೆ ಜೀವ ಭಯ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಹಿನ್ನಲೆಯಲ್ಲಿ ಮಠಕ್ಕೆ ಹೋಗದಂತೆ ಮೋದಿಗೆ ಹೇಳಿದ್ದರು. ಮೋದಿಯವರು ಮಠಕ್ಕೆ ಹೋಗದೇ ಇದ್ದಿದ್ದು ಬೇಸರ ತಂದಿದೆ. ಮೋದಿಯವರು ಕೃಷ್ಣ ಮಠಕ್ಕೆ ಹೋಗಲು ಸಾಧ್ಯವಾಗಲಿಲ್ಲ ಎಂದು ಬೇಸರ ಮಾಡಿಕೊಂಡಿದ್ದಾರೆ. ಪೇಜಾವರ ಶ್ರೀಗಳ ಜೊತೆ ಹಾಗೂ ಕೃಷ್ಣ ಮಠದ ಜೊತೆ ಉತ್ತಮ ಭಾಂಧವ್ಯವಿತ್ತು. ಆದರೆ ಈ ಬಾರಿ ಜೀವ ಭಯ ಇರುವುದರಿಂದ ಹೋಗಲಾಗುತ್ತಿಲ್ಲ ಎಂದು ಮೋದಿಜಿ ಬೇಸರ ಮಾಡಿಕೊಂಡಿದ್ದಾರೆಂದು ಶೋಭಾ ಕರಂದ್ಲಾಜೆ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೃಷ್ಣ ಮಠಕ್ಕೆ ಭೇಟಿ ನೀಡದ್ದನ್ನು ಬಿಜೆಪಿ ಖಂಡಿಸಿತ್ತು. ಇದೀಗ ಮೋದಿಯೂ ಮಠಕ್ಕೆ ಭೇಟಿ ನೀಡುವ ಕಾರ್ಯಕ್ರಮ ಇರಲಿಲ್ಲ. ಇದರಿಂದ ಬಿಜೆಪಿ ಮುಜುಗರಗೊಂಡಿತ್ತು.