ಅಸಲಿ ಮತದಾರರಿಗೆ ಮತಚೀಟಿ ನೀಡಲು ಮೇ 21ರ ಗಡುವು
ಇತ್ತೀಚಿಗೆ ಜಾಲಹಳ್ಳಿ ಅಪಾರ್ಟ್ಮೆಂಟ್ನಲ್ಲಿ ಪತ್ತೆಯಾದ ಮತದಾರರ ಚೀಟಿಗಳನ್ನು ಅಸಲಿ ಮತದಾರರಿಗೆ ಮೇ 21 ರೊಳಗೆ ಮರಳಿಸುವಂತೆ ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣಾಧಿಕಾರಿಗಳಿಗೆ ಚುನಾವಣಾ ಆಯೋಗವು ಗಡುವು ವಿಧಿಸಿದೆ.
ಬೆಂಗಳೂರು [ಮೇ 15] : ಇತ್ತೀಚಿಗೆ ಜಾಲಹಳ್ಳಿ ಅಪಾರ್ಟ್ಮೆಂಟ್ನಲ್ಲಿ ಪತ್ತೆಯಾದ ಮತದಾರರ ಚೀಟಿಗಳನ್ನು ಅಸಲಿ ಮತದಾರರಿಗೆ ಮೇ 21 ರೊಳಗೆ ಮರಳಿಸುವಂತೆ ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣಾಧಿಕಾರಿಗಳಿಗೆ ಚುನಾವಣಾ ಆಯೋಗವು ಗಡುವು ವಿಧಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು, ಅಪಾರ್ಟ್ಮೆಂಟ್ನಲ್ಲಿ ಜಪ್ತಿಯಾದ ಮತದಾರರ ಚೀಟಿ ಪರಿಶೀಲನೆ ಕಾರ್ಯವು ಪ್ರಗತಿಯಲ್ಲಿದೆ ಎಂದರು.
ಮತದಾರರ ಚೀಟಿಗಳನ್ನು ಸೂಕ್ತವಾಗಿ ಪರಿಶೀಲಿಸಿ, ಅಸಲಿ ಮತದಾರರಿಗೆ ಮರಳಿಸಬೇಕು. ಪ್ರತಿಯೊಬ್ಬ ಮತದಾರ ಚೀಟಿಯ ಜೆರಾಕ್ಸ್ ಪ್ರತಿಯನ್ನು ಪೊಲೀಸರು ಪಡೆದು, ಬಳಿಕ ಆ ಮತದಾರನ ಪೂರ್ವಾಪರ ಮಾಹಿತಿ ಸಂಗ್ರಹಿಸುವಂತೆ ಸಹ ನಿರ್ದೇಶಿಸಲಾಗಿದ್ದು, ಈ ಕಾರ್ಯವು ಮೇ 21 ರೊಳಗೆ ಮುಕ್ತಾಯಗೊಳಿಸುವಂತೆ ಆದೇಶಿಸಲಾಗಿದೆ ಎಂದು ಹೇಳಿದರು.
ಮತದಾರರ ಚೀಟಿ ಸಂಗ್ರಹ ಪ್ರಕರಣ ಸಂಬಂಧ ಪೊಲೀಸರು ಹಾಗೂ ಚುನಾವಣಾಧಿಕಾರಿಗಳು ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದ್ದು, ಈ ತನಿಖೆ ಮುಗಿದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ. ಮೇ 28 ರ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕೆಲ ದಿನಗಳ ಹಿಂದೆ ಜಾಲಹಳ್ಳಿಯ ಎಸ್ಎಲ್ವಿ ವ್ಯೆವ್ ಪಾರ್ಕ್ ಅಪಾರ್ಟ್ಮೆಂಟ್ನಲ್ಲಿ ಮೇಲೆ ಚುನಾವಣಾಧಿಕಾರಿಗಳು ದಾಳಿ ನಡೆಸಿದಾಗ 9654 ಮತದಾರರ ಚೀಟಿಗಳು ಪತ್ತೆಯಾಗಿದ್ದವು. ಈ ಪ್ರಕರಣವು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿತ್ತು. ಕೊನೆಗೆ ಚುನಾವಣಾ ಅಕ್ರಮದ ಹಿನ್ನೆಲೆಯಲ್ಲಿ ಆ ಕ್ಷೇತ್ರದ ಚುನಾವಣೆಯು ಮುಂದೂಡಿಕೆಯಾಗಿತ್ತು