ಸುಪ್ರೀಂ ಗ್ರೀನ್ ಸಿಗ್ನಲ್; ಸಿಎಂ ಆಗಿ ಯಡಿಯೂರಪ್ಪ ಬೆಳಗ್ಗೆ 9ಕ್ಕೆ ಪ್ರಮಾಣ
- ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ರಾಜ್ಯ ರಾಜಕಾರಣದಲ್ಲಿ ನಾಟಕೀಯ ಬೆಳವಣಿಗೆ
- ರಾತೋರಾತ್ರಿ ಸುಪ್ರೀಂ ಕದ ತಟ್ಟಿದ ಕಾಂಗ್ರೆಸ್-ಜೆಡಿಎಸ್; ಸುಪ್ರೀಂನಲ್ಲಿ ಮಿಡ್ನೈಟ್ ಹೈಡ್ರಾಮಾ
- ಯಡಿಯೂರಪ್ಪಗೆ ತಾತ್ಕಾಲಿಕ ರಿಲೀಫ್; ಗುರುವಾರ ಬೆಳಗ್ಗೆ 9ಕ್ಕೆ ರಾಜಭವನದಲ್ಲಿ ಸಿಎಂ ಆಗಿ ಪ್ರಮಾಣ
ಬೆಂಗಳೂರು/ ನವದೆಹಲಿ (ಮೇ. ೧೭): ಬಿ.ಎಸ್.ಯಡಿಯೂರಪ್ಪ ಪ್ರಮಾಣವಚನಕ್ಕೆ ತಡೆ ನೀಡಿ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಮಾಡಿರುವ ಮನವಿಯನ್ನು ತಳ್ಳಿಹಾಕಿರುವ ಸುಪ್ರೀಂ ಕೋರ್ಟ್, ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ. ನಿಗದಿಯಂತೆ ಗುರುವಾರ ಬೆಳಗ್ಗೆ 9 ಗಂಟೆಗೆ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ರಾಜ್ಯಪಾಲರು ಬಿಜೆಪಿಗೆ ಬಹುಮತವಿಲ್ಲದಿದ್ದರೂ ಸರ್ಕಾರ ರಚಿಸಲು ಆಹ್ವಾನಿಸಿದ್ದು, ಗುರುವಾರ ಬೆಳಗ್ಗೆ 9ಕ್ಕೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವಂತೆ ಯಡಿಯೂರಪ್ಪಗೆ ಸೂಚಿಸಿದ್ದರು. ರಾಜ್ಯಪಾಲರ ನಿರ್ಧಾರವನನ್ನು ಪ್ರಶ್ನಿಸಿ, ಕಾಂಗ್ರೆಸ್ ಹಾಗೂ ಜೆಡಿಎಸ್ ರಾತೋರಾತ್ರಿ ಸುಪ್ರೀಂ ಕೋರ್ಟ್ ಕದತಟ್ಟಿದ್ದವು.
ರಾತ್ರಿ 1.45ಕ್ಕೆ ವಾದವನ್ನು ಆಲಿಸಲು ಆರಂಭಿಸಿದ ಸುಪ್ರೀಂನ ತ್ರಿಸದಸ್ಯ ಪೀಠ, ಮೂರುವರೆ ಗಂಟೆಗಳ ಕಾಲ ವಿಚಾರಣೆ ನಡೆಸಿತು. ವಿಚಾರಣೆ ಬಳಿಕ, ಯಡಿಯೂರಪ್ಪ ಪ್ರಮಾಣವಚನಕ್ಕೆ ತಡೆ ನೀಡಲು ನಿರಾಕರಿಸಿದ ಸುಪ್ರೀಂ ಅರ್ಜಿಯ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ. ಅದರೊಳಗೆ ಶಾಸಕರ ಬೆಂಬಲಪತ್ರವನ್ನು ಸಲ್ಲಿಸಬೇಕೆಂದು ಬಿಎಸ್ವೈಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.