ಲಾಬಿ ಜತೆಗೇ ಕಾಂಗ್ರೆಸ್ನಲ್ಲಿ ಕಾಲೆಳೆದಾಟ
ಕಾಂಗ್ರೆಸ್ನಲ್ಲಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಯಾವ ಮಟ್ಟದ ಲಾಬಿ ನಡೆದಿದೆಯೋ ಅಷ್ಟೇ ಮಟ್ಟದ ಕಾಲೆಳೆಯುವ ಆಟವೂ ಆರಂಭಗೊಂಡಿದೆ.
ಬೆಂಗಳೂರು : ಕಾಂಗ್ರೆಸ್ನಲ್ಲಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಯಾವ ಮಟ್ಟದ ಲಾಬಿ ನಡೆದಿದೆಯೋ ಅಷ್ಟೇ ಮಟ್ಟದ ಕಾಲೆಳೆಯುವ ಆಟವೂ ಆರಂಭಗೊಂಡಿದೆ.
ಒಂದು ಕಡೆ ಆಕಾಂಕ್ಷಿಗಳು ಸಚಿವ ಹಾಗೂ ಡಿಸಿಎಂ ಸ್ಥಾನಕ್ಕಾಗಿ ಲಾಬಿ ಮಾಡುತ್ತಿದ್ದರೆ, ಅವರ ವಿರೋಧಿಗಳು ಕೂಡ ಸಚಿವ ಹಾಗೂ ಡಿಸಿಎಂ ಸ್ಥಾನವನ್ನು ನೀಡಬಾರದು ಎಂದು ಪ್ರಬಲ ವಿರೋಧ ಹುಟ್ಟುಹಾಕುತ್ತಿದ್ದಾರೆ. ಕಾಂಗ್ರೆಸ್ನೊಳಗೆ ಹುಟ್ಟಿಕೊಂಡಿರುವ ಈ ಕಾಲೆಳೆಯುವ ಆಟ ಪಕ್ಷದ ನಾಯಕತ್ವಕ್ಕೆ ನುಂಗಲಾಗದ ತುತ್ತಾಗಿ ಪರಿಣಮಿಸಿದೆ.
ಉಪ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿರುವ ಎಂ.ಬಿ. ಪಾಟೀಲ್, ಎಸ್.ಆರ್. ಪಾಟೀಲ್, ಎಚ್.ಕೆ. ಪಾಟೀಲ್, ಸತೀಶ್ ಜಾರಕಿಹೊಳಿ, ಡಿ.ಕೆ. ಶಿವಕುಮಾರ್, ಆರ್.ವಿ. ದೇಶಪಾಂಡೆ, ರೋಷನ್ ಬೇಗ್ ಅವರು ಕಾಂಗ್ರೆಸ್ ನಾಯಕತ್ವದ ಮೇಲೆ ಒತ್ತಡ ನಿರ್ಮಾಣ ಮಾಡುತ್ತಿದ್ದಾರೆ. ಆದರೆ, ಎಂ.ಬಿ. ಪಾಟೀಲ್, ಎಸ್.ಆರ್. ಪಾಟೀಲ್, ಎಚ್.ಕೆ. ಪಾಟೀಲ್, ಆರ್.ವಿ. ದೇಶಪಾಂಡೆ ಮೊದಲಾದವರಿಗೆ ಅವರ ಜಿಲ್ಲೆಯ ಶಾಸಕರಿಂದಲೇ ವಿರೋಧ ವ್ಯಕ್ತವಾಗುತ್ತಿದೆ.
ಇನ್ನು ಸತೀಶ್ ಜಾರಕಿಹೊಳಿ ಹಾಗೂ ಡಿ.ಕೆ. ಶಿವಕುಮಾರ್ ಅವರಿಗೆ ಶಾಸಕರಿಂದ ವಿರೋಧವಿರದಿದ್ದರೂ ಹಿರಿಯ ನಾಯಕತ್ವದಲ್ಲೇ ಅವರಿಗೆ ಪ್ರಮುಖ ಹುದ್ದೆ ನೀಡುವುದಕ್ಕೆ ವಿರೋಧವಿದೆ ಎಂದು ಮೂಲಗಳು ತಿಳಿಸಿವೆ.