ಸರ್ಕಾರ ರಚನೆ ಬಗ್ಗೆ ರಾಜ್ಯ ಪಾಲರ ನಿರ್ಧಾರವೇನು..?
ಫಲಿತಾಂಶ ಹೊರ ಬಿದ್ದು ಅತಂತ್ರ ವಿಧಾನಸಭೆ ಸೃಷ್ಟಿ ಯಾದ ಬೆನ್ನಲ್ಲೇ ಸರ್ಕಾರ ರಚನೆ ಕಸರತ್ತು ಇದೀಗ ರಾಜಭವನದ ಅಂಗಳಕ್ಕೆ ಬಂದು ನಿಂತಿದ್ದು, ರಾಜ್ಯಪಾಲರು ಏನು ಮಾಡುತ್ತಾರೆ ಎಂಬ ಕುತೂಹಲ ಮೂಡಿದೆ.
ಬೆಂಗಳೂರು: ಫಲಿತಾಂಶ ಹೊರ ಬಿದ್ದು ಅತಂತ್ರ ವಿಧಾನಸಭೆ ಸೃಷ್ಟಿ ಯಾದ ಬೆನ್ನಲ್ಲೇ ಸರ್ಕಾರ ರಚನೆ ಕಸರತ್ತು ಇದೀಗ ರಾಜಭವನದ ಅಂಗಳಕ್ಕೆ ಬಂದು ನಿಂತಿದ್ದು, ರಾಜ್ಯಪಾಲರು ಏನು ಮಾಡುತ್ತಾರೆ ಎಂಬ ಕುತೂಹಲ ಮೂಡಿದೆ.
ಬಹುಮತದಷ್ಟು ಸಂಖ್ಯಾಬಲ ಇಲ್ಲದಿದ್ದರೂ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಗೆ ಸರ್ಕಾರ ರಚಿಸುವ ಮೊದಲ ಅವಕಾಶ ನೀಡುತ್ತಾರೆಯೇ ಅಥವಾ ಬಹುಮತಕ್ಕೆ ಬೇಕಾದ ಸಂಖ್ಯಾಬಲ ಹೊಂದಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟಕ್ಕೆ ಆಹ್ವಾನ ಕೊಡುತ್ತಾರೆಯೇ ಎಂಬುದನ್ನು ಕಾದು ನೋಡ ಬೇಕಿದೆ. ಮಂಗಳವಾರ ಮಧ್ಯಾಹ್ನ ಫಲಿತಾಂಶ ಪೂರ್ಣಪ್ರಮಾಣದಲ್ಲಿ ಪ್ರಕಟಗೊಳ್ಳುವ ಮುನ್ನವೇ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಮೈತ್ರಿಯ ಪ್ರಯತ್ನ ಆರಂಭವಾಗಿತ್ತು.
ಜತೆಗೆ ಇಬ್ಬರು ಪಕ್ಷೇತರರನ್ನೂ ಸೇರಿಸಿಕೊಂಡು ರಾಜಭವನಕ್ಕೆ ತೆರಳಿದ ಉಭಯ ಪಕ್ಷಗಳ ನಾಯಕರು ಸರ್ಕಾರ ರಚನೆಯ ಹಕ್ಕು ಮಂಡಿಸಿದರು. ತಮಗೆ ಬಹುಮತದ ಸಂಖ್ಯಾಬಲ ಇದೆ ಎಂಬುದನ್ನು ಅಧಿಕೃತವಾಗಿಯೂ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಮನವರಿಕೆ ಮಾಡುವ ಪ್ರಯತ್ನ ನಡೆಸಿದರು. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮತ್ತಿತರರು ಒಟ್ಟಾಗಿಯೇ ರಾಜ್ಯಪಾಲರನ್ನು ಭೇಟಿ ಮಾಡಿದ್ದರು.
ಅದಕ್ಕೂ ಮೊದಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂ ರಪ್ಪ, ಕೇಂದ್ರ ಸಚಿವ ಅನಂತಕುಮಾರ್ ಮತ್ತಿತರ ನಾಯಕರು ಅತಿದೊಡ್ಡ ಪಕ್ಷವಾಗಿರುವ ತಮಗೇ ಸರ್ಕಾರ ರಚಿಸಲು ಅವಕಾಶ ನೀಡಬೇಕು ಎಂಬ ಬೇಡಿಕೆ ಇಟ್ಟಿ ದ್ದರು. ಹೀಗಾಗಿ, ಇದೀಗ ರಾಜ್ಯಪಾಲರು ಉಭಯ ಬಣಗಳು ನೀಡಿರುವ ಪ್ರಸ್ತಾವನೆ ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ.
ಅಗತ್ಯ ಕಂಡು ಬಂದರೆ ಸಂವಿಧಾನ ತಜ್ಞರೊಂದಿಗೂ ಸಮಾಲೋಚನೆ ನಡೆಸಲಿದ್ದಾರೆ. ಯಾರಿಗೆ ಆಹ್ವಾನ ನೀಡುತ್ತಾರೆ ಎಂಬು ದರ ಬಗ್ಗೆ ಬುಧವಾರದ ಹೊತ್ತಿಗೆ ಸ್ಪಷ್ಟ ಚಿತ್ರಣ ಹೊರ ಬೀಳುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.