5 ಕೇಂದ್ರಗಳಲ್ಲಿ ಮತ ಎಣಿಕೆ : 18 ಸಾವಿರ ಪೊಲೀಸರ ನಿಯೋಜನೆ
ಶಾಂತಿಯುತವಾಗಿ ಮತದಾನ ಮುಗಿಸಿ ಜನರಿಂದ ಭಾರಿ ಮೆಚ್ಚುಗೆಗೆ ಪಾತ್ರವಾಗಿರುವ ರಾಜಧಾನಿ ಪೊಲೀಸರು, ಮಂಗಳವಾರದ ಮತ ಎಣಿಕೆ ಕಾರ್ಯ ವನ್ನು ಸುಸೂತ್ರವಾಗಿ ಮುಗಿಸಲು ಭಾರಿ ಬಂದೋಬಸ್ತ್ ಮಾಡಿಕೊಂಡಿದ್ದಾರೆ.
ಬೆಂಗಳೂರು : ಶಾಂತಿಯುತವಾಗಿ ಮತದಾನ ಮುಗಿಸಿ ಜನರಿಂದ ಭಾರಿ ಮೆಚ್ಚುಗೆಗೆ ಪಾತ್ರವಾಗಿರುವ ರಾಜಧಾನಿ ಪೊಲೀಸರು, ಮಂಗಳವಾರದ ಮತ ಎಣಿಕೆ ಕಾರ್ಯ ವನ್ನು ಸುಸೂತ್ರವಾಗಿ ಮುಗಿಸಲು ಭಾರಿ ಬಂದೋಬಸ್ತ್ ಮಾಡಿಕೊಂಡಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತ ನಾಡಿದ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಅವರು, ಮತ ಎಣಿಕೆ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಸೂಕ್ತ ಭದ್ರತೆ ಕಲ್ಪಿಸಲಾಗಿದೆ ಎಂದರು.
ನಗರದ ವ್ಯಾಪ್ತಿಯ ಐದು ಮತ ಎಣಿಕೆ ಕೇಂದ್ರಗಳಿದ್ದು, ಅವುಗಳಿಗೆ 18 ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗುತ್ತದೆ. ಮತ ಎಣಿಕೆ ದಿನ ರಾಜಕೀಯ ಪಕ್ಷಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆ ಯಲ್ಲಿ ಮತ ಎಣಿಕೆ ಕೇಂದ್ರ ಬಳಿ ಜಮಾಯಿಸಬಹುದು. ಹೀಗಾಗಿ ಈ ಕೇಂದ್ರಗಳಿಗೆ ಡಿಸಿಪಿ ಮಟ್ಟದಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.
ಪ್ರತಿ ಮತ ಎಣಿಕೆ ಕೇಂದ್ರದಲ್ಲಿ ಓರ್ವ ಡಿಸಿಪಿ ನೇತೃತ್ವದಲ್ಲಿ ಮೂವರು ಎಸಿಪಿ, ಮೂವರು ಇನ್ಸ್ ಪೆಕ್ಟರ್ ಸೇರಿ 150 ಮಂದಿ ಭದ್ರತೆಗೆ ನಿಯುಕ್ತಿಗೊಳಿಸಲಾಗಿದೆ. ಅಲ್ಲದೆ, ಅರೆಸೇನಾ ಪಡೆ ಹಾಗೂ ಕೆಎಸ್ಆರ್ಪಿ ಬಳಸಿಕೊಳ್ಳಲಾಗುತ್ತಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು.
ಮತ ಎಣಿಕೆ ವ್ಯಾಪ್ತಿಯಲ್ಲಿ ಅಧಿಕ ಸಂಖ್ಯೆಯಲ್ಲಿ ವಾಹನಗಳು ಆಗಮಿಸುವ ಕಾರಣ ಆ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗ ಬಹುದು. ಹೀಗಾಗಿ ಈ ಸಂಚಾರ ಸಮಸ್ಯೆ ನಿರ್ವಹಣೆಗೂ ಗಮನಹರಿಸಲಾಗಿದ್ದು, ಮತ ಎಣಿಕೆ ಕೇಂದ್ರಗಳ ಸರಹದ್ದಿನ ರಸ್ತೆಗಳಲ್ಲಿ ಸುಗಮ ಸಂಚಾರಕ್ಕೆ ಅಗತ್ಯ ವ್ಯವಸ್ಥೆಯನ್ನು ಸಂಚಾರ ಪೊಲೀಸರು ನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.