ಮತ್ತೆ ರಾಜ್ಯದಲ್ಲಿ ರೆಸಾರ್ಟ್ ರಾಜಕೀಯ ?
ಅತಂತ್ರ ವಿಧಾನಸಭೆ ರಚನೆಯಾದ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಮತ್ತೆ ರೆಸಾರ್ಟ್ ರಾಜಕೀಯ ಸಂಸ್ಕೃತಿ ಆರಂಭವಾಗುವ ಸಾಧ್ಯತೆ ತಲೆದೋರಿದೆ. ಬಿಜೆಪಿಗೆ ಬಹುಮತ ಇಲ್ಲದ ಕಾರಣ 2 ನೇ ಸ್ಥಾನದಲ್ಲಿರುವ ಕಾಂಗ್ರೆಸ್, 3 ನೇ ಸ್ಥಾನದಲ್ಲಿರುವ ಜೆಡಿಎಸ್ ಸರ್ಕಾರ ರಚಿಸಲು ಅವಕಾಶ ನೀಡುವಂತೆ ಕೋರಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿವೆ.
ಬೆಂಗಳೂರು: ಅತಂತ್ರ ವಿಧಾನಸಭೆ ರಚನೆಯಾದ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಮತ್ತೆ ರೆಸಾರ್ಟ್ ರಾಜಕೀಯ ಸಂಸ್ಕೃತಿ ಆರಂಭವಾಗುವ ಸಾಧ್ಯತೆ ತಲೆದೋರಿದೆ. ಬಿಜೆಪಿಗೆ ಬಹುಮತ ಇಲ್ಲದ ಕಾರಣ 2 ನೇ ಸ್ಥಾನದಲ್ಲಿರುವ ಕಾಂಗ್ರೆಸ್, 3 ನೇ ಸ್ಥಾನದಲ್ಲಿರುವ ಜೆಡಿಎಸ್ ಸರ್ಕಾರ ರಚಿಸಲು ಅವಕಾಶ ನೀಡುವಂತೆ ಕೋರಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿವೆ. ಇದಕ್ಕೂ ಮುನ್ನ ಬಿಜೆಪಿ ಕೂಡ ತಾನು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರಿಂದ ಸರ್ಕಾರ ರಚನೆಗೆ ತಮಗೆ ಆಹ್ವಾನ ನೀಡಬೇಕು ಎಂಬ ಕೋರಿಕೆಯೊಂದಿಗೆ ರಾಜ್ಯಪಾಲರಿಗೆ ಪತ್ರ ಸಲ್ಲಿಸಿದೆ.
ಈ ಮಧ್ಯೆ, ಬಿಜೆಪಿ ‘ಆಪರೇಷನ್ ಕಮಲ’ (ಅನ್ಯ ಪಕ್ಷಗಳ ಶಾಸಕರನ್ನು ಸೆಳೆಯುವುದು) ಆರಂಭಿಸಬಹುದು ಎಂಬ ಊಹಾಪೋಹದ ಸುದ್ದಿಗಳು ಹಬ್ಬುತ್ತಿರುವುದರಿಂದ ಆತಂಕಗೊಂಡಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ತಮ್ಮ ಪಕ್ಷದ ಶಾಸಕರನ್ನು ಹಿಡಿದಿಡಲು ರೆಸಾರ್ಟ್ ಗೆ ಕಳುಹಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ
ಕೇರಳ ಪ್ರವಾಸೋದ್ಯಮ ಆಹ್ವಾನ
ತಿರುವನಂತಪುರ: ಕರ್ನಾಟಕ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ, ಸಂಭವನೀಯ ರೆಸಾರ್ಟ್ ರಾಜಕೀಯಕ್ಕೆ ತನ್ನ ನಾಡಿಗೆ ಆಗಮಿಸುವಂತೆ ಕರ್ನಾಟಕದ ಶಾಸಕರಿಗೆ ಕೇರಳದ ಪ್ರವಾಸೋದ್ಯಮ ಇಲಾಖೆ ಆಹ್ವಾನ ನೀಡಿದೆ. ಈ ಕುರಿತು ಅದು ಟ್ವೀಟ್ ಮಾಡಿದೆ. ‘ಕರ್ನಾಟಕ ಫಲಿತಾಂಶದಿಂದ ಉಂಟಾಗಿರುವ ಕಂಪನದ ಹಿನ್ನೆಲೆಯಲ್ಲಿ, ನಾವು ಎಲ್ಲಾ ಶಾಸಕರನ್ನು ದೇವರ ಸ್ವಂತ ನಾಡಿನ ಸುರಕ್ಷಿತ ಮತ್ತು ಸುಂದರ ರೆಸಾರ್ಟ್ಗೆ ಆಹ್ವಾನ ನೀಡುತ್ತೇವೆ’ ಎಂದು ಕೇರಳ ಪ್ರವಾಸೋದ್ಯಮ ಇಲಾಖೆ ತನ್ನ ಟ್ವೀಟರ್ ಖಾತೆ ಮೂಲಕ ಆಹ್ವಾನ ನೀಡಿದೆ.