ಪ್ರಚೋದನಾಕಾರಿ ಭಾಷಣ ಮಾಡುವುದರಲ್ಲಿ ಕರ್ನಾಟಕಕ್ಕೆ 3 ನೇ ಸ್ಥಾನ
ಚುನಾವಣಾ ಅಖಾಡದಲ್ಲಿ ರಾಜಕಾರಣಿಗಳ ಭಾಷಣ ಅಂದರೆ ಅದು ಎಲುಬಿಲ್ಲದ ನಾಲಿಗೆ. ಆರೋಪ ಪ್ರತ್ಯಾರೋಪ ಮಾಡುವ ಆವೇಶದಲ್ಲಿ ಸಮಾಜದಲ್ಲಿ ದ್ವೇಷ ಬಿತ್ತುತ್ತಿದ್ದಾರೆ ಜನಪ್ರತಿನಿಧಿಗಳು. ಈ ಬಗ್ಗೆ ಎಡಿಆರ್ ಸಂಸ್ಥೆ ನಡೆಸಿರುವ ಸರ್ವೇ ಪ್ರಕಾರ ದೇಶದಲ್ಲಿಯೇ ಕರ್ನಾಟಕ ಮೂರನೇ ಸ್ಥಾನದಲ್ಲಿದೆ.
ಬೆಂಗಳೂರು (ಏ. 26): ಚುನಾವಣಾ ಅಖಾಡದಲ್ಲಿ ರಾಜಕಾರಣಿಗಳ ಭಾಷಣ ಅಂದರೆ ಅದು ಎಲುಬಿಲ್ಲದ ನಾಲಿಗೆ. ಆರೋಪ ಪ್ರತ್ಯಾರೋಪ ಮಾಡುವ ಆವೇಗದಲ್ಲಿ ಸಮಾಜದಲ್ಲಿ ದ್ವೇಷ ಬಿತ್ತುತ್ತಿದ್ದಾರೆ ಜನಪ್ರತಿನಿಧಿಗಳು. ಈ ಬಗ್ಗೆ ಎಡಿಆರ್ ಸಂಸ್ಥೆ ನಡೆಸಿರುವ ಸರ್ವೇ ಪ್ರಕಾರ ದೇಶದಲ್ಲಿಯೇ ಕರ್ನಾಟಕ ಮೂರನೇ ಸ್ಥಾನದಲ್ಲಿದೆ.
ಆಚಾರವಿಲ್ಲದ ನಾಲಿಗೆಯಲ್ಲಿ ಶಿಸ್ತಿನ ಪಕ್ಷ ಕಮಲ..!
ಚುನಾವಣಾ ರಣಾಂಗಣದಲ್ಲಿ ಜನಪ್ರತಿನಿಧಿಗಳು ನಾಲಿಗೆ ಹರಿಬಿಡೋದು ಸಮಾಜದಲ್ಲಿ ದ್ವೇಷ ಹುಟ್ಟಿಸುತ್ತಿದೆಯಾ?ಬೇಕಾಬಿಟ್ಟಿ ಮಾತಾಡಿ ಆ ಕ್ಷಣಕ್ಕೆ ಜನರ ಚಪ್ಪಾಳೆ ಗಿಟ್ಟಿಸಲು ಹವಣಿಸುವ 58 ಚುನಾಯಿತ ಜನಪ್ರತಿನಿಧಿಗಳ ಲಿಸ್ಟ್ ಬಹಿರಂಗಗೊಂಡಿದೆ. ಕರ್ನಾಟಕ ಚುನಾವಣೆ ಹತ್ತಿರವಿದ್ದಾಗಲೇ ಎಡಿಆರ್ ಸಂಸ್ಥೆ ಈ ಪಟ್ಟಿ ಬಿಡುಗಡೆಗೊಳಿಸಿದೆ. ಅಚ್ಚರಿ ಅಂದ್ರೆ ಅತ್ಯಂತ ಶಾಂತಿಪ್ರೀಯ ರಾಜ್ಯ ಕರ್ನಾಟಕ ಎಡಿಆರ್ ಸರ್ವೇಯಲ್ಲಿ ಮೂರನೇ ಸ್ಥಾನದಲ್ಲಿದೆ.
ದ್ವೇಷ ಭಾಷಣಗಳನ್ನ ಮಾಡಿದವರಲ್ಲಿ ಕಮಲ ಪಾಳೆಯದ ನಾಯಕರೇ ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 17 ಸಂಸದರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡೇವಿಟ್ ನಲ್ಲಿ ಪ್ರಚೋದನಾಕಾರಿ ಭಾಷಣದ ಮೇಲೆ ತಮ್ಮ ಮೇಲಿರುವ ಪ್ರಕರಣಗಳ ಮಾಹಿತಿ ನೀಡಿದ್ದಾರೆ. ಉಮಾಭಾರತಿ, ಅಡ್ವಾಣಿ, ಅಸಾದುದ್ದೀನ್ ಓವೈಸಿ ಸೇರಿದಂತೆ ಕಾಂಗ್ರೆಸ್ ಇಬ್ಬರು ಜನಪ್ರತಿನಿಧಿಗಳು ದ್ವೇಷ ಭಾಷಣದ ಕೇಸ್ ಎದುರಿಸುತ್ತಿದ್ದಾರೆ. ದ್ವೇಷ ಭಾಷಣದಲ್ಲಿ ಉತ್ತರ ಪ್ರದೇಶ ಮೊದಲನೇ ಸ್ಥಾನದಲ್ಲಿದ್ದು, 15 ಜನಪ್ರತಿನಿಧಿಗಳ ಮೇಲೆ ಪ್ರಕರಣ ದಾಖಲಾಗಿವೆ. ತೆಲಂಗಾಣ ಎರಡನೇ ಸ್ಥಾನದಲ್ಲಿದ್ದರೆ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಕರ್ನಾಟಕದ ಐವರು ಜನಪ್ರತಿನಿಧಿಗಳ ಮೇಲೆ ಈ ಆರೋಪವಿದೆ.
ದ್ವೇಷ ಕಾರುವ ಭಾಷಣಕಾರರು.!
* ಸಂಸದ ನಳೀನ್ ಕುಮಾರ್ ಕಟೀಲ್
ಐಪಿಸಿ 120 ಬಿ, 153 ಎ ಪ್ರಕರಣ
ಜನಾಂಗೀಯ ದ್ವೇಷ, ಧಾರ್ಮಿಕ, ವರ್ಣ ಬೇಧಕ್ಕೆ ಪ್ರಚೋಧನೆ ನೀಡಿರುವ ಆರೋಪ.
* ಸಂಸದ ಸುರೇಶ್ ಅಂಗಡಿ.
ಐಪಿಸಿ 153 ಎ, 505 (2)
ಭಾಷಣ ಸಂಜ್ಞೆ ದೃಶ್ಯಾವಳಿ ಮೂಲಕ ಕೋಮುದ್ವೇಷ ಹಬ್ಬಿಸುವ ಯತ್ನ
ಜನಾಂಗ,ಧರ್ಮ,ಜಾತಿ ಆಧಾರದಲ್ಲಿ ಜನರ ನಡುವೆ ದ್ವೇಷ ಹಚ್ಚುವ ಯತ್ನ ಆರೋಪ.
* ಎಂ.ಇ.ಎಸ್ ಶಾಸಕ ಸಂಬಾಜೀ ಪಾಟೀಲ್
ಐಪಿಸಿ 153 ಎ. ಭಾಷೆ, ಪ್ರಾದೇಶಿಕತೆ ಜನಾಂಗದ ನಡುವೆ ದ್ವೇಷ ಬಿತ್ತುವ ಯತ್ನ ಆರೋಪ
* ಶಾಸಕ ಸಂಜಯ್ ಬಿ ಪಾಟೀಲ್
ಐಪಿಸಿ 153 ಎ. ಭಾಷೆ, ಪ್ರಾದೇಶಿಕತೆ, ಜನಾಂಗೀಯ ನಡುವೆ ದ್ವೇಷ ಬಿತ್ತುವ ಯತ್ನದ ಆರೋಪ..
* ಸಂಸದ ಶ್ರೀರಾಮುಲು
ಕ್ರಿಮಿನಲ್ ಸಂಚು ಬೆದರಿಕೆ ಯತ್ನದ ಆರೋಪ.
ಅಚ್ಚರಿಯ ಸಂಗತಿ ಅಂದರೆ ಎಡಿಆರ್ ಸರ್ವೇ ಪಟ್ಟಿಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡುತ್ತಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರ ಹೆಸರು ನಾಪತ್ತೆಯಾಗಿದೆ. ಸಂಸದ ಪ್ರತಾಪ್ ಸಿಂಹ, ಶೋಭ ಕರಂದ್ಲಾಜೆ, ಈಶ್ವಪ್ಪ ಹೆಸರು ಈ ಪಟ್ಟಿಯಲ್ಲಿಲ್ಲ. ಕಳೆದ 5 ವರ್ಷಗಳಲ್ಲಿ ದಾಖಲಾಗಿರು ಪ್ರಕರಣಗಳನ್ನ ಆಧಾರವಾಗಿಟ್ಟುಂಡು ಈ ಪಟ್ಟಿ ಬಿಡುಗಡೆ ಮಾಡಿರೋದರಿಂದ ಇವರ ಹೆಸರುಗಳಿಲ್ಲ ಎಂದು ಹೇಳಲಾಗುತ್ತಿದೆ.
ಕರ್ನಾಟಕ ಚುನಾವಣೆ ಮತ್ತು ಹಿಂದಿನ ಚುನಾವಣೆಗಳಲ್ಲಿ ಚುನಾವಣಾ ಆಯೋಗಕ್ಕೆ ಜನಪ್ರತಿನಿಧಿಗಳು ಸಲ್ಲಿಸಿರುವ ಅಫಿಡೆವಿಟ್ ನಲ್ಲಿ ಉಲ್ಲೇಖಿಸಿರುವ ಪ್ರಕರಣಗಳನ್ನ ಆಧರಿಸಿ ಎಡಿಆರ್ ಸಂಸ್ಥೆ ಈ ಪಟ್ಟಿ ಬಿಡುಗಡೆಗೊಳಿಸಿದೆ.