ವಿಧಾನಸೌಧದ ಮುಂದೆ ಪ್ರಮಾಣವಚನ ಸ್ವೀಕರಿಸಿದ ಯಾರೊಬ್ಬರೂ ಅಧಿಕಾರ ಪೂರ್ಣಗೊಳಿಸಿಲ್ಲ
ಕರ್ನಾಟಕದಲ್ಲಿ ಒಟ್ಟು 25 ಮಂದಿ ಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಿಸಿದ್ದು ಎಸ್. ನಿಜಲಿಂಗಪ್ಪ[1962-68], ಡಿ.ದೇವರಾಜ್ ಅರಸ್ [1972 ರಿಂದ 1977] ಹಾಗೂ ಇತ್ತೀಚಿಗೆ ಪೂರ್ಣಗೊಳಿಸಿದ ಸಿದ್ದರಾಮಯ್ಯ ಅವರು [2013-18] ಮಾತ್ರ 5 ವರ್ಷ ಅಧಿಕಾರ ಪೂರ್ಣಗೊಳಿಸಿದ್ದಾರೆ.
ಬೆಂಗಳೂರು(ಮೇ.23): ಇದೊಂದು ಇಂಟರೆಸ್ಟಿಂಗ್ ಸುದ್ದಿ. ಇಲ್ಲಿಯವರೆಗೂ ವಿಧಾನಸೌಧದ ಮುಂದೆ ಪ್ರಮಾಣ ವಚನ ಸ್ವೀಕರಿಸಿದ ಯಾರೊಬ್ಬರು ಸಹ ತಮ್ಮ ಅಧಿಕಾರವನ್ನು ಪೂರ್ಣಗೊಳಿಸಿಲ್ಲ.
ಇದಕ್ಕೆ ಇಂದು ಪ್ರಮಾಣ ವಚನ ಸ್ವೀಕರಿಸಿದ ಕುಮಾರಸ್ವಾಮಿ ಕೂಡ ಹೊರತಲ್ಲ. ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರದ ಪರವಾಗಿ ಹೆಚ್ಡಿಕೆ 25ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. 2006ರ ಫೆಬ್ರವರಿ 8ರಂದು ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದಲ್ಲೂ ಕುಮಾರಸ್ವಾಮಿ 20 ತಿಂಗಳು ಸಿಎಂ ಆಗಿದ್ದರು. ಅದು ಧರ್ಮಸಿಂಗ್ ಅವಧಿಯ ಮುಂದುವರೆದ ಅವಧಿಯಾಗಿತ್ತು. ಮುಂದೆ ಆಡಳಿತ ನಡೆಸಿದ ಸರ್ಕಾರ ಅಧಿಕಾರ ಪೂರ್ಣಗೊಳಿಸದೆ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಲಾಯಿತು.
25 ಸಿಎಂಗಳಲ್ಲಿ ಇಬ್ಬರು ಮಾತ್ರ ಅಧಿಕಾರ ಪೂರ್ಣ
ಕರ್ನಾಟಕದಲ್ಲಿ ಒಟ್ಟು 25 ಮಂದಿ ಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಿಸಿದ್ದು ಎಸ್. ನಿಜಲಿಂಗಪ್ಪ[1962-68], ಡಿ.ದೇವರಾಜ್ ಅರಸ್ [1972 ರಿಂದ 1977] ಹಾಗೂ ಇತ್ತೀಚಿಗೆ ಪೂರ್ಣಗೊಳಿಸಿದ ಸಿದ್ದರಾಮಯ್ಯ ಅವರು [2013-18] ಮಾತ್ರ 5 ವರ್ಷ ಅಧಿಕಾರ ಪೂರ್ಣಗೊಳಿಸಿದ್ದಾರೆ. ಈ ಮೂವರು ಪ್ರಮಾಣ ವಚನ ಸ್ವೀಕರಿಸಿದ್ದು ವಿಧಾನಸೌಧದ ಬೇರೆ ಸ್ಥಳದಲ್ಲಿ. ಎಸ್.ನಿಜಲಿಂಗಪ್ಪ ಹಾಗೂ ಡಿ.ದೇವರಾಜ್ ಅರಸ್ ರಾಜಭವನದಲ್ಲಿ ಹಾಗೂ ಸಿದ್ದರಾಮಯ್ಯ ಅವರು ಕಂಠೀರವ ಕ್ರೀಡಾಂಗಣದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದರು.
ವಿಧಾನಸೌಧ ಅಭ್ಯಾಸ ಶುರುವಾದದ್ದು 1983 ರಲ್ಲಿ
ವಿಧಾನಸೌಧದಲ್ಲಿ ಪ್ರಮಾಣ ವಚನ ಸ್ವೀಕಾರ ಅಭ್ಯಾಸ ಶುರುವಾದದ್ದು 1983ರಿಂದ. ಅಲ್ಲಿಯವರೆಗೂ ರಾಜಭವನದಲ್ಲಿಯೇ ಎಲ್ಲ ಮುಖ್ಯಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸುತ್ತಿದ್ದರು. ತಲಾ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಹಾಗೂ ಬಿ.ಎಸ್.ಯಡಿಯೂರಪ್ಪ ಕೂಡ ವಿಧಾನಸೌಧದ ಎದುರು ಪ್ರಮಾಣವಚನ ಸ್ವೀಕರಿಸಿದ್ದರು. ಇವರು ಅಧಿಕಾರ ಪೂರ್ಣಗೊಳಿಸಿರಲಿಲ್ಲ. ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿರುವ ಹೆಚ್.ಡಿ.ಕುಮಾರಸ್ವಾಮಿ ಪೂರ್ಣಗೊಳಿಸುತ್ತಾರೆಯೇ ಕಾದು ನೋಡಬೇಕಿದೆ.