ಮೋದಿ ಹೊಗಳಿ - ಸಿದ್ದರಾಮಯ್ಯ ತೆಗಳಿದ ಗೌಡರು
ದೇವೇಗೌಡರನ್ನು ರಾಹುಲ್ ಗಾಂಧಿ ಅವಮಾನಿಸಿದ್ದಾರೆ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು, ಮೋದಿ ಯಾವುದೇ ರಾಜ್ಯಕ್ಕೆ ಹೋಗುವ ಮೊದಲು ಆ ಅಲ್ಲಿನ ಬೆಳವಣಿಗೆ ಬಗ್ಗೆ ಸಮಗ್ರ ವಿವರ ಸಂಗ್ರಹಿಸಿರುತ್ತಾರೆ ಎಂದು ಹೊಗಳಿದ್ದು, ಇದೇ ವೇಳೆ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿಯನ್ನೂ ನಡೆಸಿದ್ದಾರೆ.
ಬೆಂಗಳೂರು : ದೇವೇಗೌಡರನ್ನು ರಾಹುಲ್ ಗಾಂಧಿ ಅವಮಾನಿಸಿದ್ದಾರೆ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು, ಮೋದಿ ಯಾವುದೇ ರಾಜ್ಯಕ್ಕೆ ಹೋಗುವ ಮೊದಲು ಆ ಅಲ್ಲಿನ ಬೆಳವಣಿಗೆ ಬಗ್ಗೆ ಸಮಗ್ರ ವಿವರ ಸಂಗ್ರಹಿಸಿರುತ್ತಾರೆ. ಅವರಿಗೆ ಕರ್ನಾಟಕದಲ್ಲಿ ಏನು ನಡೆಯುತ್ತಿದೆ ಎಂಬುದು ಚೆನ್ನಾಗಿ ಗೊತ್ತಿದೆ. ಅದನ್ನೇ ಉಡುಪಿಯಲ್ಲಿ ಹೇಳಿದ್ದಾರೆ. ಅದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದಿದ್ದಾರೆ.
ಬಿಜೆಪಿ ಜತೆ ಜೆಡಿಎಸ್ ಒಳಒಪ್ಪಂದ ಮಾಡಿಕೊಂಡಿದೆ, ಅಮಿತ್ ಶಾ ಅವರನ್ನು ಕುಮಾರಸ್ವಾಮಿ ಭೇಟಿಯಾಗಿದ್ದಾರೆ ಎಂಬ ಆರೋಪಗಳಿಗೆ ತಿರುಗೇಟು ನೀಡಿರುವ ದೇವೇಗೌಡರು, 2004 ರಲ್ಲಿ ಕಾಂಗ್ರೆಸ್ ಜತೆ ಸರ್ಕಾರ ರಚಿಸುವ ವೇಳೆ ಸಿದ್ದರಾಮಯ್ಯ ತಾವು ಸಿಎಂ ಆಗುವ ಎಂಬ ಉದ್ದೇಶದಿಂದ ಬಿಜೆಪಿಯ ಬಾಗಿಲು ಬಡಿದಿದ್ದರು ಎಂದು ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಸಂವಾದದಲ್ಲಿ ಜನಾರ್ದನರೆಡ್ಡಿ ಬಗ್ಗೆ ಕಾಂಗ್ರೆಸ್ಸಿಗರ ವಾಗ್ದಾಳಿ ಕುರಿತ ಪ್ರಶ್ನೆಗೆ ಉತ್ತರಿಸಿದ ದೇವೇಗೌಡರು, ಅಶೋಕ್ ಖೇಣಿಯನ್ನು ತಮ್ಮ ಪಕ್ಷಕ್ಕೆ ಸೇರಿಸಿ ಕೊಂಡಿರುವ ಕಾಂಗ್ರೆಸ್ಸಿಗರಿಗೆ ಜನಾರ್ದನರೆಡ್ಡಿ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ. ಖೇಣಿ ಮತ್ತು ರೆಡ್ಡಿ ಇಬ್ಬರೂ ಬ್ರದರ್ಸ್ ಇದ್ದಂತೆ ಎಂದು ವ್ಯಂಗ್ಯವಾಗಿ ಹೇಳಿದರು.