ಮೈತ್ರಿಕೂಟ ಸರ್ಕಾರದಲ್ಲಿ ಉಪ-ಮುಖ್ಯಮಂತ್ರಿ ಹುದ್ದೆಗೆ ಭಾರೀ ಬೇಡಿಕೆ ಹಿನ್ನೆಲೆ ಎಲ್ಲಾ  ದಿಸಿಎಂ ಆಕಾಂಕ್ಷಿಗಳಿಗೆ ಸಮಾಧಾನಪಡಿಸಲು ಎಚ್‌ಡಿಕೆ ಮಾಸ್ಟರ್ ಪ್ಲ್ಯಾನ್

ಬೆಂಗಳೂರು [ಸುಳ್ಳು ಸುದ್ದಿ ವಾರ್ತೆ]: ಮೈತ್ರಿಕೂಟ ಸರ್ಕಾರಕ್ಕೆ ಸಚಿವ ಸಂಪುಟ ರಚನೆ ಹಾಗೂ ಉಪಮುಖ್ಯಮಂತ್ರಿ ಹುದ್ದೆ ಭಾರೀ ತಲೆನೋವುಂಟು ಮಾಡಿರುವ ಹಿನ್ನೆಲೆಯಲ್ಲಿ, ಹಿರಿಯ ನಾಯಕರು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ಮೈತ್ರಿಕೂಟ ಸರ್ಕಾರ ರಚನೆ ಬಗ್ಗೆ ಮಾತುಕತೆ ಆರಂಭವಾದ ಬೆನ್ನಲ್ಲೇ, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಹೆಸರು ಬಹುತೇಕ ಖಚಿವಾಗಿತ್ತು. ಆದರೆ ಆ ಬಳಿಕ ನಡೆದ ಬೆಳವಣಿಗೆಳಲ್ಲಿ ಎಲ್ಲಾ ಜಾತಿ ಸಮುದಾಯಗಳು ತಮಗೆ ಡಿಸಿಎಂ ಹುದ್ದೆ ನೀಡಬೇಕೆಂದು ಪಟ್ಟು ಹಿಡಿದಿವೆ.

ಲಿಂಗಾಯತರು ಶಾಮನೂರುಗೆ, ಒಕ್ಕಲಿಗರು ಡಿ.ಕೆ.ಶಿವಕುಮಾರ್‌ಗೆ, ಬ್ರಾಹ್ಮಣರು ಆರ್‌.ವಿ. ದೇಶಪಾಂಡೆಗೆ, ಕುರುಬರು ಬಂಡೆಪ್ಪ ಕಾಶಪ್ಪನವರ್‌ಗೆ, ಮುಸ್ಲಿಮರು ರೋಷನ್‌ ಬೇಗ್‌ಗೆ ಡಿಸಿಎಂ ಹುದ್ದೆ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. 

ಒಬ್ಬರಿಗೆ ಕೊಟ್ಟು ಇನ್ನೊಬ್ಬರಿಗೆ ಕೊಡದಿದ್ದಲ್ಲಿ, ಅವಕಾಶ ವಂಚಿತ ಮುಖಂಡರು ಹಾಗೂ ಅವರ ಜಾತಿಗಳ ಆಕ್ರೋಶಕ್ಕೆ ಗುರಿಯಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಮುಂಬರುವ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅದು ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ನಾಯಕರ ಲೆಕ್ಕಾಚಾರ. 

ಈ ಹಿನ್ನೆಲೆಯಲ್ಲಿ ದೀರ್ಘವಾದ ಸಮಾಲೋಚನೆ ಬಳಿಕ, ಎಲ್ಲಾ ಮಂತ್ರಿಗಳಿಗೂ ಡಿಸಿಎಂ ಸ್ಥಾನಮಾನ ನೀಡುವ ನಿರ್ಧಾರವನ್ನು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತೆಗೆದುಕೊಂಡಿದ್ದಾರೆಂದು ಉನ್ನತ ಮೂಲಗಳು ‘ಸುಳ್ಳು ಸುದ್ದಿ‘ ವಾರ್ತೆಗೆ ತಿಳಿಸಿವೆ.

[ಸುಳ್ಳು ಸುದ್ದಿ ವಾರ್ತೆ]