Asianet Suvarna News Asianet Suvarna News

ಮಂತ್ರಿ ಸ್ಥಾನ ಕೇಳಲು ಯಾರೂ ದಿಲ್ಲಿಗೆ ಬರಬೇಡಿ: ಹೈಕಮಾಂಡ್

ಸಚಿವ ಸ್ಥಾನ ಹಾಗೂ ಡಿಸಿಎಂ ಹುದ್ದೆಗಳಿಗೆ ಕಾಂಗ್ರೆಸ್‌ನ ಪ್ರಭಾವಿಗಳೇ ನಡೆಸುತ್ತಿರುವ ಲಾಬಿಯಿಂದ ಬೇಸತ್ತು ಹೋಗಿರುವ ಕಾಂಗ್ರೆಸ್ ಹೈಕಮಾಂಡ್, ಕುಮಾರಸ್ವಾಮಿ ಅವರು ವಿಶ್ವಾಸ ಮತ ಗೆಲ್ಲುವವರೆಗೆ ಯಾರೊಬ್ಬರೂ ತಮ್ಮ ಭೇಟಿಗೆ ದೆಹಲಿಗೆ ಬರದಂತೆ ಕಾಂಗ್ರೆಸ್ಸಿಗರಿಗೆ ತಾಕೀತು ಮಾಡಿದೆ.

Don't Lobby For Ministry Say Congress High Command

ಬೆಂಗಳೂರು[ಮೇ.21]: ಸಚಿವ ಸ್ಥಾನ ಹಾಗೂ ಡಿಸಿಎಂ ಹುದ್ದೆಗಳಿಗೆ ಕಾಂಗ್ರೆಸ್‌ನ ಪ್ರಭಾವಿಗಳೇ ನಡೆಸುತ್ತಿರುವ ಲಾಬಿಯಿಂದ ಬೇಸತ್ತು ಹೋಗಿರುವ ಕಾಂಗ್ರೆಸ್ ಹೈಕಮಾಂಡ್, ಕುಮಾರಸ್ವಾಮಿ ಅವರು ವಿಶ್ವಾಸ ಮತ ಗೆಲ್ಲುವವರೆಗೆ ಯಾರೊಬ್ಬರೂ ತಮ್ಮ ಭೇಟಿಗೆ ದೆಹಲಿಗೆ ಬರದಂತೆ ಕಾಂಗ್ರೆಸ್ಸಿಗರಿಗೆ ತಾಕೀತು ಮಾಡಿದೆ. ಈ ಹಿನ್ನೆಲೆಯಲ್ಲಿ ಡಿಸಿಎಂ ಪದವಿಯ ಆಕಾಂಕ್ಷಿಯೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಾ| ಜಿ.ಪರಮೇಶ್ವರ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯಅವರ ಸೋಮವಾರದ ದೆಹಲಿ ಭೇಟಿ ರದ್ದಾಗಿದೆ. 
ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ವರಿಷ್ಠೆ ಸೋನಿಯಾ ಗಾಂಧಿ ಅವರನ್ನು ಆಹ್ವಾನಿಸಲು ಸೋಮವಾರ ದೆಹಲಿಗೆ ತೆರಳಲಿದ್ದು, ಅವರೊಂದಿಗೆ ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಅವರೂ ದೆಹಲಿಗೆ ಹೋಗುವ ಚಿಂತನೆಯಿತ್ತು. ಇದರ ಜತೆಗೆ ಹಲವು ಮಂದಿ ಸಚಿವ ಸ್ಥಾನದ ಆಕಾಂಕ್ಷಿಗಳು ಸಹ ರಾಹುಲ್ ಗಾಂಧಿ ಹಾಗೂ ಹೈಕಮಾಂಡ್‌ನ ಇತರ ವರಿಷ್ಠರ ಭೇಟಿಗೆ ಪ್ರಯತ್ನ ನಡೆಸಿದ್ದರು. 
ಈ ವೇಳೆಗೆ ರಾಜ್ಯ ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನ ಹಾಗೂ ಡಿಸಿಎಂ ಪದವಿಗೆ ನಡೆಯುತ್ತಿರುವ ಲಾಬಿಯ ಬಗ್ಗೆ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರಿಂದ ಮಾಹಿತಿ ಪಡೆದಿದ್ದ ಹೈಕಮಾಂಡ್, ಕುಮಾರಸ್ವಾಮಿ ಬಹುಮತ ಪಡೆಯುವವರೆಗೂ ಯಾರೂ ದೆಹಲಿಗೆ ಬರದಂತೆ ರಾಜ್ಯ ನಾಯಕತ್ವಕ್ಕೆ ಸಂದೇಶ ರವಾನಿಸಿದೆ ಎಂದು ಮೂಲಗಳು ತಿಳಿಸಿವೆ.
 

Follow Us:
Download App:
  • android
  • ios