ರಾಜ್ಯಪಾಲ ವಜುಭಾಯಿ ವಾಲಾ ರಾಜೀನಾಮೆಗೆ ಆಗ್ರಹ
ಕರ್ನಾಟಕ ರಾಜ್ಯಪಾಲ ವಜುಭಾಯಿ ವಾಲಾ ಅವರು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಹಾಗೂ ಸಿಪಿಎಂ ಆಗ್ರಹಿಸಿವೆ.
ನವದೆಹಲಿ (ಮೇ 19) : ಕರ್ನಾಟಕ ರಾಜ್ಯಪಾಲ ವಜುಭಾಯಿ ವಾಲಾ ಅವರು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಹಾಗೂ ಸಿಪಿಎಂ ಆಗ್ರಹಿಸಿವೆ. ಕಾಂಗ್ರೆಸ್-ಜೆಡಿಎಸ್ಗೆ ಬಹುಮತ ಇದೆ ಎಂದು ಗೊತ್ತದ್ದಿರೂ ಬಹುಮತ ಇಲ್ಲದ ಬಿಜೆಪಿಗೆ ವಜುಭಾಯಿ ವಾಲಾ ಅವರು ಸರ್ಕಾರ ರಚನೆಗೆ ಆಹ್ವಾನ ನೀಡಿದ್ದರು.
ಆದರೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶದಿಂದ ಕೊನೆಗೆ ಪ್ರಜಾಪ್ರಭುತ್ವ ಉಳಿಯಿತು ಎಂದು ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಹೇಳಿದ್ದಾರೆ.
ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಪ್ರತಿಕ್ರಿಯಿಸಿ, ‘ವಜುಭಾಯಿ ವಾಲಾ ಅವರು ಅಲ್ಪಸ್ವಲ್ಪ ನಾಚಿಕೆ-ಮಾನ-ಮರ್ಯಾದೆ ಉಳಿಸಿಕೊಂಡಿದ್ದಾರೆ ಎಂದರೆ ಕೂಡಲೇ ರಾಜೀನಾಮೆ ನೀಡಬೇಕು.
ಕರ್ನಾಟಕದಲ್ಲಿ ವಾಸ್ತವ್ಯ ಹೂಡಿ ಕುದುರೆ ವ್ಯಾಪಾರಕ್ಕೆ ಪ್ರಚೋದಿಸಿದ ಕೇಂದ್ರ ಸಚಿವರು ಕೂಡ ಸಮಾನ ಜವಾಬ್ದಾರರು’ ಎಂದು ಆಗ್ರಹಿಸಿದ್ದಾರೆ. ಬಿಜೆಪಿ ಮಿತ್ರಪಕ್ಷ ಶಿವಸೇನೆ ಕೂಡ ವಾಲಾ ರಾಜೀನಾಮೆಗೆ ಆಗ್ರಹಿಸಿದೆ.