ಸ್ಪೀಕರ್ ಯಾರಾಗ್ತಾರೆ?
ಮೈತ್ರಿ ಸರ್ಕಾರದಲ್ಲಿ ವಿಧಾನಸಭೆಯ ಸ್ಪೀಕರ್ ಸ್ಥಾನ ಯಾರ ಪಾಳೆಯಕ್ಕೆ ಸೇರಿದವರಿಗೆ ಸಿಗಬೇಕು ಎಂಬುದೂ ಕಗ್ಗಂಟಾಗುವ ಸಾಧ್ಯತೆಯಿದೆ. ದೊಡ್ಡ ಪಕ್ಷವಾಗಿರುವುದರಿಂದ ಮತ್ತು ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿರುವುದರಿಂದ ಸ್ಪೀಕರ್ ಸ್ಥಾನ ತಮಗೇ ನೀಡಬೇಕು ಎಂಬ ವಾದವನ್ನು ಕಾಂಗ್ರೆಸ್ ಮಂಡಿಸಿದ್ದು, ಭವಿಷ್ಯದ ರಾಜಕೀಯ ಬೆಳವಣಿಗೆಗಳ ದೃಷ್ಟಿಯಿಂದ ಮುಖ್ಯವಾಗಿರುವ ಸ್ಪೀಕರ್ ಸ್ಥಾನ ತಮ್ಮ ವಶದಲ್ಲೇ ಇರುವುದು ಸೂಕ್ತ ಎಂಬ ನಿಲುವನ್ನು ಜೆಡಿಎಸ್ ಹೊಂದಿದೆ. ಹೀಗಾಗಿ ಸ್ಪೀಕರ್ ಯಾವ ಪಕ್ಷದವರು? ಎಂಬುದು ಕುತೂಹಲ ಕೆರಳಿಸಿದೆ.
ಬೆಂಗಳೂರು (ಮೇ. 21): ಮೈತ್ರಿ ಸರ್ಕಾರದಲ್ಲಿ ವಿಧಾನಸಭೆಯ ಸ್ಪೀಕರ್ ಸ್ಥಾನ ಯಾರ ಪಾಳೆಯಕ್ಕೆ ಸೇರಿದವರಿಗೆ ಸಿಗಬೇಕು ಎಂಬುದೂ ಕಗ್ಗಂಟಾಗುವ ಸಾಧ್ಯತೆಯಿದೆ.
ದೊಡ್ಡ ಪಕ್ಷವಾಗಿರುವುದರಿಂದ ಮತ್ತು ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿರುವುದರಿಂದ ಸ್ಪೀಕರ್ ಸ್ಥಾನ ತಮಗೇ ನೀಡಬೇಕು ಎಂಬ ವಾದವನ್ನು ಕಾಂಗ್ರೆಸ್ ಮಂಡಿಸಿದ್ದು, ಭವಿಷ್ಯದ ರಾಜಕೀಯ ಬೆಳವಣಿಗೆಗಳ ದೃಷ್ಟಿಯಿಂದ ಮುಖ್ಯವಾಗಿರುವ ಸ್ಪೀಕರ್ ಸ್ಥಾನ ತಮ್ಮ ವಶದಲ್ಲೇ ಇರುವುದು ಸೂಕ್ತ ಎಂಬ ನಿಲುವನ್ನು ಜೆಡಿಎಸ್ ಹೊಂದಿದೆ. ಹೀಗಾಗಿ ಸ್ಪೀಕರ್ ಯಾವಪಕ್ಷದವರು? ಎಂಬುದು ಕುತೂಹಲ ಕೆರಳಿಸಿದೆ.
ಒಂದು ವೇಳೆ ದೇವೇಗೌಡರು ಸ್ಪೀಕರ್ ಹುದ್ದೆಯನ್ನು ಕಾಂಗ್ರೆಸ್ ಪಕ್ಷಕ್ಕೇ ಬಿಟ್ಟುಕೊಟ್ಟರೂ ತಾವು ಹೇಳಿದವರನ್ನೇ ಮಾಡುವಂತೆ ಪಟ್ಟು ಹಿಡಿಯುವ ಸಾಧ್ಯತೆ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್ ಪಕ್ಷ ತನ್ನ ಪಾಳೆಯದಿಂದ ಮಾಜಿ ಸಚಿವ ಹಾಗೂ ಹಿಂದೆ ಜನತಾದಳ ಸರ್ಕಾರದಲ್ಲಿ ಸ್ಪೀಕರ್ ಹುದ್ದೆ ನಿಭಾಯಿಸಿದ್ದ ರಮೇಶ್ ಕುಮಾರ್ ಅವರನ್ನು ಸ್ಪೀಕರ್ ಆಗಿ ಮಾಡುವ ಉದ್ದೇಶ ಹೊಂದಿದೆ.
ದೇವೇಗೌಡರು ಮಾತ್ರ ರಮೇಶ್ ಕುಮಾರ್ ಅವರನ್ನು ಒಪ್ಪಿಕೊಳ್ಳುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ರಮೇಶ್ ಕುಮಾರ್ ಅವರು ನೇರ ಹಾಗೂ ನಿಷ್ಠುರವಾದಿ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಅನಿವಾರ್ಯ ಸಂದರ್ಭಗಳು ಬಂದರೆ
ಅನನುಕೂಲವಾಗ ಬಹುದು ಎಂಬ ಆತಂಕವಿದೆ.
ರಮೇಶ್ ಕುಮಾರ್ ಅವರನ್ನು ಬಿಟ್ಟರೆ ಕಾಂಗ್ರೆಸ್ ಪಕ್ಷಕ್ಕೆ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಅವರನ್ನು ನೇಮಿಸುವ ಬಗ್ಗೆ ಒಲವಿದೆ. ದೇಶಪಾಂಡೆ ಅವರು ದೇವೇಗೌಡರೊಂದಿಗೆ ಉತ್ತಮ ಸಂಬಂಧ ಹೊಂದಿರುವುದರಿಂದ ಒಪ್ಪಿದರೂ ಒಪ್ಪಬಹುದು ಎಂಬ ನಿರೀಕ್ಷೆಯಿದೆ. ಆದರೆ, ಸ್ವತಃ ದೇಶಪಾಂಡೆ ಅವರಿಗೇ ಸ್ಪೀಕರ್ ಹುದ್ದೆ ಮೇಲೆ ಆಸಕ್ತಿ ಇಲ್ಲ. ಮತ್ತೊಮ್ಮೆ ಸಚಿವರಾಗಿ, ಅದೂ ಭಾರಿ ಕೈಗಾರಿಕಾ ಖಾತೆಯನ್ನೇ ತಮ್ಮದಾಗಿಸಿ ಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಒಟ್ಟಾರೆ ಸ್ಪೀಕರ್ ಹುದ್ದೆ ಯಾರ ಪಾಲಾಗುತ್ತದೆ ಮತ್ತು ಯಾರಾಗುತ್ತಾರೆ ಎಂಬುದು ಜೆಡಿಎಸ್-ಕಾಂಗ್ರೆಸ್ ಹೊಂದಾಣಿಕೆಗೆ ಸವಾಲಾಗಿಯೇ ಪರಿಣಮಿಸುವ ಸಂಭವವಿದೆ.