ಇಷ್ಟು ಕೀಳೂ ಪ್ರಚಾರ ಜೀವನದಲ್ಲಿಯೇ ನೋಡಿಲ್ಲ
ಸದಾ ಸಂಸ್ಕೃತಿ-ಪರಂಪರೆ ಬಗ್ಗೆ ಮಾತನಾಡುವ ಬಿಜೆಪಿ ಘನತೆ-ಗೌರವದಿಂದ ಚುನಾವಣಾ ಪ್ರಚಾರ ನಡೆಸಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಇಷ್ಟು ಕೀಳುಮಟ್ಟದ ಪ್ರಚಾರ ನನ್ನ ರಾಜಕೀಯ ಜೀವನದಲ್ಲಿ ಎಂದೂ ನೋಡಿಲ್ಲ ಎಂದು ಹೇಳಿದ್ದಾರೆ.
ಬೆಂಗಳೂರು : ಸದಾ ಸಂಸ್ಕೃತಿ-ಪರಂಪರೆ ಬಗ್ಗೆ ಮಾತನಾಡುವ ಬಿಜೆಪಿ ಘನತೆ-ಗೌರವದಿಂದ ಚುನಾವಣಾ ಪ್ರಚಾರ ನಡೆಸಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಇಷ್ಟು ಕೀಳುಮಟ್ಟದ ಪ್ರಚಾರ ನನ್ನ ರಾಜಕೀಯ ಜೀವನದಲ್ಲಿ ಎಂದೂ ನೋಡಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾಗರಿಕರ ಭಾಷೆ ಬದಲಿಗೆ ಅಸಂಸದೀಯ ಭಾಷೆ ಬಳಸುತ್ತಿರುವುದು ಜನರಿಗೆ ವಾಕರಿಗೆ ಬರಿಸುತ್ತಿದೆ.
ಒಬ್ಬ ಪ್ರಧಾನಿಯಿಂದ ಇಷ್ಟು ಕೀಳುಮಟ್ಟದ ಮಾತುಗಳನ್ನು ಜನರು ನಿರೀಕ್ಷೆ ಮಾಡಿರಲಿಲ್ಲ. ಇವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಪರಿ. ಪತ್ರಕರ್ತರ ಜೊತೆಗಿನ ಸಂವಾದ ಹಾಗೂ ಟ್ವೀಟರ್ನಲ್ಲಿ ಭಾನುವಾರ ಮೋದಿ ಅವರನ್ನು ಗುರಿಯಾಗಿಸಿ ‘ಸರಣಿ ದಾಳಿ’ ನಡೆಸಿದ ಸಿದ್ದರಾಮಯ್ಯ, 10 ಪರ್ಸೆಂಟ್ ಸರ್ಕಾರ, ಸೀದಾರುಪಯ್ಯ ಸರ್ಕಾರ ಎಂಬೆಲ್ಲಾ ಮಾತು ಆಡಿದ್ದಾರೆ.
ಅವರು ಇದಕ್ಕೆ ಆಧಾರ ಕೊಡಬೇಕು. ಸಿಬಿಐ ಸೇರಿದಂತೆ ಎಲ್ಲಾ ತನಿಖಾ ಸಂಸ್ಥೆಗಳೂ ಅವರ ಅಧೀನದಲ್ಲೇ ಇವೆ. ರಾಜಕೀಯ ಮಾಡುವ ಬದಲು ಸಾಕ್ಷ್ಯ ಕಲೆ ಹಾಕಿ ತನಿಖೆ ನಡೆಸಬೇಕು. ಒಬ್ಬ ಪ್ರಧಾನಿ ಇಷ್ಟು ಕೀಳು ಮಟ್ಟದ ರಾಜಕೀಯ ಮಾಡಬಾರದು. ತಮ್ಮ ಹುದ್ದೆಯ ಘನತೆ ಮರೆತು ಮಾತನಾಡಿದಾಗ ಉತ್ತರ ಕೊಡಬೇಕಾಗುತ್ತದೆ ಎಂಬ ಕಾರಣಕ್ಕೆ ಮಾತ್ರ ನರೇಂದ್ರ ಮೋದಿ ವಿರುದ್ದ ಮಾತನಾಡುತ್ತಿದ್ದೇನೆ ಎಂದು ಹೇಳಿದರು.
ನರೇಂದ್ರ ಮೋದಿ ನನ್ನ ವಿರುದ್ಧ ಆರೋಪ ಮಾಡುತ್ತಾರೆ. ಆರೋಪಕ್ಕೂ ಮೊದಲು, ತಮ್ಮ ಅಭ್ಯರ್ಥಿಗಳನ್ನು ನೋಡಿ ಕೊಳ್ಳಬೇಕು. ನರೇಂದ್ರ ಮೋದಿ ಆಧಾರ್, ಜಿಎಸ್ಟಿ, ಎಫ್ಡಿಐ ಬಗ್ಗೆ ತೆಗೆದುಕೊಂಡ ಯೂ-ಟರ್ನ್ ಜನರಿಗೆ ಗೊತ್ತಿದೆ. ಅಂತಾ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆಯಾದರೂ ಪೆಟ್ರೋಲ್, ಡೀಸೆಲ್, ಎಲ್ಪಿಜಿ ದರ ಹೆಚ್ಚಳ ಮಾಡಿ ಜನರ ಹಣ ಲೂಟಿ ಮಾಡುತ್ತಿದ್ದಾರೆ. ಅಚ್ಛೇ ದಿನ್ ಯಾವಾಗ ಬರುತ್ತದೆ ಎಂದು ಜನ ಪ್ರಶ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು.